ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಲ್ಲು ಕುಟುಂಬ ಹಾಗೂ ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸಹೋದರನ ಮದುವೆಗೂ ಮುನ್ನ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಗಣ್ಯರನ್ನು, ಆತ್ಮೀಯರನ್ನು ಆಹ್ವಾನಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ ಕೂಡ ಹೋಗಿದ್ದರು.
ಪತ್ನಿ ಉಪಾಸನಾ ಜೊತೆ ರಾಮ್ ಚರಣ್ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಮದ್ಯ, ನೃತ್ಯ ಎಲ್ಲವೂ ಇದ್ದ ಈ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿದ್ದರು. ಅದೂ ಅಯ್ಯಪ್ಪ ಮಾಲಧಾರಿಯಾಗಿ. ಹೀಗಾಗಿ ರಾಮ್ ಚರಣ್ ನಡೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅಯ್ಯಪ್ಪ ಮಾಲಾಧಾರಿಯಾಗಿ ರಾಮ್ ಚರಣ್ ಪಾರ್ಟಿಯಲ್ಲಿ ಭಾಗವಹಿಸಿದ ಬಗ್ಗೆ ಪ್ರಶ್ನೆಗಳು ಎದ್ದಂತೆ, ಕಮೆಂಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಲ್ಲು ಸಿರೀಶ್, ‘ಸ್ವಾಮಿಯವರು (ರಾಮ್ ಚರಣ್) ಯಾರೂ ಸಹ ಮದ್ಯವನ್ನು ಮುಟ್ಟುವ ಮೊದಲೇ ಅವರು ಬಂದು ಶುಭ ಹಾರೈಸಿ ಹೊರಟು ಬಿಟ್ಟರು ಎಂದಿದ್ದಾರೆ. ಆ ಮೂಲಕ ಅವರು ಮಾಲಾಧಾರಿಯಾಗಿ ಯಾವುದೇ ಕೆಟ್ಟ ಚಟುವಟಿಕೆಯ ಭಾಗ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಿದ್ದಾರೆ.
ರಾಮ್ ಚರಣ್ ಮಹಾನ್ ಅಯ್ಯಪ್ಪ ಭಕ್ತರಾಗಿದ್ದಾರೆ. ಪದೇ ಪದೇ ಅವರು ಮಾಲಧಾರಣೆ ಮಾಡುತ್ತಲೇ ಇರುತ್ತಾರೆ. ಮಾಲಧಾರಣೆ ಮಾಡಿದಾಗ ಚಪ್ಪಲಿ ಸಹ ಧರಿಸದೆ ಬಹಳ ಕಟ್ಟುನಿಟ್ಟಿನಿಂದ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಸಿನಿಮಾ ಪ್ರಚಾರವಿರಲಿ ಏನೇ ಇರಲಿ ನಿಯಮಗಳನ್ನು ತಪ್ಪಿಸುವುದಿಲ್ಲ. ಅಯ್ಯಪ್ಪನ ಮಹಾನ್ ಭಕ್ತರಾಗಿರುವ ರಾಮ್ ಚರಣ್, ಮಾಲೆಗೆ ಅಪಚಾರ ಆಗುವಂತೆ ನಡೆದುಕೊಳ್ಳುತ್ತಾರೆ ಎನ್ನಲಾಗದು.