ಚೆನ್ನೈ: ಖ್ಯಾತ ತಮಿಳುನಟ ಜಯಂ ರವಿ (Ravi Mohan) ವಿವಾಹ ವಿಚ್ಛೇದನ ವಿವಾದ ತಾರಕಕ್ಕೇರಿದ್ದು, ಅತ್ತ ನಟ ರವಿ ಸುದ್ದಿಗೋಷ್ಠಿಯಲ್ಲಿ ಪತ್ನಿ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಆರೋಪಗಳ ಸುರಿಮಳೆ ಗೈದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರ ಅತ್ತೆ ಎಲ್ಲವನ್ನೂ ಸಾಬೀತು ಮಾಡುತ್ತೇನೆ ಎಂದು ಸವಾಲೆಸೆದಿದ್ದಾರೆ.
ಹೌದು.. ತಮಿಳು ನಟ Jayam Ravi ಅವರ ವಿಚ್ಛೇದನ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು, ರವಿ ಪತ್ನಿ ಆರ್ತಿ ರವಿ ಅವರ ತಾಯಿ ಸುