ಸಿನಿಮಾ ಸುದ್ದಿ

ಹೆಡ್ ಬುಷ್ ಸಿನಿಮಾ ಬೆಂಗಳೂರು ನಗರಕ್ಕೆ ಸಂಬಂಧಿಸಿದ್ದು, ಒಬ್ಬ ವ್ಯಕ್ತಿಯ ಜೀವನವಲ್ಲ!

Ramyashree GN

ನಟ ಧನಂಜಯ್ ಅವರ ಡಾಲಿ ಪಿಕ್ಚರ್ಸ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಎರಡನೇ ಚಿತ್ರ ಹೆಡ್ ಬುಷ್ ಅಕ್ಟೋಬರ್ 21 ಕ್ಕೆ  ತೆರೆಗೆ ಬರಲಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರವು ಬೆಂಗಳೂರು ಮಾಫಿಯಾ ಕುರಿತು ಬರಹಗಾರ ಅಗ್ನಿ ಶ್ರೀಧರ್‌ ಬರೆದಿರುವ 'ಮೈ ಡೇಸ್ ಇನ್ ದಿ ಅಂಡರ್‌ವರ್ಲ್ಡ್: ರೈಸ್' ಅನ್ನು ಆಧರಿಸಿದೆ.

ಚಿತ್ರದಲ್ಲಿ ನಟ ಧನಂಜಯ್ ಎಂಪಿ ಜಯರಾಜ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪಾಯಲ್ ರಜಪೂತ್, ವಿ. ರವಿಚಂದ್ರನ್, ಶ್ರುತಿ ಹರಿಹರನ್, ಸ್ಯಾಂಡಿ ಮಾಸ್ಟರ್, ರಘು ಮುಖರ್ಜಿ ಮತ್ತು ಯೋಗೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೂನ್ಯಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು 70ರ ದಶಕದ ಭೂಗತ ಜಗತ್ತನ್ನು ಪ್ರತಿನಿಧಿಸುತ್ತದೆ.

ಹೆಡ್ ಬುಷ್‌ಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್, 'ಈ ಚಿತ್ರವು ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ಅಲ್ಲ, ಆದರೆ, ಭೂಗತ ಜಗತ್ತಿನ ಸದಸ್ಯರ ಜೀವನವನ್ನು ಮತ್ತು 1974-1978 ರಲ್ಲಿ ನಡೆದ ನಿರ್ದಿಷ್ಟ ಘಟನೆಯನ್ನು ವಿವರಿಸುತ್ತದೆ. ಜಯರಾಜ್ ಬಗ್ಗೆ ಜನರಿಗೆ ತಿಳಿದಿರುವ ಕಾರಣ ಮತ್ತು ಜಯರಾಜ್ ಪಾತ್ರವನ್ನು ಧನಂಜಯ್ ನಿರ್ವಹಿಸುತ್ತಿರುವುದರಿಂದ, ಇದು ಕೇವಲ ಒಬ್ಬ ವ್ಯಕ್ತಿಯ ಬಗ್ಗೆ ಎಂದು ಜನರು ಭಾವಿಸುತ್ತಾರೆ. ಆದರೆ, ಅವರು ಚಿತ್ರದ ಒಂದು ಭಾಗ ಮಾತ್ರ ಎನ್ನುತ್ತಾರೆ.

ಹೆಡ್ ಬುಷ್ ಬೆಂಗಳೂರು ನಗರದ ಕಥೆ ಎನ್ನುವ ಅಗ್ನಿ ಶ್ರೀಧರ್, 'ನಗರಗಳನ್ನು ರಾಜಕೀಯ ನಾಯಕರು ಅಥವಾ ಅಧಿಕಾರಿಗಳು ನಿರ್ಮಿಸುವುದಿಲ್ಲ, ಅದನ್ನು ಸಾಮಾನ್ಯ ಜನರು ನಿರ್ಮಿಸಿದ್ದಾರೆ. ಚಿತ್ರವು ಬೆಂಗಳೂರಿನ ಒಳ್ಳೆಯದು ಮತ್ತು ಕೆಟ್ಟದ್ದನ್ನು ತೋರಿಸುತ್ತದೆ' ಎಂದು ಹೇಳುತ್ತಾರೆ. ಚಿತ್ರದಲ್ಲಿ ಮಾಡಿರುವ ಬದಲಾವಣೆಗಳ ಬಗ್ಗೆ ಕೇಳಿದಾಗ, 'ಇದು ಸೃಜನಶೀಲ ಚಿತ್ರ ಮತ್ತು ಹೆಡ್ ಬುಷ್ ಸಾಕ್ಷ್ಯಚಿತ್ರವಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ಆದಾಗ್ಯೂ, ಚಿತ್ರದ ಅಡಿಪಾಯವು ಸತ್ಯಗಳನ್ನು ಆಧರಿಸಿದೆ ಮತ್ತು ತೋರಿಸಿರುವ ವ್ಯಕ್ತಿತ್ವಗಳು ನಿಜ ಜೀವನದಲ್ಲಿ ಅಸ್ತಿತ್ವದಲ್ಲಿವೆ ಮತ್ತು ಕೆಲವರು ಇನ್ನೂ ಜೀವಂತವಾಗಿದ್ದಾರೆ. ಕೆಲವೆಡೆ ಬದಲಾವಣೆಗಳನ್ನು ಮಾಡಲಾಗಿದೆ.

