ಸಿನಿಮಾ ಸುದ್ದಿ

ಅಪ್ಪು ಮೊದಲ ವರ್ಷದ ಪುಣ್ಯತಿಥಿ: ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ 

Sumana Upadhyaya

ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ ಅಪ್ಪು(Power star Puneet Rajkumar) ಹಠಾತ್ ಕಣ್ಮರೆಯಾಗಿ, ಗತಿಸಿಹೋಗಿ ಇಂದು ಅಕ್ಟೋಬರ್ 29ಕ್ಕೆ ಒಂದು ವರ್ಷ. ಕಳೆದ ವರ್ಷ ಇದೇ ದಿನ ತೀವ್ರ ಹೃದಯಾಘಾತದಿಂದ ಪುನೀತ್ ನಿಧನ ಹೊಂದಿದಾಗ ಅವರ ಕುಟುಂಬ ಮಾತ್ರವೇಕೆ ಇಡೀ ಕರುನಾಡು ನಲುಗಿಹೋಗಿತ್ತು. ತಮ್ಮ ಮನೆ ಮಗನನ್ನು ಕಳೆದುಕೊಂಡ ದುಃಖ ಕನ್ನಡಿಗರನ್ನು ಕಾಡಿತ್ತು.

ಅಪ್ಪು ‘ಗಂಧದಗುಡಿ’ ತೊರೆದು ಇಂದಿಗೆ 1 ವರ್ಷ. ನೋವು, ಕಣ್ಣೀರು, ಆಕ್ರಂದನದ ಮಧ್ಯೆ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ.  ಇಂದು ಬೆಳಗ್ಗೆ ನಿವಾಸದಿಂದ ಅಪ್ಪು ಇಷ್ಟಪಡುವ ತಿಂಡಿ ತಿನಿಸುಗಳನ್ನು ತಂದು ಕಂಠೀರವ ಸ್ಟುಡಿಯೊದಲ್ಲಿರುವ(Kanteerava studio) ಸಮಾಧಿ ಮುಂದಿಟ್ಟ ರಾಜ್ ಕುಮಾರ್ ಕುಟುಂಬಸ್ಥರು ಕಣ್ಣೀರಿಡುತ್ತಾ ತಮ್ಮ ಮನೆ ಸದಸ್ಯನ ಒಂದು ವರ್ಷದ ತಿಥಿ ಕಾರ್ಯವನ್ನು ನೆರವೇರಿಸಿದರು. ಅಪ್ಪು ಪತ್ನಿ ಅಶ್ವಿನಿಯಂತೂ ಕಣ್ಣೀರು ಹಾಕುತ್ತಲೇ ತಮ್ಮ ಪತಿಯ ಫೋಟೋ ಮುಂದೆ ಪ್ರಾರ್ಥನೆ ಸಲ್ಲಿಸಿದರು.

ಇಂದು ಪೂಜೆಯಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ, ಪುತ್ರಿ ವಂದಿತಾ ಸೇರಿದಂತೆ ಇಡೀ ಕುಟುಂಬ, ಬಂಧು-ಬಳಗದವರು ಭಾಗಿಯಾಗಿದ್ದರು. ಇನ್ನೊಂದೆಡೆ ಅಭಿಮಾನಿಗಳ ದಂಡೇ ಆಗಮಿಸುತ್ತಿದೆ. ಇಂದು ಕಂಠೀರವ ಸ್ಟುಡಿಯೊ ಬಳಿ ಆಗಮಿಸುವವರಿಗೆಲ್ಲ ಊಟೋಪಚಾರದ ವ್ಯವಸ್ಥೆ ಏರ್ಪಡಿಸಲಾಗಿದೆ. 

ಇನ್ನೊಂದೆಡೆ ಕಳೆದ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿಯವರೆಗೆ 24 ಗಂಟೆಗಳ ನಿರಂತರ ಗೀತ ನಮನ ಕಾರ್ಯಕ್ರಮ ಸಮಾಧಿ ಬಳಿ ನಡೆಯುತ್ತಿದೆ.

SCROLL FOR NEXT