ಸಿನಿಮಾ ಸುದ್ದಿ

ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಚಿತ್ರದ ಶೂಟಿಂಗ್ ಶುರು; ಸೆಟ್‌ಗೆ ಶಿವರಾಜಕುಮಾರ್ ಸೇರ್ಪಡೆ!

Ramyashree GN

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ಶಿವರಾಜ್‌ಕುಮಾರ್ ಇದೀಗ, ಅರ್ಜುನ್ ಜನ್ಯ ನಿರ್ದೇಶನದ '45' ಸಿನಿಮಾ ಸೆಟ್‌ನಿಂದ ತಮ್ಮ ಮುಂದಿನ ಭೈರತಿ ರಣಗಲ್ ಸಿನಿಮಾ ಸೆಟ್‌ಗೆ ತೆರಳಿದ್ದಾರೆ. ನರ್ತನ್ ನಿರ್ದೇಶನದ ಆ್ಯಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್‌ನ ಚಿತ್ರೀಕರಣ ಸದ್ಯ ನಡೆಯುತ್ತಿದೆ. 

ಶಿವರಾಜ್‌ಕುಮಾರ್ ಅವರು ಇಂದು ತಮ್ಮ ಭಾಗಗಳ ಚಿತ್ರೀಕರಣವನ್ನು ಆಂಧ್ರ ಪ್ರದೇಶದ ಬಳಿ ಪ್ರಾರಂಭಿಸಲಿದ್ದಾರೆ. ಚಿತ್ರೀಕರಣಕ್ಕಾಗಿ ಅಲ್ಲಿ ಬೃಹತ್ ಸೆಟ್ ಅನ್ನು ನಿರ್ಮಿಸಲಾಗಿದೆ. ಮುಂದಿನ 10 ದಿನಗಳ ಕಾಲ ನಟ ಅಲ್ಲಿಯೇ ಇದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಿವರಾಜಕುಮಾರ್

ಭೈರತಿ ರಣಗಲ್ ಸಿನಿಮಾ ನರ್ತನ್ ಅವರ 'ಮಫ್ತಿ' ಸಿನಿಮಾ ಪ್ರೀಕ್ವೆಲ್ ಆಗಿದ್ದು, ಮಫ್ತಿಯಲ್ಲಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಭೈರತಿ ರಣಗಲ್ ಚಿತ್ರದ ಮೂಲತ ನರ್ತನ್ ಮತ್ತು ಶಿವರಾಜಕುಮಾರ್ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಿದ್ದು, ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಫ್ತಿಯ ಭಾಗವಾಗಿದ್ದ ಚಾಯಾ ಸಿಂಗ್ ಮತ್ತು ಇತರ ಕೆಲವು ನಟರು ಸಹ ಪ್ರಿಕ್ವೆಲ್‌ನಲ್ಲಿ ಇರಲಿದ್ದಾರೆ.

ಗೀತಾ ಪಿಕ್ಚರ್ಸ್ ಬ್ಯಾನರ್ ನಿರ್ಮಾಣದ ಭೈರತಿ ರಣಗಲ್ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಮತ್ತು ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ. ಜೆ ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. 

ಈಮಧ್ಯೆ, ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲೂ ವಿಶೇಷ ಅತಿಥಿ ಪಾತ್ರದಲ್ಲಿ ಶಿವಣ್ಣ ನಟಿಸಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರವು ಆಗಸ್ಟ್ 10 ರಂದು ತೆರೆಗೆ ಬರಲಿದೆ. ಇದರೊಂದಿಗೆ, ನಟ ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್‌ ಸಿನಿಮಾದಲ್ಲೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.

ಇವುಗಳೊಂದಿಗೆ, ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ ಮತ್ತು ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಚಿತ್ರದಲ್ಲೂ ಇದ್ದಾರೆ. ಸದ್ಯ ಈ ಸಿನಿಮಾಗೆ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ.

SCROLL FOR NEXT