ನವದೆಹಲಿ: ಧನುಷ್ ಅವರ ವುಂಡರ್ಬಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೋಮವಾರ (ಮಾರ್ಚ್ 10) ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್'ನಲ್ಲಿ ತಮಿಳಿನ 'ನಾನುಮ್ ರೌಡಿ ಧಾನ್' ಚಿತ್ರದ ತೆರೆಹಿಂದಿನ (ಬಿಟಿಎಸ್) ದೃಶ್ಯಗಳನ್ನು ನಟನ ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕಾಗಿ ಶಾಶ್ವತ ತಡೆಯಾಜ್ಞೆಯೊಂದಿಗೆ 1 ಕೋಟಿ ರೂ.ಗಳ ಪರಿಹಾರ ಕೋರಿದ್ದು, ಕಾನೂನು ಸಮರವನ್ನು ಮುಂದುವರಿಸಲು ನಿರ್ಧರಿಸಿದೆ.ನಿರ್ಧರಿಸಿದೆ.
ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಅವರು 'ವೃತ್ತಿಪರವಲ್ಲದ ವರ್ತನೆ' ತೋರಿದ್ದಾರೆ ಎಂದು ಧನುಷ್ ಅಫಿಡವಿಟ್ನಲ್ಲಿ ಆರೋಪಿಸಿದ್ದಾರೆ. ನಟನ ಪರವಾಗಿ ಅವರ ಒಡೆತನದ ನಿರ್ಮಾಣ ಕಂಪನಿ ವುಂಡರ್ಬಾರ್ ಫಿಲ್ಮ್ಸ್, ನಯನತಾರಾ ಮತ್ತು ಸಾಕ್ಷ್ಯಚಿತ್ರವನ್ನು ತಯಾರಿಸಿರುವವರಿಂದ 1 ಕೋಟಿ ರೂ. ಪರಿಹಾರ ಕೋರಿ ಅರ್ಜಿ ಸಲ್ಲಿಸಿದೆ.
ಸಾಕ್ಷ್ಯಚಿತ್ರ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆ ಅರ್ಜಿಯನ್ನು ನ್ಯಾಯಮೂರ್ತಿ ಸೆಂಥಿಲ್ಕುಮಾರ್ ರಾಮಮೂರ್ತಿ ತಿರಸ್ಕರಿಸಿದ ನಂತರ ಧನುಷ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಾಕ್ಷ್ಯಚಿತ್ರವು ನೆಟ್ಫ್ಲಿಕ್ಸ್ನಲ್ಲಿ 2024ರ ನವೆಂಬರ್ನಲ್ಲಿಯೇ ಬಿಡುಗಡೆಯಾಗಿದ್ದು, ಈಗ ಮಧ್ಯಂತರ ತಡೆಯಾಜ್ಞೆ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನಾಲ್ಕನೇ ಪ್ರತಿವಾದಿ (ಶಿವನ್) ಅನಗತ್ಯವಾಗಿ ಮೂರನೇ ಪ್ರತಿವಾದಿಯ (ನಯನತಾರಾ) ಮೇಲೆ ಮಾತ್ರ ಗಮನ ಹರಿಸಲು ಪ್ರಾರಂಭಿಸಿದರು. ಚಿತ್ರದ ಇತರ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಕಡೆಗಣಿಸಿದರು. ಮೂರನೇ ಪ್ರತಿವಾದಿ ಮಾತ್ರ ಅತ್ಯುತ್ತಮ ಅಭಿನಯ ನೀಡುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಇತರ ನಟರಿಗೆ ಆದ್ಯತೆ ನೀಡದಂತೆ ದೃಶ್ಯಗಳನ್ನು ಹಲವಾರು ಬಾರಿ ರೀಟೇಕ್ ಮಾಡಿದರು' ಎಂದು ವುಂಡರ್ಬಾರ್ನ ಅಫಿಡವಿಟ್ನಲ್ಲಿ ಹೇಳಲಾಗಿದೆ.
ಧನುಷ್ ಮತ್ತು ನಯನತಾರಾ ನಡುವಿನ ಕಾನೂನು ಉದ್ವಿಗ್ನತೆ (ನ. 16, 2024) ತಮ್ಮ ಎಕ್ಸ್ ಖಾತೆಯಲ್ಲಿ ನಯನತಾರಾ ಅವರು ಬಹಿರಂಗ ಪತ್ರವನ್ನು ಹಂಚಿಕೊಂಡ ನಂತರ ಬೆಳಕಿಗೆ ಬಂದಿತು.
ನಯನತಾರಾ ಅವರ ಆರೋಪಗಳಿಗೆ ಧನುಷ್ ಈವರೆಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಕಾನೂನು ಮಾರ್ಗವನ್ನು ಅನುಸರಿಸಿದ್ದಾರೆ. ಅವರು 2024ರ ನವೆಂಬರ್ನಲ್ಲಿ ನಯನತಾರಾ, ಅವರ ಪತಿ ವಿಘ್ನೇಶ್ ಶಿವನ್ ಮತ್ತು ಅವರ ನಿರ್ಮಾಣ ಸಂಸ್ಥೆ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು.
ನಟ ಧನುಷ್ ಅವರ ನಿರ್ಮಾಣ ಸಂಸ್ಥೆಯು ಸಲ್ಲಿಸಿದ್ದ ಮೊಕದ್ದಮೆಯನ್ನು ತಿರಸ್ಕರಿಸುವಂತೆ ಕೋರಿ ನೆಟ್ಫ್ಲಿಕ್ಸ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 28 ರಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು. ಈ ಪ್ರಕರಣದ ವಿಚಾರಣೆಯು ಏಪ್ರಿಲ್ 9 ರಂದು ನಡೆಯಲಿದೆ.