ಸದ್ಯದ ಪ್ರಾಕೃತಿಕ ವಿದ್ಯಮಾನಗಳನ್ನು ತೆರೆಮೇಲೆ ತರುವ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ಎಂಥಾ ಕಥೆ ಮಾರಾಯ' ಸಿನಿಮಾ ನೇರವಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಇದೀಗ ಏರ್ಟೆಲ್ ಎಕ್ಸ್ಟ್ರೀಮ್, ಹಂಗಾಮಾ ಪ್ಲೇ, ಒಟಿಟಿ ಪ್ಲೇ ಮುಂತಾದ ವೇದಿಕೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಚೆನ್ನೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಿನಿಮಾ ಬೆಂಗಳೂರಿನ ಪ್ರಸಕ್ತ ನೀರಿನ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ ಮತ್ತು ಜಾಗತಿಕ ತಾಪಮಾನದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದೆ.
ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರು ತಾವೇ ಬರೆದಿರುವ ‘ಕಾಡಿನ ನೆಂಟರು‘ ಕಥಾಸಂಕಲನವನ್ನು ಆಧರಿಸಿ ಎಂಥಾ ಕಥೆ ಮಾರಾಯ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಎಂಥಾ ಕಥೆ ಮಾರಾಯ ಚಿತ್ರದ ಮಹತ್ವದ ಅಂಶವೆಂದರೆ ಕುಡಿಯುವ ನೀರು ಮತ್ತು ಇತರ ಯೋಜನೆಗಳಿಗಾಗಿ ಪಶ್ಚಿಮ ಘಟ್ಟಗಳಂತಹ ಕಾಡುಗಳನ್ನು ನಾಶಪಡಿಸುವ ಯೋಜನೆಗಳ ಚಿತ್ರಣವಾಗಿದೆ. ಚಿತ್ರದಲ್ಲಿ ಪಾತ್ರಗಳು ಮತ್ತು ದೃಶ್ಯಗಳ ಮೂಲಕ ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸುವ ಘಟನೆಗಳಿಗೆ ಪ್ರೇಕ್ಷಕರನ್ನು ಸಾಗಿಸಲಾಗುತ್ತದೆ.
ಸಂಚಲನ ಮೂವೀಸ್ ಬ್ಯಾನರ್ ಅಡಿಯಲ್ಲಿ ರಾಮಕೃಷ್ಣ ನಿಗಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಧೀರ್ ಎಸ್ ಜೆ, ವೇದಾಂತ್ ಸುಬ್ರಹ್ಮಣ್ಯ, ಸಮೀರ್ ನಗರ್, ಶ್ರೀಪ್ರಿಯಾ, ಅಶ್ವಿನ್ ಹಾಸನ್, ಕರಿಸುಬ್ಬು ಮತ್ತು ಕೇಶವ ಗುತ್ತಲಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣ ಮತ್ತು ಹೇಮಂತ್ ಜೋಯಿಸ್ ಅವರ ಸಂಗೀತ ಸಂಯೋಜನೆಯಿದೆ.