ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಒಂದೆಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪ್ರಕರಣದ 14ನೇ ಆರೋಪಿ (ಎ-14) ಪ್ರದೋಷ್ ತನ್ನನ್ನು 'ಮಾಫಿ ಸಾಕ್ಷಿ'ಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆಯೇ, ಪವಿತ್ರಾ ಗೌಡ ಮೊದಲ ಪತಿ ಸಂಜಯ್ ಸಿಂಗ್ ನಿಧನರಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಮೊದಲ ಪತಿ ಸಂಜಯ್ ಸಿಂಗ್ ನಿಧನರಾಗಿದ್ದಾರೆ. ಅವರು ಸುಮಾರು ಏಳೆಂಟು ತಿಂಗಳ ಹಿಂದೆಯೇ ಮೃತಪಟ್ಟಿದ್ದು, ಈ ವಿಷಯ ಇತ್ತೀಚೆಗಷ್ಟೇ ಹೊರಬಿದ್ದಿದೆ. ಅದರಲ್ಲೂ, ಸಂಜಯ್ ಸಿಂಗ್ ವಿಚ್ಛೇದನದ ನಂತರ ಅವರು ತೀವ್ರ ಕುಡಿತಕ್ಕೆ ದಾಸರಾಗಿದ್ದರು ಎನ್ನಲಾಗಿದ್ದು, ಲಿವರ್ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ರಾಜಸ್ಥಾನದಲ್ಲಿ ಕೊನೆಯುಸಿರೆಳೆದಿದ್ದಾರೆ.
ಏತನ್ಮಧ್ಯೆ, ಸಂಜಯ್ ಸಿಂಗ್ ಮತ್ತು ಪವಿತ್ರಾ ಗೌಡ ಅವರ ವಿಚ್ಛೇದನ 2013ರಲ್ಲೇ ಆಗಿತ್ತು. ಆದರೂ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಬಂಧನಕ್ಕೊಳಗಾದ ಸಮಯದಲ್ಲಿ ಸಂಜಯ್ ಸಿಂಗ್ ಅವರು ಬೆಂಗಳೂರಿಗೆ ಬಂದು, ಪವಿತ್ರಾ ಗೌಡ ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ ಎಂದು ಅವರ ಪರವಾಗಿ ಬ್ಯಾಟ್ ಬೀಸಿದ್ದರು. ಆದರೆ, ಬೆಂಗಳೂರಿನಿಂದ ಮರಳಿ ತೆರಳಿದ ಕೆಲವೇ ತಿಂಗಳಲ್ಲಿ ಅವರು ನಿಧನರಾಗಿದ್ದಾರೆ.
ಜೈಲಿನಲ್ಲಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು
ಮತ್ತೊಂದೆಡೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ. ತೀವ್ರ ಜ್ವರ ಹಾಗೂ ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವರು ಇತ್ತೀಚಿನ ಕೋರ್ಟ್ ವಿಚಾರಣೆಗೆ ಗೈರಾಗಿದ್ದರು. ಜೈಲು ಆಸ್ಪತ್ರೆಯಲ್ಲಿಯೇ ಅವರಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ. ಈ ವಿಚಾರವಾಗಿ ನ್ಯಾಯಾಧೀಶರು ಮಹಿಳಾ ಬ್ಯಾರಕ್ ಅಧಿಕಾರಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದಿದ್ದು, ಅಗತ್ಯ ಚಿಕಿತ್ಸೆ ನೀಡಿ ಗುಣಮುಖರಾದ ಬಳಿಕವೇ ವಿಚಾರಣೆಗೆ ಹಾಜರುಪಡಿಸುವಂತೆ ಸೂಚಿಸಿದ್ದಾರೆ.