ನವದೆಹಲಿ: 'ಕೆಜಿಎಫ್: ಚಾಪ್ಟರ್ 2’ ಮತ್ತು ‘ಕಾಂತಾರ’ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದ್ದು, ಇದರ ಬೆನ್ನಲ್ಲೇ ನಿರ್ಮಾಪಕ ವಿಜಯ್ ಕಿರಗಂದೂರು ಕೆಜಿಎಫ್-3 ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಹೌದು.. 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಕನ್ನಡದ ಹಲವು ಸಿನಿಮಾಗಳು ಪ್ರಶಸ್ತಿಗೆ ಭಾಜನವಾಗಿವೆ.
ಈ ಪೈಕಿ ಹೊಂಬಾಳೆ ಸಂಸ್ಥೆ ನಿರ್ಮಿಸಿದ್ದ ಕೆಜಿಎಫ್-2 ಮತ್ತು ಕಾಂತಾರ ಚಿತ್ರಗಳಿಗೆ ಪ್ರಶಸ್ತಿ ಒಲಿದುಬಂದಿದೆ. ಈ ಎರಡು ಚಿತ್ರಗಳಿಂದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಒಟ್ಟು 4 ಪ್ರಶಸ್ತಿಗಳು ಸಿಕ್ಕಂತಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಖುಷಿ ಹಂಚಿಕೊಂಡ ನಿರ್ಮಾಪಕ ವಿಜಯ್ ಕಿರಗಂದೂರು, ‘ಕೆಜಿಎಫ್ 2 ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಬಂದಿರುವುದಕ್ಕೆ ತುಂಬ ಸಂತಸ ಆಗುತ್ತಿದೆ. ಅದೇ ಸಿನಿಮಾಗೆ ಕೆಲಸ ಮಾಡಿದ ಸಾಹಸ ನಿರ್ದೇಶಕರಿಗೂ ಪ್ರಶಸ್ತಿ ಬಂದಿದೆ.
ಅದೇ ರೀತಿ ‘ಕಾಂತಾರ’ ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಪ್ರಶಸ್ತಿ ಪಡೆದಿದೆ. ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಹೀಗೆ ಒಂದೇ ವರ್ಷದಲ್ಲಿ ನಮ್ಮ ಎರಡು ಸಿನಿಮಾಗಳಿಂದ 4 ಅವಾರ್ಡ್ ಸಿಕ್ಕಿದ್ದಕ್ಕೆ ಬಹಳ ಸಂತೋಷ ಆಗುತ್ತಿದೆ’ ಎಂದರು.
‘ಕಾಂತಾರ ಮತ್ತು ಕೆಜಿಎಫ್ 2 ಚಿತ್ರತಂಡದ ಎಲ್ಲರಿಗೂ ಇಲ್ಲಿಂದಲೇ ನಾನು ಸಂತಸ ಹಂಚಲು ಇಷ್ಟಪಡುತ್ತೇನೆ. ಈ ಸಿನಿಮಾಗಳನ್ನು ಪ್ರೋತ್ಸಾಹಿಸಿದ ಕನ್ನಡಿಗರು ಮತ್ತು ಇಡೀ ಭಾರತದ ಪ್ರೇಕ್ಷಕರಿಗೆ ನಾನು ಕೃತಜ್ಞತೆ ಸಲ್ಲಿಸಿತ್ತೇನೆ. ರಾಷ್ಟ್ರ ಪಶಸ್ತಿ ಪಡೆದ ಎಲ್ಲ ಕನ್ನಡಿಗರಿಗೂ ಅಭಿನಂದನೆಗಳು’ ಎಂದು ಹೇಳಿದರು.
ಖುಷಿ ಸಂದರ್ಭದಲ್ಲಿ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ
ಇದೇ ವೇಳೆ ಕೆಜಿಎಫ್-3 ಬಗ್ಗೆಯೂ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, '‘ಇನ್ನೇನು 4-5 ತಿಂಗಳಲ್ಲಿ ‘ಕೆಜಿಎಫ್: ಚಾಪ್ಟರ್ 3’ ಚಿತ್ರದ ಬಗ್ಗೆ ಅಪ್ಡೇಟ್ ನೀಡುತ್ತೇವೆ. ‘ಕಾಂತಾರ 2’ ಸಿನಿಮಾಗೆ ತುಂಬ ಚೆನ್ನಾಗಿ ಶೂಟಿಂಗ್ ಆಗುತ್ತಿದೆ. ರಿಷಬ್ ಅವರು ನಟನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಇಡೀ ತಂಡ ಕುಂದಾಪುರದಲ್ಲಿ ಕಷ್ಟಪಡುತ್ತಿದೆ. ಮುಂದಿನ ಆಗಸ್ಟ್ನಲ್ಲಿ ನೀವು ಕಾಂತಾರ-2 ಸಿನಿಮಾವನ್ನು ನಿರೀಕ್ಷಿಸಬಹುದು’ ಎಂದು ಹೇಳಿದರು.