ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಬಿ.ಸಿ. ಪಾಟೀಲ್ ಅವರು ಇದೇ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಮೂಲಕ ಅವರು ಹೊಚ್ಚಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ.
ವೀಕ್ಷಕರ ಮನಗೆದ್ದಿರುವ ಈ ಸರಣಿಯಲ್ಲಿ ಬಿ.ಸಿ. ಪಾಟೀಲ್ ಅವರು ಅತ್ಯಂತ ಪ್ರಮುಖವಾದ ‘ಕರಟಗಿರಿಯ ದೇಸಾಯಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ವಿಭಿನ್ನ ಸಿನಿಮಾಗಳ ಮೂಲಕ ಅಬ್ಬರಿಸುತ್ತಿದ್ದ ‘ಕೌರವ’ ಬಿ.ಸಿ. ಪಾಟೀಲ್ ಅವರನ್ನು ಈಗ ರಾಯರ ಮಹಿಮೆಯ ಕಥಾಹಂದರದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಅವರ ಪತ್ನಿಯಾಗಿ ಅರುಣಾ ಬಾಲರಾಜ್ ಕೂಡ ಇದ್ದಾರೆ. ಈ ಭಕ್ತಿ ಪ್ರಧಾನ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಯರ ಜೀವನದ ಪವಿತ್ರ ಪಯಣವನ್ನು ಭಕ್ತರು ಕಣ್ತುಂಬಿ ಕೊಳ್ಳುತ್ತಿದ್ದಾರೆ.