ಹೈದರಾಬಾದ್: ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಟಿ ಪವಿತ್ರಾ ಜಯರಾಮ್ ಸಾವಿನ ಬೆನ್ನಲ್ಲೇ ಅವರ ಗೆಳೆಯ ಚಂದು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂದು ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ ಜೊತೆಗಿದ್ದ ಗೆಳೆಯ ಚಂದು ಇಂದು ಹೈದರಾಬಾದ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಪವಿತ್ರಾ ಜಯರಾಮ್ ಜೊತೆ ಚಂದು ಆಪ್ತವಾಗಿದ್ದರು. ಪವಿತ್ರಾ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಚಂದು ಅವರು ಹೈದರಾಬಾದ್ನಲ್ಲಿ ಆತ್ಮಹತ್ಯೆ (Chandu Suicide) ಮಾಡಿದ್ದಾರೆ.
ತೆಲುಗಿನ ಹಲವು ಧಾರಾವಾಹಿಗಳಲ್ಲಿ ಚಂದು ನಟಿಸುತ್ತಿದ್ದು, ಕೆಲ ಧಾರಾವಾಹಿಗಳಲ್ಲಿ ಚಂದು ಕೂಡ ಪವಿತ್ರಾರೊಂದಿಗೆ ನಟಿಸಿದ್ದರು. ಪವಿತ್ರಾ ಸಾವಿನ ಬಳಿಕ ಹೈದರಾಬಾದ್ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. 2015ರಲ್ಲಿ ಶಿಲ್ಪಾಳನ್ನು ಪ್ರೀತಿಸಿ ಚಂದು ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಟಿ ಪವಿತ್ರಾ ಜಯರಾಮ್ ಅವರ ಸಾವಿನಿಂದ ಮನನೊಂದು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೈದರಾಬಾದ್ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದ ನಟಿ ಪವಿತ್ರ
ಇನ್ನು ಮೂಲಗಳ ಪ್ರಕಾರ ಚಂದು ಆತ್ಮಹತ್ಯೆಗೂ ಮುನ್ನ ಪವಿತ್ರಾ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದಾರೆ... ಹೋಗುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದರು. ರಸ್ತೆ ಅಪಘಾತಕ್ಕೂ ಮುನ್ನ ನಟಿ ಪವಿತ್ರ ತಮ್ಮ ಜನ್ಮದಿನಾಚರಣೆಗೆ ಚಂದು ಅವರನ್ನು ಆಹ್ವಾನಿಸಿದ್ದರು ಎನ್ನಲಾಗಿದೆ.
2 ದಿನ ಕಾಯಿ ಎಂದಿದ್ದ ಚಂದು
ಇನ್ನು ಮತ್ತೊಂದು ಪೋಸ್ಟ್ ನಲ್ಲಿ ಇದೇ ಚಂದ್ರು.. ದಯವಿಟ್ಟು 2 ದಿನ ಕಾಯಿ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರ ಸ್ನೇಹಿತರು ಮತ್ತು ಫಾಲೋವರ್ ಗಳು ಚಂದು ನಿಮ್ಮ ಯೋಚನೆಗಳು ಬೇರೆ ದಾರಿ ಹಿಡಿಯುತ್ತಿರುವಂತಿದೆ. ಧೈರ್ಯವಾಗಿರಿ ಎಂದು ತಿಳಿ ಹೇಳಿದ್ದಾರೆ. ಆದರೆ ಅಷ್ಟರಲ್ಲಾಗಲೇ ಚಂದು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇತ್ತೀಚೆಗೆ ಅವರು ಪವಿತ್ರಾ ಜಯರಾಮ್ ಜೊತೆ ಬೆಂಗಳೂರಿಗೆ ಬಂದಿದ್ದರು. ಸಿನಿಮಾವೊಂದಕ್ಕೆ ಸಹಿ ಮಾಡಿದ ಬಳಿಕ ಅವರು ಪುನಃ ಹೈದರಾಬಾದ್ಗೆ ಹಿಂದಿರುಗುವಾಗ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಚಂದುಗೆ ಪೆಟ್ಟಾಗಿತ್ತು. ಅದನ್ನು ನೋಡಿ ಗಾಬರಿಗೊಂಡ ಪವಿತ್ರಾ ಅವರ ಉಸಿರು ನಿಂತುಹೋಗಿತ್ತು. ಆ ದುರಂತದ ನೆನಪು ಮಾಸುವುದಕ್ಕೂ ಮುನ್ನವೇ ಚಂದು ನಿಧನರಾಗಿದ್ದಾರೆ.