ಬೆಂಗಳೂರು: ನೀನು ಊರಿನಲ್ಲಿ ಎಮ್ಮೆ, ಕುರಿ ಮೇಯಿಸುತ್ತಿದ್ದಿದ್ದು ನನಗೆಲ್ಲಾ ಗೊತ್ತಿದೆ. ಇಂದು ನಿರ್ಮಾಪಕರ ತಲೆ ಹೊಡೆದು ನೂರಾರು ಕೋಟಿ ಆಸ್ತಿ ಮಾಡಿ ಆರಾಮಾಗಿದ್ದೀಯಾ. ಆದರೆ ನಿನಗೆ ಸಿನಿಮಾ ಮಾಡಿದ ಯಾವೊಬ್ಬ ನಿರ್ಮಾಪಕನೂ ಉದ್ದಾರ ಆಗಿಲ್ಲ' ಎಂದು ನಿರ್ದೇಶಕ ಪ್ರೇಮ್ ವಿರುದ್ಧ ನಿರ್ಮಾಪಕ ಕನಕಪುರ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.
ಜೊತೆಗೆ, ಹೀರೋಗಳ ಮೇಲೆ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡ್ತೇವೆ. ಆದರೆ, ಈಗಿನ ಹೀರೋಗಳು ಬೀದಿಯಲ್ಲಿ ಹೋಗಿ ಜನರ ಮುಂದೆ ಕುಣಿದರೆ, ಯಾವ ಜನರು ತಾನೇ ಹಣ ಕೊಟ್ಟು ಅವರ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಬರುತ್ತಾರೆ ಹೇಳಿ. ಸಿನಿಮಾ ನಾಯಕರು ಮನೆಯಲ್ಲಿ ಕೂರಬೇಕು ಎಂದು ಹೇಳಿದರು.
'ಕಾಟನ್ಪೇಟೆ' ಸಿನಿಮಾದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಪುನೀತ್ ರಾಜ್ಕುಮಾರ್ ಬಗ್ಗೆ ಗಂಭೀರ ಆರೋಫಗಳನ್ನು ಮಾಡಿದ್ದಾರೆ. ಹಾಗಂತ ಕೇವಲ ಪುನೀತ್ ರಾಜ್ಕುಮಾರ್ ಅಷ್ಟೇ ಅಲ್ಲ. ಧ್ರುವ ಸರ್ಜಾ, ದರ್ಶನ್ರನ್ನೂ ಎಳೆದು ತಂದಿದ್ದಾರೆ.
ಕನಕಪುರ ಶ್ರೀನಿವಾಸ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕರಾಗಿ ಜನಪ್ರಿಯರಾಗಿದ್ದಾರೆ. ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆ ವಿತರಣೆಯನ್ನೂ ಮಾಡಿದ್ದಾರೆ. ಹಿರಿಯ ನಿರ್ಮಾಪಕ ಈಗ ನಷ್ಟದಲ್ಲಿ ಇದ್ದಾರೆ. ಇತ್ತೀಚೆಗೆ ನಿರ್ಮಿಸಿದ ಕೆಲವು ಸಿನಿಮಾಗಳು ನಷ್ಟವನ್ನುಂಟು ಮಾಡಿದ್ದವು.
ಎಕ್ಸ್ಕ್ಯೂಸ್ ಮೀ, ಕರಿಯಾ ಚಿತ್ರದ ನಿರ್ಮಾಪಕರು ಪ್ರೇಮ್ ನಂಬಿ ಸಿನಿಮಾ ಮಾಡಿದವರೆಲ್ಲರೂ ಸರ್ವನಾಶವಾಗಿದ್ದಾರೆ. ನನ್ನ ಹತ್ತಿರವೇ 10 ಲಕ್ಷ ರೂಪಾಯಿ ಪಡೆದು 18 ವರ್ಷಗಳಾಗಿವೆ, ಇವತ್ತಿನವರೆಗೂ ಹಣ ಹಿಂತಿರುಗಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡಲ್ಲ. ನೀನು ಗಂಡಸಾಗಿದ್ದರೆ ನನ್ನ ಎದುರಿಗೆ ಬಾ' ಎಂದು ಬಹಿರಂಗ ಸವಾಲು ಹಾಕಿದರು. ಅಷ್ಟೇ ಅಲ್ಲದೆ, ನಟ ದರ್ಶನ್ ಜೈಲಿಗೆ ಹೋಗಿರುವುದಕ್ಕೂ ಪರೋಕ್ಷವಾಗಿ ಪ್ರೇಮ್ ಅವರೇ ಕಾರಣ ಎಂಬರ್ಥದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು.
ಇಷ್ಟೇ ಅಲ್ಲದೆ ಪುನೀತ್ ರಾಜ್ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಿನಿಮಾಗಾಗಿ ಮೂಟೆ ಲೆಕ್ಕದಲ್ಲಿ ಹಣವನ್ನು ಕೇಳಿದಾಗ ಕೊಟ್ಟೆ, ಆದರೆ ನನಗೆ ಮೋಸ ಮಾಡಿದರು. ಅದಕ್ಕೆ ಅವರನ್ನು ಬೇಗ ಕರೆದುಕೊಂಡರು ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ. ಮೋಸ ಮಾಡಿದವ್ರು ಸತ್ತಿದ್ದಾರೆ..
