ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಬಿಡುಗಡೆ ಬೆನ್ನಲ್ಲೇ ನಟ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಮತ್ತೊಂದು ಸುತ್ತಿನ ಫ್ಯಾನ್ಸ್ ವಾರ್ ಆರಂಭವಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಮತ್ತೆ ನಟ ದರ್ಶನ್, ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ಕೋಲ್ಡ್ ವಾರ್ ಶುರುವಾಗಿದ್ದು, ಇತ್ತೀಚೆಗೆ ತೆರೆಕಂಡ ಕಿಚ್ಚಾ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಕುರಿತಾಗಿ ಹೊಸ ಫ್ಯಾನ್ಸ್ ವಾರ್ ಭುಗಿಲೆದ್ದಿದೆ.
ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಡುತ್ತಿದ್ದು, ಸುದೀಪ್ ಅಭಿಮಾನಿಗಳು ಭರ್ಜರಿಯಾಗಿಯೇ ಚಿತ್ರವನ್ನು ಸ್ವೀಕರಿಸಿದ್ದಾರೆ. ಇನ್ನು ತೆರೆಕಂಡ 2 ದಿನಗಳಲ್ಲೇ ಮ್ಯಾಕ್ಸ್ ಚಿತ್ರ ಬಹುತೇಕ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಇದೇ ಖುಷಿಯಲ್ಲಿ ಸುದೀಪ್ ಆಪ್ತರು ನೀಡಿದ್ದ ಪಾರ್ಟಿ ಇದೀಗ ವಿವಾದಕ್ಕೆ ಕಾರಣವಾಗಿದೆ.
ಇಷ್ಟಕ್ಕೂ ಪಾರ್ಟಿ ವಿವಾದವಾಗಿದ್ದೇಕೆ?
ಮ್ಯಾಕ್ಸ್ ಚಿತ್ರದ ಸಕ್ಸಸ್ ಹಿನ್ನಲೆಯಲ್ಲಿ ಸುದೀಪ್ ಆಪ್ತ ಬಳಗದ ಗೆಳೆಯರು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಸಕ್ಸಸ್ ಖುಷಿಗಾಗಿ ಕೇಕ್ ಅನ್ನು ಕೂಡ ಕತ್ತರಿಸಲಾಗಿತ್ತು. ಆದರೆ ಇದೇ ಕೇಕ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಕೇಕ್ ಮೂಲಕ ಮ್ಯಾಕ್ಸ್ ಚಿತ್ರತಂಡದ ಸಂಭ್ರಮದಲ್ಲಿ ಪರೋಕ್ಷವಾಗಿ ದರ್ಶನ್ಗೆ ಟಾಂಗ್ ಕೊಡಲಾಗುತ್ತಿದೆ ಅನ್ನೋ ಚರ್ಚೆ ಶುರುವಾಗಿದೆ.
BOSSism ಕಾಲ ಮುಗಿತು
ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ಮ್ಯಾಕ್ಸ್ ಚಿತ್ರತಂಡ ಸೆಲೆಬ್ರೇಷನ್ಗಾಗಿ ಕೇಕ್ ಕಟ್ ಮಾಡಿತ್ತು. ಈ ವೇಳೆ ಕೇಕ್ ಮೇಲೆ ಒಂದು ಸಾಲು ಬರೆಯಲಾಗಿದ್ದು, 'ಬಾಸಿಸಂ ಕಾಲ ಮುಗಿತು… ಮ್ಯಾಕ್ಸ್ ಮ್ಯಾಕ್ಸಿಸಂ' ಎಂದು ಬರೆಸಿ ಮ್ಯಾಕ್ಸ್ ಚಿತ್ರ ತಂಡ ಸಂಭ್ರಮಿಸಿತ್ತು. ಈ ಸಾಲುಗಳೇ ಇದೀಗ ದರ್ಶನ್ ಮತ್ತು ಕಿಚ್ಚಾ ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಗೆ ಕಾರಣವಾಗಿದೆ. ಈ ಸಾಲುಗಳನ್ನು ನೋಡಿದ ಫ್ಯಾನ್ಸ್ ಬಾಸಿಸಂ ಕಾಲ ಮುಗಿತು ಅನ್ನೋದನ್ನ ನಟ ದರ್ಶನ್ಗೆ ಉಲ್ಲೇಖಿಸಲಾಗಿದೆ ಎಂದು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ಬರೆಸಿ ಟಾಂಗ್ ಕೊಡಲಾಗಿದೆ ಎನ್ನುತ್ತಿದ್ದಾರೆ.
ಸುದೀಪ್ ಆಪ್ತ ನಟ ಪ್ರದೀಪ್ ಸ್ಪಷ್ಟನೆ!
ಇನ್ನ ಈ ಕೇಕ್ ವಿಚಾರ ವೈರಲ್ ಆಗುತ್ತಲೇ ಈ ಕುರಿತು ಕಿಚ್ಚಾ ಸುದೀಪ್ ಆಪ್ತ ನಟ ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಟ ಪ್ರದೀಪ್, 'ಬಾಸಿಸಂ ಕಾಲ ಮುಗಿತು ಅನ್ನೋ ಪದ ಕೇಕ್ ಮೇಲೆ ಬರೆಸಿದ್ದು ನಾನೇ. ಆದರೆ ಯಾವ ನಟನಿಗೂ ಟಾಂಗ್ ಕೊಟ್ಟಿದ್ದಲ್ಲ. ಇದು ಮ್ಯಾಕ್ಸ್ ಸಿನಿಮಾದ ಹಾಡಿನ ಸಾಲು. ಬಾಸ್ ಅನ್ನೋದು ಯಾವೊಬ್ಬ ನಟನಿಗೆ ಮೀಸಲಾಗಿಲ್ಲ. ಪ್ರತಿಯೊಬ್ಬ ನಟನಿಗೂ ಸಪರೇಟ್ ಅಭಿಮಾನಿಗಳು ಇದ್ದಾರೆ.
ಅವರಿಗೆ ಇಷ್ಟ ಬಂದಂತೆ ಅವರು ಸಂಭ್ರಮಿಸುತ್ತಾರೆ. ಬಾಸ್ ಅನ್ನೋದು ಯಾವ ಒಬ್ಬ ನಾಯಕ ನಟನಿಗೆ ಸೀಮಿತವಲ್ಲ. ಅಭಿಮಾನಿಗಳು ತಮ್ಮ ನಾಯಕ ನಟನನ್ನ ಹೇಗೆ ಬೇಕಾದರೂ ಕರೆಯಬಹುದು. ಅನಾವಶ್ಯಕವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.