'ಪ್ರತಿಯೊಬ್ಬರೂ ಸಾಮಾನ್ಯ ಮನುಷ್ಯರು, ಆದರೆ ವಿಭಿನ್ನ ಸಂದರ್ಭಗಳಲ್ಲಿ ಬದುಕುತ್ತಾರೆ. ಹಿಂಸಾಚಾರ ಮತ್ತು ಇತರ ಕಾನೂನುಬಾಹಿರ ವಿಚಾರಗಳಿರುವುದರಿಂದ ಅದನ್ನು ಭೂಗತ ಜಗತ್ತು ಎಂದು ಪರಿಗಣಿಸಲಾಗುತ್ತದೆ. ಭೂಗತ ಜಗತ್ತು ಸಹ ನಮ್ಮ ಮುಂದೆಯೇ ಇದೆ ಎಂದು ನಾನು ನಂಬುತ್ತೇನೆ ಮತ್ತು ಯಾವುದೇ ದೂರದ ಮೂಲೆಯಲ್ಲಿ ಅಲ್ಲ. ನಟ ಮತ್ತು ನಿರ್ಮಾಪಕರಾಗಿ ಧನಂಜಯ್ ಅವರು ತುಂಬಾ ರಿಸ್ಕ್ ತೆಗೆದುಕೊಂಡಿದ್ದಾರೆ ಮತ್ತು ಹೆಡ್ ಬುಷ್‌ಗಾಗಿ ತಮ್ಮ ಜೀವನವನ್ನು ಪಣಕ್ಕಿಟ್ಟಿದ್ದಾರೆ. ಅವರ ಸಲುವಾಗಿ ಈ ಚಿತ್ರ ಯಶಸ್ವಿಯಾಗಲಿ ಎಂದು ಬಯಸುತ್ತೇನೆ' ಎನ್ನುತ್ತಾರೆ.

ಹೆಡ್ ಬುಷ್‌ ಚಿತ್ರಕ್ಕಾಗಿ ಕೇವಲ ಬರಹಗಾರರಾಗಿ ಏಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ನಿರ್ದೇಶಕನಿಗೆ ತುಂಬಾ ಸಮಯ ಮತ್ತು ತಾಳ್ಮೆ ಬೇಕು. ಶೂಟಿಂಗ್ ಕೇವಲ ಒಂದು ಸಣ್ಣ ಪ್ರಕ್ರಿಯೆ. ಪೋಸ್ಟ್-ಪ್ರೊಡಕ್ಷನ್‌ಗೆ ಮತ್ತು ಚಿತ್ರವನ್ನು ಹೊರತರುವಲ್ಲಿ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಆ ಶಕ್ತಿನ್ನು ಸಂಗ್ರಹಿಸಲು ನನಗೆ ಸಾಧ್ಯವಾಗಲಿಲ್ಲ. ಶೂನ್ಯಾ ಅವರು ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದಾರೆ ಮತ್ತು ಅವರ ಕೆಲಸವೇ ದೊಡ್ಡದಾಗಿ ಮಾತನಾಡುತ್ತದೆ' ಎಂದು ಅಗ್ನಿ ಶ್ರೀಧರ್ ಹೇಳುತ್ತಾರೆ.

'ಭಾಷೆಯು ಬರವಣಿಗೆಯಲ್ಲಿ ಮಾತ್ರ ಉತ್ತಮವಾಗಿ ವ್ಯಕ್ತವಾಗುತ್ತದೆ ಮತ್ತು ಅದು ನನಗೆ ಚಲನಚಿತ್ರ ನಿರ್ಮಾಣಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ. ಸಿನಿಮಾ ಮಾಡುವುದು ಇಂದು ದೊಡ್ಡ ಸವಾಲಾಗಿದೆ. ನಾನು ಬರೆಯುವಾಗ, ನಾನು ಒಬ್ಬಂಟಿಯಾಗಿರುತ್ತೇನೆ ಮತ್ತು ಎಲ್ಲವೂ ನನ್ನ ಇತ್ಯರ್ಥದಲ್ಲಿರುತ್ತದೆ. ಆದರೆ, ಸಿನಿಮಾ ನಿರ್ಮಾಣಕ್ಕೆ ಬಂದರೆ ಮಾಡಬೇಕಾದ ಕೆಲಸಗಳು ಬಹಳಷ್ಟಿರುತ್ತವೆ. ಸಿನಿಮಾ ಎಲ್ಲರನ್ನೂ ತಲುಪುತ್ತದೆ. ಸಾಮಾನ್ಯ ವ್ಯಕ್ತಿಯೂ ದೃಶ್ಯ ಮಾಧ್ಯಮದ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು' ಎಂದು ಅವರು ತಿಳಿಸುತ್ತಾರೆ.

SCROLL FOR NEXT