ನಟ ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯದ ಕರಾವಳಿ (Karavali) ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಚಿತ್ರದ ಟ್ರೈಲರ್ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಚಿತ್ರದ ಕುರಿತಂತೆ ವಿವಾದ ಭುಗಿಲೆದ್ದಿದೆ. ಈ ಸಿನಿಮಾದ ಟ್ರೇಲರ್ ಪ್ರೀಮಿಯರ್ ವೇಳೆ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಪ್ರಜಲ್ವ್ ದೇವರಾಜ್ ಧ್ವನಿ ಬದಲಿಗೆ ಬೇರೆಯವರ ಕೈಯಲ್ಲಿ ಡಬ್ ಮಾಡಿಸಿರುವುದು ಅಭಿಮಾನಿಗಳು ಕೆರಳುವಂತೆ ಮಾಡಿದೆ. ರಾಜ್ ಬಿ ಶೆಟ್ಟಿ (Raj B Shetty) ಚಿತ್ರಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಪ್ರಜ್ವಲ್ ಅವರಿಗೆ ಇರಿಸುಮುರಿಸು ಆಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಆರೋಪಗಳಿಗೆ ಸ್ವತಃ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ. ಈ ಚಿತ್ರದಲ್ಲಿ ನಾನು ಒಂದು ಅತಿಥಿ ಪಾತ್ರ ಮಾಡುತ್ತಿದ್ದೇನೆ ಅಷ್ಟೇ. ಮೊದಲಿಗೆ ಈ ಚಿತ್ರಕ್ಕೆ ನಾನು ಆಯ್ಕೆ ಆಗಿರಲಿಲ್ಲ. ಬೇರೊಬ್ಬ ನಟರು ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಕೊನೆಯಲ್ಲಿ ನಾನು ಅಭಿನಯಿಸಬೇಕಾಗಿ ಬಂದಿತು ಎಂದು ಶೆಟ್ಟಿ ಹೇಳಿದ್ದಾರೆ. ಇಲ್ಲಿ ಅವರು ದೊಡ್ಡವರು, ಇವರು ಚಿಕ್ಕವರು ಎಂದು ಭೇದಭಾವ ಮಾಡುತ್ತಿರುವುದರಿಂದಲೇ ಕನ್ನಡ ಚಿತ್ರರಂಗ ಉದ್ಧಾರ ಆಗಿಲ್ಲ ಶೆಟ್ಟಿ ಖಡಕ್ ಆಗಿ ಹೇಳಿದ್ದಾರೆ.
ನಾನು ಇಲ್ಲಿ ಯಾರಿಗೂ ಪೈಪೋಟಿ ಕೊಡೋಕೆ ಬಂದಿಲ್ಲ. ಇದು ಒಂದು ಸಿನಿಮಾ. ಈ ಚಿತ್ರದಲ್ಲಿ ನನ್ನದೊಂದು ಚಿಕ್ಕ ಪಾತ್ರ ಅಷ್ಟೇ. ಎಲ್ಲಕ್ಕಿಂತ ಮೊದಲು ನಾನೊಬ್ಬ ತಂತ್ರಜ್ಞ. ಒಂದು ಸಿನಿಮಾ ಮಾಡೋದಕ್ಕೆ ಎಷ್ಟು ಶ್ರಮ ಇರುತ್ತದೆ ಎಂಬುದು ನನಗೆ ಗೊತ್ತು. ಸಿನಿಮಾ ಎಂಬುದು ನನಗಿಂತ ದೊಡ್ಡದು. ಇಂಥ ವಿಷಯ ಮಾತನಾಡಬೇಕಾಗಿ ಬಂದಿರುವುದು ದುರದೃಷ್ಟಕರ. ಮನುಷ್ಯತ್ವ ಬಹಳ ಮುಖ್ಯ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಜುಲೈ 24ರಂದು ‘ಕರಾವಳಿ’ ಚಿತ್ರ ಬಿಡುಗಡೆಯಾಗುತ್ತಿದ್ದು ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸಿದ್ದಾರೆ.