ಜೈಲ್ಗೆ ಹೋಗಿದ್ದಾರೆ "ನಾನು ಯಾರಿಗೂ ಮೋಸ ಮಾಡಿಲ್ಲ. ನನಗೆ ಇಂಡಸ್ಟ್ರಿಯಲ್ಲಿ ಎಷ್ಟೋ ಜನ ಮೋಸ ಮಾಡಿದ್ದಾರೆ. ಎಷ್ಟೋ ಜನ ಜೈಲ್ಗೆ ಹೋಗಿದ್ದಾರೆ. ಎಷ್ಟೋ ಜನ ಸತ್ತೋಗಿದ್ದಾರೆ. ಯಾರೂ ಉಳಿಯಲಿಲ್ಲ. ಇದೇ ಪುರಿ ಜಗನ್ನಾಥ್ ಕರೆದುಕೊಂಡು ಬಂದು ಯುವರಾಜ ಅಂತ ಲಂಡನ್ನಲ್ಲಿ ಮುಹೂರ್ತ ಮಾಡಿದೆ. ಸೌತ್ ಇಂಡಿಯಾದಲ್ಲಿ ಯಾರೂ ಮಾಡಿಲ್ಲ.
ಆ ಪುರಿ ಜಗನ್ನಾಥ್ನಿಂದ ಪುನೀತ್ ರಾಜ್ಕುಮಾರ್ ಸಿನಿಮಾ ಆಯ್ತು. ಕನ್ನಡಕ್ಕೆ ಒಬ್ಬ ಹೀರೋ ಬಂದ. ಅದು ಕನಕಪುರ ಶ್ರೀನಿವಾಸ್ನಿಂದ ಅಂತ ಎದೆ ತಟ್ಟಿಕೊಂಡು ಹೇಳುತ್ತೇನೆ. ರಾಜ್ಕುಮಾರನಿಂದ ಅಲ್ಲ ಕನಕಪುರ ಶ್ರೀನಿವಾಸ್ನಿಂದ ಒಬ್ಬ ಹೀರೋ ಬಂದ." ಎಂದು ಆಕ್ರೋಶದಿಂದ ಮಾತಾಡಿದ್ದಾರೆ.
ಪುನೀತ್ ರಾಜ್ಕುಮಾರ್ ತನಗೆ ಮೋಸ ಮಾಡಿದರು. ಆ ಕಾರಣಕ್ಕೆ ಅವರನ್ನು ದೇವರು ಕರೆದುಕೊಂಡ ಎಂದು ಹೇಳಿಕೆ ಕೊಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. "ಅವರು ನನಗೆ ಮೋಸ ಮಾಡಿದರು. ಇದ್ದಾರಾ ಇವತ್ತು? ದೇವರು ಕರೆದುಕೊಂಡ. ಬಾ ಮೇಲೆ ಎಂದು ದೇವರು ಕರೆದುಕೊಂಡ. ಇರಲಿ ಅಲ್ಲಾದರೂ ಒಳ್ಳೆಯದು ಮಾಡಲಿ" ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
ತಮ್ಮ 'ಕಾಟನ್ಪೇಟೆ' ಸಿನಿಮಾ ಬಿಡುಗಡೆಗೆ ಎದುರಾಗಿರುವ ಸಂಕಷ್ಟಗಳ ಬಗ್ಗೆ ಮಾತನಾಡುತ್ತಾ, ನಟ ಧ್ರುವ ಸರ್ಜಾ ಮೇಲೂ ಸಿಟ್ಟಿಗೆದ್ದರು. 'ಧ್ರುವ ಸರ್ಜಾ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ. ರಾಜ್ಕುಮಾರ್ ಕುಟುಂಬದಿಂದ ಹಿಡಿದು ಇವತ್ತಿನ ನಟರವರೆಗೂ ಯಾರೂ ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ದರ್ಶನ್ ಜೈಲಿನಲ್ಲಿರುವಾಗಲೇ ಸಿನಿಮಾ ರಿಲೀಸ್ ಮಾಡುತ್ತಿರುವುದರ ಬಗ್ಗೆಯೂ ಅಸಮಾಧಾನ ಹೊರಹಾಕಿದರು.
ರಾಜಕೀಯ ನಾಯಕರನ್ನೂ ಬಿಡದ ಶ್ರೀನಿವಾಸ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಹರಿಹಾಯ್ದರು. 'ನಾನೇ ಒರಿಜಿನಲ್ ಕನಕಪುರ ಬಂಡೆ. ನನ್ನ ಹೆಸರು ಫೇಮಸ್ ಆದಮೇಲೆ ಡಿಕೆಶಿ ಆ ಹೆಸರನ್ನು ಬಳಸಿಕೊಂಡರು. ಶಿವಕುಮಾರ್ ತಂದೆ ಕೆಂಪೇಗೌಡರು ಟೆಂಟ್ ಸಿನಿಮಾ ಇಟ್ಟುಕೊಂಡಿದ್ದವರು. ಡಿಕೆಶಿ ಬಳಿ ಜಾವಾ ಬೈಕ್ ಇತ್ತು, ಅದಕ್ಕೆ ಪೆಟ್ರೋಲ್ ಹಾಕಿಸಲೂ ಅವರ ಬಳಿ ಕಾಸಿರುತ್ತಿರಲಿಲ್ಲ. ನಾನೇ ಎಷ್ಟೋ ಬಾರಿ ಪೆಟ್ರೋಲ್ಗೆ ಹಣ ಕೊಟ್ಟಿದ್ದೇನೆ' ಎಂದು ಉಪಮುಖ್ಯಮಂತ್ರಿಗಳ ಹಳೆಯ ದಿನಗಳನ್ನು ಕೆದಕಿ ಲೇವಡಿ ಮಾಡಿದರು.