ಹೈದರಾಬಾದ್: ಗಂಡ ಸತ್ತ ಮೇಲೆ ಮಹಿಳೆಯರು ಯಾಕೆ ಕುಂಕುಮ, ಬಳೆಗಳನ್ನು ತೆಗೆದುಹಾಕಬೇಕು ಎಂದು ಪುಷ್ಪ ಖ್ಯಾತಿಯ ನಟಿ ಅನಸೂಯಾ ಭಾರದ್ವಾಜ್ ಪ್ರಶ್ನಿಸಿದ್ದಾರೆ.
ಖ್ಯಾತ ನಟಿ ಹಾಗೂ ನಿರೂಪಕಿ ಅನಸೂಯ ಭಾರದ್ವಾಜ್ ಪತಿಯ ನಿಧನದ ನಂತರ ಮಹಿಳೆಯರು ಪಾಲಿಸುವ ಸಾಂಪ್ರದಾಯಿಕ ಪದ್ಧತಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಗಂಡ ಸತ್ತ ಮೇಲೆ ಮಹಿಳೆಯರು ಯಾಕೆ ಕುಂಕುಮ, ಬಳೆಗಳನ್ನು ತೆಗೆದುಹಾಕಬೇಕು ಎಂದು ಅನಸೂಯಾ ಪ್ರಶ್ನಿಸಿದ್ದಾರೆ. ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿವೆ.
ಮೂರು ವರ್ಷಗಳ ಹಿಂದೆ ತಮ್ಮ ತಂದೆಯ ಸಾವನ್ನು ನೆನಪಿಸಿಕೊಂಡ ಅವರು, ತಮ್ಮ ತಾಯಿ ಯಾವಾಗಲೂ ಬೊಟ್ಟು, ಬಳೆಗಳು ಮತ್ತು ಕಾಲ್ಗೆಜ್ಜೆಗಳನ್ನು ಧರಿಸಿ ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪತಿಯ ಅಗಲಿಕೆಯ ನಂತರ ಅವರು ಇವೆಲ್ಲವನ್ನೂ ತೊರೆಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಾಂಪ್ರದಾಯಿಕ ಶೃಂಗಾರಗಳನ್ನು ಕೇವಲ ಮದುವೆಗೆ ಮಾತ್ರ ಏಕೆ ಜೋಡಿಸಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಅಂದರೆ ಮದುವೆಗೂ ಮುಂಚೆಯೇ ತಾಯಿ ಮತ್ತು ಅಜ್ಜಿಯಂದಿರು ಕುಂಕುಮ, ಕಾಡಿಗೆ, ಬಳೆ, ಕಾಲ್ಗೆಜ್ಜೆ, ಮೆಹಂದಿ ಮತ್ತು ನೇಲ್ ಪಾಲಿಶ್ ಹಾಕುವುದನ್ನು ಕಲಿಸಿರುತ್ತಾರೆ. ಈ ವಸ್ತುಗಳು ಮದುವೆಗೆ ಮುಂಚಿತವಾಗಿಯೇ ಹೆಣ್ಣಿನ ಜೀವನದ ಭಾಗವಾಗಿದ್ದ ಮೇಲೆ, ಪತಿಯ ಮರಣದ ನಂತರ ಅವು ದಿಢೀರನೆ ನಿಷೇಧಿತ ಅಥವಾ ಅಸಮ್ಮತ ಏಕೆ ಆಗಬೇಕು?" ಎಂದು ಪ್ರಶ್ನಿಸಿದ ಅವರು, ವಿಧವೆಯಾದವರು ಇವುಗಳನ್ನು ತೆಗೆದುಹಾಕಬೇಕು ಎಂದು ಎಲ್ಲಿ ಬರೆಯಲಾಗಿದೆ ಎಂದು ಕೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಅದೇ ಸಮಯದಲ್ಲಿ, ತಾನು ಯಾರ ನಂಬಿಕೆಗಳಿಗೂ ಅಸಮಾಧಾನ ಅಥವಾ ಅಗೌರವವನ್ನು ಸೂಚಿಸುತ್ತಿಲ್ಲ ಎಂದು ಅನಸೂಯ ಸ್ಪಷ್ಟಪಡಿಸಿದ್ದಾರೆ.
ಅಪ್ಪ ಸತ್ತ ಮೇಲೆ ಅವರ ಜೀವನವೇ ಬದಲಾಯಿತು. ಗಂಡ ಸತ್ತರೆ ಬೊಟ್ಟು, ಬಳೆ ತೆಗೆಯಬೇಕಲ್ಲವೇ? ಆದರೆ ಬೊಟ್ಟು, ಕಾಡಿಗೆ, ಬಳೆ, ಗೆಜ್ಜೆ ಎಲ್ಲವನ್ನೂ ನಮ್ಮಮ್ಮನಿಗೆ ಅವರಮ್ಮನೇ ಹೇಳಿಕೊಟ್ಟಿದ್ದು. ನನಗೆ ನಮ್ಮಮ್ಮ ಹೇಳಿಕೊಟ್ಟರು. ನಮ್ಮಮ್ಮನಿಗೆ ಅವರಮ್ಮನೇ ಇದೆಲ್ಲವನ್ನೂ ಕಲಿಸಿದ್ದು. ಆದರೆ ಗಂಡ ಸತ್ತಾಗ ಯಾಕೆ ಬಿಡಬೇಕು? ಒಂದು ವೇಳೆ ಬಿಡಬೇಕಾಗಿದ್ದರೆ, ನಮ್ಮ ಅಜ್ಜಿ ಸತ್ತಾಗ ಬಿಡಬೇಕಿತ್ತಲ್ಲವೇ? ಅಪ್ಪನಿಗಾಗಿ ಯಾಕೆ ಬಿಟ್ಟರು ಎಂದು ಅನಸೂಯಾ ಪ್ರಶ್ನಿಸಿದ್ದಾರೆ. ಬೊಟ್ಟು, ಬಳೆ, ಗೋರಂಟಿಯಂತಹ ವಿಷಯಗಳನ್ನು ಮದುವೆ ಜೊತೆ ಯಾಕೆ ಜೋಡಿಸಿದ್ದಾರೆ?
ಅದೆಲ್ಲಾ ಹೆಣ್ಣುಮಕ್ಕಳ ವೈಯಕ್ತಿಕ ಇಷ್ಟ ಅಲ್ವಾ? ನಾನು ಯಾರಿಗೂ ವಿರೋಧವಾಗಿ ಮಾತಾಡುತ್ತಿಲ್ಲ, ನನಗೆ ಬಂದ ಅನುಮಾನವನ್ನು ಕೇಳುತ್ತಿದ್ದೇನೆ ಎಂದಿದ್ದಾರೆ. ಪೂಜೆ ಮಾಡುವಾಗಲೂ ಕೆಲವು ಬಲವಂತದ ನಿಯಮಗಳು, ಆಚರಣೆಗಳಿವೆ. ಅವೆಲ್ಲವನ್ನೂ ಯಾಕೆ ಪಾಲಿಸಬೇಕು, ಎಲ್ಲಿ ಬರೆದಿದೆ ಎಂದು ಅನಸೂಯಾ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.