ಸಿನಿಮಾ ಸುದ್ದಿ

7 ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ ಚಕ್ರವರ್ತಿ ಚಂದ್ರಚೂಡ್; ಮಿಲಿಂದ್ ಗೌತಮ್ ನಾಯಕ

Ramyashree GN

ಕನ್ನಡದಲ್ಲಿ ಜನ್ಮ ಮತ್ತು ತಮಿಳಿನಲ್ಲಿ ತಂಬಿ ಊರುಕ್ಕು ಪುದುಸು ಮುಂತಾದ ಸಿನಿಮಾಗಳಿಗೆ ಹೆಸರುವಾಸಿಯಾದ ನಿರ್ದೇಶಕ ಮತ್ತು ಬಿಗ್ ಬಾಸ್ ಕನ್ನಡ 8ರ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಏಳು ವರ್ಷಗಳ ವಿರಾಮದ ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಚಂದ್ರಚೂಡ್ ಸದ್ಯ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ II ಗಾಗಿ ಸಂಭಾಷಣೆ ಬರಹಗಾರರಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಬರಹಗಾರರಾಗಿ ಒಂದೆರಡು ಸ್ಕ್ರಿಪ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆ ಅವರು ತಮ್ಮ ಮುಂದಿನ ಚಿತ್ರ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ.

ಚಂದ್ರಚೂಡ್ ಅವರ ಮುಂಬರುವ ಚಿತ್ರದಲ್ಲಿ ಮಿಲಿಂದ್ ಗೌತಮ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಅವರು 'ಅನ್‌ಲಾಕ್ ರಾಘವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಅವರ ಮೊದಲ ಚಿತ್ರವು ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿರುವಾಗಲೇ ಮಿಲಿಂದ್ ಅವರು ಚಂದ್ರಚೂಡ್ ನಿರ್ದೇಶನ ಹೊಸ ಚಿತ್ರಕ್ಕಾಗಿ ಕಳೆದ ಮೂರು ತಿಂಗಳಿನಿಂದಲೇ ಸಿದ್ಧತೆ ನಡೆಸಿದ್ದಾರೆ.

ನಿರ್ದೇಶಕರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಶೀರ್ಷಿಕೆಗೂ ಮುನ್ನ ಅವರು ಮೊದಲು ಟ್ಯಾಗ್‌ಲೈನ್ (ಕಮ್ ಬ್ಯಾಕ್ ಸಿಂಧೂರ ವೀರ ಲಕ್ಷ್ಮಣ ನಾಯಕ) ಅನ್ನು  ಬಹಿರಂಗಪಡಿಸಿದ್ದಾರೆ. ನಟ ಕಿಚ್ಚ ಸುದೀಪ್ ಅವರ ಜನ್ಮದಿನವಾದ ಸೆಪ್ಟೆಂಬರ್ 2ರಂದು ಶೀರ್ಷಿಕೆಯನ್ನು ಅನಾವರಣಗೊಳಿಸಲು ಮತ್ತು ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ದೇಶಕರು ಯೋಜಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರನಿಗೆ ಸಂಬಂಧಿಸಿದ ಟ್ಯಾಗ್‌ಲೈನ್‌ನ ಮಹತ್ವದ ಬಗ್ಗೆ ಕೇಳಿದಾಗ, ಚಿತ್ರವು ಐತಿಹಾಸಿಕ ಸನ್ನಿವೇಶವನ್ನು ಸಮಕಾಲೀನ ಅಂಶಗಳೊಂದಿಗೆ ಸಂಯೋಜಿಸುತ್ತದೆ. ಚಿತ್ರ ಸೆಟ್ಟೇರುವ ಸಂದರ್ಭದಲ್ಲಿ ನಾನು ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತೇನೆ ಎಂದು ಚಂದ್ರಚೂಡ್ ಹೇಳುತ್ತಾರೆ. 

ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಅನ್‌ಲಾಕ್ ರಾಘವ' ಚಿತ್ರದ ನಿರ್ಮಾಪಕ ಮಂಜುನಾಥ್ ಡಿ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ.

SCROLL FOR NEXT