ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ಆಘಾತ ಎದುರಾಗಿದ್ದು, ನಿಗದಿಯಂತೆ ಸೆಪ್ಟೆಂಬರ್ 6 ರಂದು ಶೋ ಶುರುವಾಗುವುದೇ ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಅರಣ್ಯ ಹಾಗೂ ಪರಿಸರ ಸಚಿವರ ಕಠಿಣ ನಿಲುವು ಕಾರಣವಾಗಿದೆ.
ಬಿಗ್ ಬಾಸ್ ಕನ್ನಡ' ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಿನ್ನೆಯಷ್ಟೇ ಕಲರ್ಸ್ ಕನ್ನಡದ ಬಿಗ್ಬಾಸ್ ತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿತು. ಇದರ ಬೆನ್ನಲ್ಲೇ, ಕಾರ್ಯಕ್ರಮದ ಮೇಲೊಂದು ಕಾರ್ಮೋಡ ಕವಿದಿದೆ.
ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಕಳೆದ ವರ್ಷದಂತೆ ಈ ಬಾರಿಯ ಜಾಲಿವುಡ್ ಸ್ಟುಡಿಯೋ ಪರಿಸರ ನಿಯಮಗಳ ಉಲ್ಲಂಘಸಿದೆ ಎಂದು ಹೇಳುವ ಮೂಲಕ ಬಿಗ್ ಬಾಸ್ ಶೋ ಆಯೋಜಕರಿಗೆ ಮತ್ತು ಸ್ಟುಡಿಯೋ ಮಾಲೀಕರಿಗೆ 'ಬಿಗ್ ಶಾಕ್' ನೀಡಿದ್ದಾರೆ.
ಸೆಪ್ಟೆಂಬರ್ 6ರಂದು ಅದ್ದೂರಿಯಾಗಿ ಗ್ರ್ಯಾಂಡ್ ಪ್ರೀಮಿಯರ್ ನಡೆಸಲು ಸಜ್ಜಾಗಿದ್ದ ಆಯೋಜಕರಿಗೆ ಅರಣ್ಯ ಸಚಿವರ ಈ ಹೇಳಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜಾಲಿವುಡ್ ಸ್ಟುಡಿಯೋ, ಕಳೆದ ವರ್ಷದ ದಂಡವನ್ನು ಇನ್ನೂ ಪಾವತಿಸಿಲ್ಲ. ಪರಿಸರ ನಿಯಮಗಳನ್ನು ಸರಿಪಡಿಸಿಕೊಂಡಿಲ್ಲ ಮತ್ತು ಎಸ್ಟಿಪಿ ಅಳವಡಿಕೆ ನಿಯಮಗಳನ್ನು ಪಾಲಿಸಿಲ್ಲ. ಈ ಎಲ್ಲ ಲೋಪಗಳನ್ನು ಸರಿಪಡಿಸಿಕೊಳ್ಳದೆ ಹೋದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷವೂ ಇದೇ ರೀತಿಯ ಪರಿಸರ ಉಲ್ಲಂಘನೆ ಮತ್ತು ಕಾನೂನು ತೊಡಕುಗಳಿಂದಾಗಿ ಬಿಗ್ ಬಾಸ್ ಶೂಟಿಂಗ್ ಹಾಗೂ ಪ್ರಸಾರಕ್ಕೆ ತೊಂದರೆಯಾಗಿತ್ತು. ಈಗ ಮತ್ತೊಮ್ಮೆ ಅದೇ ಸಮಸ್ಯೆ ಎದುರಾಗಿರುವುದರಿಂದ, ನಿರ್ಮಾಪಕರು ಮತ್ತು ಕಲರ್ಸ್ ಕನ್ನಡ ವಾಹಿನಿಯು ಪರಿಸರ ಮಂಡಳಿಯ ನಿಯಮಗಳನ್ನು ಪಾಲಿಸುವ ಮೂಲಕ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ.