ಚೆನ್ನೈ (ತಮಿಳುನಾಡು): ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸ್ಥಾನಗಳನ್ನು ಗೆಲ್ಲುವು ಮೂಲಕ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಕಳೆದ ಮೂರು ತಿಂಗಳಿಂದ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಇನ್ನು, ದಳಪತಿ ವಿಜಯ್ ಆಡಳಿತದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಾಕಿಂಗ್ ಸ್ಟಾರ್ ಯಶ್, ವಿಜಯ್ ಅವರ ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ನಾವು ಕಲಿಯುವುದು ಬಹಳಷ್ಟಿದೆ, ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆಯೂ ಓಪನ್ ಆಗಿ ಮಾತನಾಡಿದ್ದು, ಆ ಕುರಿತ ವರದಿ ಇಲ್ಲಿದೆ:
ವಿಜಯ್ ತಮಿಳು ಜನರ ನಂಬಿಕೆ ಉಳಿಸಿಕೊಳ್ಳುತ್ತಾರೆ!
ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ತಮ್ಮ ಮುಂಬರುವ ಬಹುನಿರೀಕ್ಷಿತ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಾಹುಲಿ ಯಶ್, ಚಿತ್ರರಂಗದಿಂದ ಬಂದು ರಾಜಕೀಯದಲ್ಲಿ ಇಷ್ಟು ದೊಡ್ಡ ಜವಾಬ್ದಾರಿ ಪಡೆದಿರುವುದು ಒಂದು ಉತ್ತಮ ಹಾಗೂ ಹೊಸ ಪ್ರವೃತ್ತಿಯಾಗಿದೆ. ಇನ್ನು, ನಾವು ಮೊದಲಿನಿಂದಲೂ ವಿಜಯ್ ಅವರ ಶಿಸ್ತು ಮತ್ತು ಕೆಲಸದ ಮೇಲಿನ ನಿಷ್ಠೆಯನ್ನು ನೋಡಿ ಬೆಳೆದಿದ್ದೇವೆ. ಹಾಗಾಗಿ, ಅವರಿಂದ ಕಲಿಯುವ ವಿಷಯಗಳು ಸಾಕಷ್ಟಿವೆ.
ಜೊತೆಗೆ, ತಮಿಳುನಾಡಿನ ಜನತೆ ಅವರ ಮೇಲೆ ಅಪಾರ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ನೀಡಿದ್ದಾರೆ. ಅವರು ಜನರ ಈ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ಇದ್ದು, ನಟರಾಗಿ ನಮಗೆ ಸಾರ್ವಜನಿಕರು ಅಪಾರ ಪ್ರೀತಿ ಕೊಡುತ್ತಾರೆ. ಅದರಂತೆ, ವಿಜಯ್ ಅವರು ಈಗ ತಮಗೆ ಸಿಕ್ಕ ಪ್ರೀತಿ ಮತ್ತು ಗೌರವವನ್ನು ಜನಸೇವೆಯ ಮೂಲಕ ತಮಿಳುನಾಡಿಗೆ ಮರಳಿ ನೀಡುವ ಹಂತಕ್ಕೆ ತಲುಪಿದ್ದಾರೆ ಎಂದು ತಿಳಿಸಿದರು.
ಕಿರಾತಕ ರಾಜಕೀಯ ಪ್ರವೇಶಿಸೋದು ಯಾವಾಗ?
ಕೆವಿಎನ್ ಸಂಸ್ಥೆಯ ಚಿತ್ರದಲ್ಲಿ ನಟಿಸಿದ ವಿಜಯ್ ಅವರು ಬಳಿಕ ಮುಖ್ಯಮಂತ್ರಿಯಾದರು. ಈಗ ನೀವು ಕೂಡ ಅದೇ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಟಾಕ್ಸಿಕ್ ಸಿನಿಮಾ ಮಾಡುತ್ತಿದ್ದೀರಿ. ಕಟ್ ಮಾಡಿದರೆ ನೀವೂ ಮುಂದೆ ಸಿಎಂ ಆಗ್ತೀರಾ ಎಂದು ಕಾರ್ಯಕರ್ಮದಲ್ಲಿ ನಿರೂಪಕರು ಪ್ರಶ್ನಿಸಿದರು.
ಈ ಪ್ರಶ್ನೆ ಕೇಳಿದ ತಕ್ಷಣವೇ ಯಶ್ ಮುಗುಳ್ನಕ್ಕು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿ, "ನಾನು ಇನ್ನೂ ಏನೂ ಅಲ್ಲ, ಈಗಷ್ಟೇ ಬೆಳೆಯುತ್ತಿದ್ದೇನೆ, ಹಾಗಾಗಿ, ಸದ್ಯ ನನ್ನ ಗಮನ ಸಂಪೂರ್ಣವಾಗಿ ಸಿನಿಮಾ ರಂಗದ ಮೇಲಿದೆ ಮತ್ತು ತಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ" ಎಂದು ತಿಳಿಸಿದರು. ಈ ಮೂಲಕ ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಸಂಪೂರ್ಣವಾಗಿ ತಳ್ಳಿಹಾಕದಿದ್ದರೂ, ಸದ್ಯಕ್ಕೆ ತಮ್ಮ ಗಮನ ಕೇವಲ ಸಿನಿರಂಗಕ್ಕೆ ಸೀಮಿತ ಎಂದು ಸೂಚಿಸಿದರು.