ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಪತ್ನಿ ಆರತಿ ಅವರೊಂದಿಗೆ ನಡೆಯುತ್ತಿರುವ ವಿಚ್ಛೇದನ ಪ್ರಕರಣ, ಗಾಯಕಿ ಕೆನಿಷಾ ಅವರೊಂದಿಗಿನ ಸ್ನೇಹದ ಕುರಿತು ಹರಿದಾಡಿದ ಸುದ್ದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಚರ್ಚೆಗಳು ಅವರ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಏರಿದ ಜಯಂ ರವಿ ಭಾವನಾತ್ಮಕವಾಗಿ ಮಾತನಾಡಿದ್ದು, ಅಭಿಮಾನಿಗಳ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿ ಮತ್ತೆ ಚಿತ್ರರಂಗಕ್ಕೆ ಹೊಸ ಉತ್ಸಾಹದೊಂದಿಗೆ ಮರಳುವುದಾಗಿ ಘೋಷಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಕೆನಿಷಾ ತಾವು ರವಿ ಮೋಹನ್ ಅವರಿಂದ ದೂರವಾಗುತ್ತಿರುವುದಾಗಿ ಘೋಷಿಸಿದ್ದರು. ಈ ಬೆಳವಣಿಗೆಯ ಬಳಿಕ ನೀಡಿದ ಸಂದರ್ಶನದಲ್ಲಿ, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಹೊಸ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲ ಎಂದು ರವಿ ಮೋಹನ್ ಹೇಳಿದ್ದರು. ಈ ಹೇಳಿಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.
ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಜಯಂ ರವಿ, ತಮ್ಮ ಹಿಂದಿನ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಈ ವರ್ಷ ತಮ್ಮ ವಯಸ್ಸು 46 ವರ್ಷವಾಗುತ್ತಿದ್ದು, ಅದರಲ್ಲಿ 23 ವರ್ಷಗಳನ್ನು ಚಿತ್ರರಂಗಕ್ಕೆ ಸಮರ್ಪಿಸಿದ್ದೇನೆ ಎಂದು ಹೇಳಿದ್ದಾರೆ. ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಿನಿಮಾ ಕ್ಷೇತ್ರದಲ್ಲೇ ಕಳೆದಿರುವ ನಾನು, ಭಾವನಾತ್ಮಕ ಕ್ಷಣದಲ್ಲಿ ಮಾಡಿದ ಒಂದು ಹೇಳಿಕೆ ಅನೇಕ ಅಭಿಮಾನಿಗಳಿಗೆ ನೋವುಂಟು ಮಾಡಿದೆ ಎಂದು ಒಪ್ಪಿಕೊಂಡರು.
ವೇದಿಕೆಯಲ್ಲೇ ಮಾತನಾಡಿದ ಜಯಂ ರವಿ, ತಮ್ಮ ಒಂದು ಸಣ್ಣ ತಪ್ಪು ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಒಪ್ಪಿಕೊಂಡರು. ವೈಯಕ್ತಿಕ ಜೀವನ ಮತ್ತು ಸಿನಿಮಾ ಜೀವನ ಎರಡೂ ತಮ್ಮ ಬದುಕಿನಲ್ಲಿ ಸಮಾನ ಮಹತ್ವ ಹೊಂದಿವೆ. ಆ ಸಂದರ್ಭದಲ್ಲಿನ ಭಾವನಾತ್ಮಕ ಒತ್ತಡದಿಂದ ಕೆಲವು ಮಾತುಗಳು ಹೊರಬಂದವು ಎಂದು ಹೇಳಿದ್ದಾರೆ.
ಚಿತ್ರರಂಗದ ಅನೇಕ ಹಿರಿಯರು ಹಾಗೂ ಸ್ನೇಹಿತರು, 'ನೀವು ಏನೇ ನಿರ್ಧಾರ ತೆಗೆದುಕೊಳ್ಳಿ, ನಾವು ನಿಮ್ಮೊಂದಿಗೆ ಇರುತ್ತೇವೆ. ಆದರೆ ಚಿತ್ರರಂಗವನ್ನು ತೊರೆಯುವ ಮಾತನ್ನು ಮಾತ್ರ ಹೇಳಬೇಡಿ' ಎಂದು ಸಲಹೆ ನೀಡಿದರು ಎಂದು ಜಯಂ ರವಿ ತಿಳಿಸಿದ್ದಾರೆ.
ಆ ಮಾತುಗಳನ್ನು ಜೀವನದ ಮಾರ್ಗದರ್ಶಕವಾಗಿ ಸ್ವೀಕರಿಸಿದ್ದೇನೆ. ನಿಮ್ಮೆಲ್ಲರ ಮುಂದೆ ಮಂಡಿಯೂರಿ ಕ್ಷಮೆಯಾಚಿಸುತ್ತೇನೆ. ನನ್ನನ್ನು ಪ್ರೀತಿಸುವ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ನಾನು ಎಂದಿಗೂ ದ್ರೋಹ ಮಾಡುವುದಿಲ್ಲ ಎಂದು ನಟ ಭರವಸೆ ನೀಡಿದರು.