ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಸಿನಿಮಾದ ರೀನಾ ಪಾತ್ರದಿಂದ ಮನೆಮಾತಾದ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗುತ್ತಿದ್ದಾರೆ. ಕಿಚ್ಚ ಸುದೀಪ್ ಅವರ 47ನೇ ಸಿನಿಮಾಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
“ನನ್ನ ಹೊಸ ಹೆಜ್ಜೆಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ನಾನು ಕಿಚ್ಚ ಸುದೀಪ್ ಅವರ ಜತೆ ತೆರೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಇಂತಹ ಅದ್ಭುತ ಅವಕಾಶ ನೀಡಿದ ಸತ್ಯ ಜ್ಯೋತಿ ಹಾಗೂ ಚೇರನ್ ಅವರಿಗೆ ಧನ್ಯವಾದಗಳು” ಎಂದು ಶ್ರೀನಿಧಿಯವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ಅಕ್ಟೋಬರ್ 21ರಂದು ಅವರ ಜನ್ಮದಿನ. ನಿನ್ನೆಯೇ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ತಮಿಳಿನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಪಿಕ್ಚರ್ಸ್, ಕಿಚ್ಚ ಸುದೀಪ್ ಅವರ 47ನೇ ಚಿತ್ರ ನಿರ್ಮಿಸುತ್ತಿದ್ದು, ಇದೀಗ ನಾಯಕಿಯನ್ನು ಘೋಷಣೆ ಮಾಡುವ ಮೂಲಕ ಶ್ರೀನಿಧಿ ಅವರನ್ನು ತಂಡಕ್ಕೆ ನಿರ್ಮಾಣ ಸಂಸ್ಥೆ ಸ್ವಾಗತಿಸಿದೆ. ಕಿಚ್ಚನ 47ನೇ ಚಿತ್ರವನ್ನು ಚೇರನ್ ನಿರ್ದೇಶನ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತಯಾರಾಗುತ್ತಿದೆ.