ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೀವನಾಧಾರಿತ ಚಿತ್ರವಾದ ಲೀಡರ್ ರಾಮಯ್ಯ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸೈಟುಗಳ ವಿವಾದದಲ್ಲಿ ಸಿದ್ದರಾಮಯ್ಯನವರು ಸಿಲುಕಿದ್ದು, ಆ ವಿಚಾರದಲ್ಲೀಗ ಕೇಂದ್ರದ ಜಾರಿ ನಿರ್ದೇಶನಾಲಯ ಕೂಡ ಕೇಸ್ ದಾಖಲಿಸಿದೆ.
ಕೇಂದ್ರೀಯ ತನಿಖಾ ತನಿಖಾ ಸಂಸ್ಥೆಯೊಂದು ಈ ಕೇಸ್ ನಲ್ಲಿ ಕಾಲಿಟ್ಟಿರುವುದರಿಂದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಚಿತ್ರೀಕರಣ ನಿಲುಗಡೆಗೆ ಚಿತ್ರದಲ್ಲಿ ಸಿದ್ದರಾಮಯ್ಯನವರ ಪಾತ್ರ ಮಾಡುತ್ತಿರುವ ತಮಿಳು ನಟ ವಿಜಯ್ ಸೇತುಪತಿಯವರ ಡೇಟ್ಸ್ ಸಮಸ್ಯೆಯೂ ಕಾರಣವಾಗಿದೆ ಎಂದು ಹೇಳಲಾಗಿದೆ. ಸೇತುಪತಿಯವರು ಸದ್ಯಕ್ಕೆ ಹಲವಾರು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಹಿಂದಿಯಲ್ಲೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.
ಖ್ಯಾತ ತಮಿಳು ನಟ ವಿಜಯ ಸೇತುಪತಿ ನಟನೆಯ ಲೀಡರ್ ರಾಮಯ್ಯ ಸಿನಿಮಾವನ್ನು ಬೆಂಗಳೂರು ಮೂಲದ ನಿರ್ದೇಶಕ ಸತ್ಯರತ್ನಂ, ಗಂಗಾವತಿ ಮೂಲದ ಹಯ್ಯಾತ್ ಫಿರ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಮೈಸೂರು ಭಾಗದಲ್ಲಿ ಸಿಎಂ ಬಾಲ್ಯ ಹಾಗೂ ಶಿಕ್ಷಣ ಸೇರಿ ಹಲವು ಸನ್ನಿವೇಶಗಳ ಶೂಟಿಂಗ್ ಪೂರ್ಣವಾಗಿತ್ತು. ಮೂಡಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಎರಡನೆ ಭಾಗದ ಸನ್ನಿವೇಶಗಳ ಚಿತ್ರಿಕರಣಕ್ಕೆ ಚಿತ್ರ ತಂಡ ಬ್ರೇಕ್ ಹಾಕಿ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದೆ, ಸದ್ಯಕ್ಕೆ ಶೂಟಿಂಗ್ ನಿಲ್ಲಿಸಿದೆ.