ಸಿನಿಮಾ ಸುದ್ದಿ

ಕಿರುತೆರೆ ನಟ ಯಲಹಂಕ ಬಾಲಾಜಿ ನಿಧನ: ಆತ್ಮೀಯ ಗೆಳೆಯನ ಅಗಲಿಕೆಗೆ ಟಿ.ಎನ್ ಸೀತಾರಾಂ ಕಂಬನಿ

Shilpa D

ಬೆಂಗಳೂರು: ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಹಿರಿಯ ನಟ ಯಲಹಂಕ ಬಾಲಾಜಿ ನಿಧನರಾಗಿದ್ಧಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿರಿಯ ನಟ ಬಾಲಾಜಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟ ಬಾಲಾಜಿ  ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಕೊಂಡಿದ್ದರು. ಹಿರಿಯ ಕಲಾವಿದನ ಅಗಲಿಕೆಗೆ ಸ್ಯಾಂಡಲ್​ವುಡ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಇನ್ನೂ ಕಿರುತೆರೆ ನಟ ಯಲಹಂಕ ಬಾಲಾಜಿ ನಿಧನಕ್ಕೆ ನಿರ್ದೇಶಕ ಸೀತಾರಾಮ್ ತಳಗವಾರ ಅವರು, ಫೇಸ್‌ಬುಕ್‌ ಪೋಸ್ಟ್ ಮೂಲಕ ನೋವು ತೋಡಿಕೊಂಡಿದ್ದಾರೆ. ನನ್ನ ಆತ್ಮೀಯ ಗೆಳೆಯ ಯಲಹಂಕ ಬಾಲಾಜಿ ಅಲ್ಪ ಕಾಲದ ಅನಾರೋಗ್ಯದ ನಂತರ ನಿಧನ ಹೊಂದಿದ್ದಾರೆ. ನನ್ನ ಎಲ್ಲಾ ಧಾರಾವಾಹಿ ಗಳಲ್ಲೂ ನಟಿಸಿದ್ದರು. ಮಾಯಾಮೃಗ ದಿಂದ , ಮಗಳು ಜಾನಕಿಯ ವರೆಗೆ..... ಅತ್ಯಂತ ಹೃದಯವಂತ ಗೆಳೆಯ. ಎಲ್ಲ ಕಷ್ಟ ಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ ನಗುತ್ತಾ ಬದುಕಿದ ಗೆಳೆಯ. ಬಾಲಾಜಿ ಇನ್ನಿಲ್ಲ ಎಂದು ನೆನೆಸಿಕೊಂಡರೆ ಅಪಾರ ಸಂಕಟವಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

‘ಮಾಯಾಮೃಗ’, ‘ಮುಕ್ತ ಮುಕ್ತ’, ‘ಮಹಾ ಪರ್ವ’, ‘ಮನ್ವಂತರ’, ‘ಮುಕ್ತ’, ‘ಮಿಂಚು’, ‘ಮಗಳು ಜಾನಕಿ’, ‘ಚಂದಿರ’ ಮುಂತಾದ ಧಾರಾವಾಹಿಗಳಲ್ಲಿ ಯಲಹಂಕ ಬಾಲಾಜಿ ಅಭಿನಯಿಸಿದ್ದರು.

SCROLL FOR NEXT