ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ನವೆಂಬರ್ 8ರಂದು ರೀ ರಿಲೀಸ್ ಆಗುತ್ತಿದೆ. 16 ವರ್ಷಗಳ ಬಳಿಕ ಸಿನಿಮಾ ಮತ್ತೆ ತೆರೆ ಕಾಣುತ್ತಿದೆ.
‘ನವಗ್ರಹ’ ಸಿನಿಮಾವನ್ನು ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಜೊತೆ ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.
2008ರ ನವೆಂಬರ್ 7ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ವರ್ಷ ನವೆಂಬರ್ 8ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ.
ಇನ್ನು ಸಿನಿಮಾದ ಪೋಸ್ಟರ್'ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದಿನಕರ್ ತೂಗುದೀಪ, ನನ್ನ ನಿರ್ದೇಶನದ 2ನೇ ಚಿತ್ರ - 'ನವಗ್ರಹ', ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆ ಆಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8 ರಂದು ಮರು ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ ಎಂದು ಬರೆದಿದ್ದಾರೆ.
9 ಕಳ್ಳರು ಮೈಸೂರಿನ ಚಿನ್ನದ ಅಂಬಾರಿಯನ್ನು ಕದಿಯಲು ಪ್ರಯತ್ನಿಸುವ ಥ್ರಿಲ್ಲರ್ ಕಥೆಯನ್ನು ‘ನವಗ್ರಹ’ ಸಿನಿಮಾ ಒಳಗೊಂಡಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುತ್ತಿರುವ ಧರ್ಮ ಕೀರ್ತಿರಾಜ್ ಅವರು ಈ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇಂದಿಗೂ ಜನರ ಇಷ್ಟದ ಲಿಸ್ಟ್ನಲ್ಲಿದ್ದು, ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತವಿದೆ.
ಪ್ರಸ್ತುತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರಿದ್ದು, ಇದರಿಂದಾಗಿ ‘ಡೆವಿಲ್: ದ ಹೀರೋ’ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಹಾಗಾಗಿ ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಾಗಿ ದರ್ಶನ್ ಅಭಿನಯದ ಹಿಟ್ ಸಿನಿಮಾಗಳನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಕರಿಯಾ, ಶಾಸ್ತ್ರಿ, ರಾಬರ್ಟ್, ಪೊರ್ಕಿ ಚಿತ್ರಗಳನ್ನು ರೀ ರಿಲೀಸ್ ಮಾಡಲಾಗಿದ್ದು, ನನ್ನ ಪ್ರೀತಿಯ ರಾಮು ನವೆಂಬರ್ 1 ರಂದು ಮರು ಬಿಡುಗಡೆಯಾಗುತ್ತಿದೆ. ಇದರ ಬಳಿಕ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಐರಾವತಿ ಚಿತ್ರಗಳನ್ನು ರಿ ರಿಲೀಸ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ.