ಸಿನಿಮಾ ಸುದ್ದಿ

ಗಾದೆ ಮಾತು ತಂದ ಕುತ್ತು: ನಟ ಉಪೇಂದ್ರ ವಿರುದ್ಧ ಎರಡನೇ ಎಫ್ ಐಆರ್ ದಾಖಲು!

Shilpa D

ಬೆಂಗಳೂರು: ಫೇಸ್​ಬುಕ್ ಲೈವ್​ನಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದ ಉಪೇಂದ್ರ, ಗಾದೆ ಮಾತೊಂದನ್ನು ಹೇಳಿದ್ದರು. ಇದೀಗ ಈ ಮಾತು ಒಂದು ಸಮುದಾಯದವರನ್ನು ಬಡಿದೆಬ್ಬಿಸಿದೆ. ಈ ಸಂಬಂಧ ನಟ- ನಿರ್ದೇಶಕ ಉಪೇಂದ್ರ ವಿರುದ್ಧ ಎರಡನೇ ಎಫ್ ಐ ಆರ್ ದಾಖಲಾಗಿದೆ.

ಕರ್ನಾಟಕ ರಣಧೀರ ಪಡದ ರಾಜ್ಯಾಧ್ಯಕ್ಷ ಬೈರಪ್ಪ ಹರೀಶ್ ಕುಮಾರ್ ಅವರು ಭಾನುವಾರ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಕೇಳದ ಬೈರಪ್ಪ ಹರೀಶ್ ಕುಮಾರ್ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು  ಪಟ್ಟು ಹಿಡಿದಿದ್ದರು.

ಹೀಗಾಗಿ ಹಲಸೂರು ಗೇಟ್ ಪೊಲೀಸರು ಉಪೇಂದ್ರ ವಿರುದ್ದ ಎರಡನೇ ಎಫ್ ಐ ಆರ್ ದಾಖಲಿಸಿದ್ದಾರೆ.  ಅವರ ದೂರಿನ ಆಧಾರದ ಮೇಲೆ ಪೊಲೀಸರು ಉಪೇಂದ್ರ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಮತ್ತು ದ್ವೇಷ  ಭಾಷಣ ಧರ್ಮ ಅಥವಾ ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಧಾರ್ಮಿಕ ಭಾವನೆಯನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯದ ಸಂಬಂಧ ಪ್ರಕರಣ ದಾಖಲಾಗಿದೆ.

ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ್ ಕೆ.ಎನ್ ಅವರು ಚನ್ನಮಮ್ನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ  ದೂರು ನೀಡಿದ ನಂತರ ಉಪೇಂದ್ರ ವಿರುದ್ಧ ದಾಖಲಾದ ಎರಡನೇ ಎಫ್‌ಐಆಆರ್ ಇದಾಗಿದೆ. ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಚ್ಚುಕಟ್ಟು ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಉಪೇಂದ್ರ ವಿರುದ್ಧ ಪ್ರತಿಭಟನೆಗಳು ಶುರುವಾಗಿದೆ. ರಾಮನಗರಲ್ಲಿ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾರೋಹಳ್ಳಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ಉಪೇಂದ್ರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಉಪೇಂದ್ರ ಹೇಳಿಕೆ ಖಂಡಿಸಿ ಸಮತಾ ಸೈನಿಕ ದಳ ಮತ್ತು ದಲಿತ ಪರ ಒಕ್ಕೂಟಗಳು ಆಕ್ರೋಶ ಹೊರಹಾಕಿದೆ.

SCROLL FOR NEXT