ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬದುಕಿರುತ್ತಿದ್ದರೆ ಇಂದು ಮಾರ್ಚ್ 17ರಂದು ಅವರ 50ನೇ ಜನ್ಮದಿನವನ್ನು ಕುಟುಂಬಸ್ಥರು, ಹಿತೈಷಿಗಳು, ಅಭಿಮಾನಿಗಳು ಬಹಳ ಅದ್ದೂರಿಯಿಂದ ಆಚರಿಸುತ್ತಿದ್ದರು. ತೀವ್ರ ಹೃದಯಾಘಾತದಿಂದ 2021ನೇ ಇಸವಿ ಅಕ್ಟೋಬರ್ 29ರಂದು ಹಠಾತ್ತನೆ ಅವರು ಗತಿಸಿಹೋದರು.
ಭೌತಿಕವಾಗಿ ಅವರು ನಮ್ಮ ನಡುವೆ ಇಲ್ಲದಿದ್ದರೂ ಅವರ ಅಭಿಮಾನಿಗಳು ಅವರನ್ನು ಸ್ಮರಿಸುವುದೇನು ಕಡಿಮೆಯಾಗಿಲ್ಲ. ರಾಜ್ಯಾದ್ಯಂತ ಅಭಿಮಾನಿಗಳು ನಟ ಪುನೀತ್ ರಾಜ್ಕುಮಾರ್ 50ನೇ ಜನ್ಮದಿನವನ್ನು ಇಂದು ವಿಶೇಷವಾಗಿ ಆಚರಿಸುತ್ತಿದ್ದಾರೆ.
ಇಂದು ಸಮಾಧಿ ಬಳಿ ವಿಶೇಷ ಪೂಜೆ, ಕಾರ್ಯಕ್ರಮ
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ಇಂದು ಬೆಳಗ್ಗೆ ಅವರ ಪತ್ನಿ ಅಶ್ವಿನಿ, ಮಕ್ಕಳು, ಕುಟುಂಬಸ್ಥರು, ಅಭಿಮಾನಿಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಂಠೀರವ ಸ್ಟುಡಿಯೊ ಬಳಿ ನಂತರ ಅನ್ನದಾನ, ರಕ್ತದಾನ ಕಾರ್ಯಕ್ರಮ ನೆರವೇರಲಿದೆ. ಪುನೀತ್ ಬರ್ತ್ ಡೇ ಹೆಸರಿನಲ್ಲಿ ರಾಜ್ಯದ ಅಲ್ಲಲ್ಲಿ ಇಂದು ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ.
ಅಪ್ಪು ರೀರಿಲೀಸ್
ಪುನೀತ್ 50ನೇ ವರ್ಷದ ಹುಟ್ಟುಹಬ್ಬ ಆದ್ದರಿಂದ ಅವರು ನಾಯಕ ನಟನಾಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ಕಳೆದ ಶುಕ್ರವಾರ ಮರು ಬಿಡುಗಡೆಯಾಗಿದ್ದು ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆ ಮೂಲಕ ಅಪ್ಪು ಮೇಲಿನ ಅಭಿಮಾನ ಎಂದಿಗೂ ಕಡಿಮೆ ಆಗಲ್ಲ ಎಂಬುದನ್ನು ಅಭಿಮಾನಿಗಳು ಸಾಬೀತು ಮಾಡಿದ್ದಾರೆ. ಹಣ ಕೊಟ್ಟು ಟಿಕೆಟ್ ಖರೀದಿಸಿ ಅಪ್ಪು ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್ ಗೆ ಬಂದಿದ್ದಾರೆ. ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಪುನೀತ್ ಜೊತೆ ತೆರೆಹಂಚಿಕೊಂಡಿದ್ದ ಅಂದಿನ ನಾಯಕ ನಟಿಯರಾದ ರಕ್ಷಿತಾ, ರಮ್ಯಾ ಥಿಯೇಟರ್ ಗೆ ಆಗಮಿಸಿ ಚಿತ್ರ ವೀಕ್ಷಿಸಿ ಹೋಗಿದ್ದಾರೆ.
ಸ್ಫೂರ್ತಿ ದಿನ
ಪುನೀತ್ ರಾಜ್ ಕುಮಾರ್ ನಿಧನ ನಂತರ ಅವರು ಮಾಡಿದ್ದ ಸಮಾಜ ಮುಖಿ ಕೆಲಸಗಳು ಸಾಕಷ್ಟು ಸುದ್ದಿ ಮಾಡಿದವು. ಇದನ್ನು ಪರಿಗಣಿಸಿ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ದಿನವನ್ನು ಕರ್ನಾಟಕದಲ್ಲಿ ಸ್ಫೂರ್ತಿ ದಿನ ಎಂದು ಆಚರಿಸಲು ಘೋಷಿಸಿತು.
ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಮಾರ್ಚ್ 17 ಇನ್ನುಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ’ ಎಂದು ಹೇಳಿದ್ದರು.
ಅಭಿಮಾನಿಗಳಿಗೆ ಪ್ರೀತಿಯ ಅಪ್ಪು
ಬಾಲನಟನಾಗಿ ಸಾಕಷ್ಟು ಹೆಸರು ಮಾಡಿದ್ದ ಪುನೀತ್ ಮಧ್ಯದಲ್ಲಿ ಸ್ವಲ್ಪ ವರ್ಷ ನಟನೆಗೆ ವಿರಾಮ ಹೇಳಿ ನಂತರ 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಪಡೆದರು. ಈ ಚಿತ್ರ ಸಾಕಷ್ಟು ಹೆಸರು ಮಾಡಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯಲು ಆರಂಭಿಸಿದರು.