ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾದ ನಟ ದರ್ಶನ್ ಗೆ ಷರತ್ತುಬದ್ಧ ಜಾಮೀನು ಸಿಕ್ಕಿ ಬಿಡುಗಡೆಯಾಗಿ ಈಗ ಡೆವಿಲ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಈ ಮಧ್ಯೆ ಕಳೆದ 10 ತಿಂಗಳಿಂದ ಮಾಧ್ಯಮಗಳಿಂದ ದೂರವಿದ್ದ ದರ್ಶನ್ ನಿನ್ನೆ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ತನ್ನ ಸ್ನೇಹಿತ, ನಟ ಧನ್ವೀರ್ ಅಭಿನಯದ ಇಂದು ತೆರೆಕಂಡ ವಾಮನ ಸಿನಿಮಾ ವೀಕ್ಷಿಸಿದ್ದಾರೆ.
ಸಿನಿಮಾ ವೀಕ್ಷಿಸಿದ ಬಳಿಕ ದರ್ಶನ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಧನ್ವೀರ್ ನಟನೆಯಲ್ಲಿ ಪಕ್ವತೆ ಕಾಣುತ್ತಿದೆ. 'ವಾಮನ' ಸಿನಿಮಾ ಬಹಳ ಚೆನ್ನಾಗಿದೆ. ಟ್ರೈಲರ್ ನೀಡಿದರೆ ಬರೀ ಆಕ್ಷನ್ ಎನಿಸುತ್ತದೆ. ಆದರೆ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇದೆ. ಆಕ್ಷನ್ ಸನ್ನಿವೇಶಗಳಲ್ಲಿ ಧನ್ವೀರ್ ಪರ್ಫಾರ್ಮನ್ಸ್ ಚೆನ್ನಾಗಿದೆ.
ವಾಮನ ಬಲಿ ಚಕ್ರವರ್ತಿಯ ಬಳಿ ಬಂದು ಮೂರು ಹೆಜ್ಜೆಗಳನ್ನಿಡಲು ಜಾಗ ಕೇಳುತ್ತಾನೆ. ಅದೇ ರೀತಿ ಧನ್ವೀರ್ ಕನ್ನಡ ಪ್ರೇಕ್ಷಕರ ಬಳಿ ಈ ಸಿನಿಮಾ ಗೆಲುವನ್ನು ಕೇಳುತ್ತಿದ್ದಾರೆ, ಅವರನ್ನು ಹರಸಿ ಹಾರೈಸಿ ಬೆಳೆಯಲು ಅವಕಾಶ ಕೊಡಿ ಎಂದು ಕೇಳಿಕೊಂಡರು.
ನಾವು ಮಾಡುತ್ತಿರುವುದು ಕನ್ನಡ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕರ್ನಾಟಕ ಜನತೆಗೆ ಇಲ್ಲಿರುವ ಪ್ರೇಕ್ಷಕರಿಗಾಗಿ ಸಿನಿಮಾ ಮಾಡ್ತೀವಿ. ಒಳ್ಳೆ ನಿರ್ದೇಶಕರು, ಒಳ್ಳೆ ಕಥೆ ಸಿಕ್ಕರೆ ಖಂಡಿತ ಧನ್ವೀರ್ ಜೊತೆ ನಟಿಸುತ್ತೇನೆ ಎಂದರು.
ಪ್ರಕರಣದ ಸಾಕ್ಷಿ ಚಿಕ್ಕಣ್ಣ ಭಾಗಿ
ಇನ್ನು ನಿನ್ನೆ ದರ್ಶನ್, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿ ನಟ ಚಿಕ್ಕಣ್ಣ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿ ಆಗಿರುವ ಚಿಕ್ಕಣ್ಣನ ಜೊತೆಗೆ ದರ್ಶನ್ ಕಾಣಿಸಿಕೊಂಡು ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದು, ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ. ಜಾಮೀನು ಪಡೆದು ಹೊರಬಂದ ಆರೋಪಿಗಳು ಪ್ರಕರಣದ ಸಾಕ್ಷಿಗಳನ್ನು ಭೇಟಿ ಮಾಡುವಂತಿಲ್ಲ. ಆರೋಪಿ ಸಾಕ್ಷಿಯ ಮೇಲೆ ಪ್ರಭಾವ ಬೀರಬಹುದು ಎನ್ನುವ ಕಾರಣಕ್ಕೆ ಈ ನಿಯಮ ಇದೆ.
ರೇಣುಕಾಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಪಟ್ಟಣಗೆರೆ ಶೆಡ್ಗೆ ಹೋಗುವ ಮುನ್ನ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯನಟ ಚಿಕ್ಕಣ್ಣ ಕೂಡ ಭಾಗಿ ಆಗಿದ್ದರು. ಹಾಗಾಗಿ ಅವರನ್ನು ಸಾಕ್ಷಿ ಆಗಿ ಪರಿಗಣಿಸಿ ನೋಟಿಸ್ ನೀಡಿ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಆಗಸ್ಟ್ನಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಚಿಕ್ಕಣ್ಣ ಭೇಟಿ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಅನಾರೋಗ್ಯ ಕಾರಣ ನೀಡಿ ಮೊನ್ನೆ ಕೋರ್ಟ್ ಗೆ ವಿಚಾರಣೆಗೆ ಗೈರಾಗಿದ್ದ ದರ್ಶನ್ ವಿರುದ್ಧ ನ್ಯಾಯಾಧೀಶರು ಗರಂ ಆಗಿದ್ದರು ಎಂದು ಸುದ್ದಿಯಾಗಿತ್ತು. ಇದೀಗ ದರ್ಶನ್ ಜೊತೆ ಚಿಕ್ಕಣ್ಣ ಕಾಣಿಸಿರುವುದು, ಸಿನಿಮಾ ವೀಕ್ಷಣೆಗೆ ದರ್ಶನ್ ಹಾಜರಾಗಿರುವುದರ ವಿರುದ್ಧ ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆಯೇ ಎಂದು ನೋಡಬೇಕಿದೆ.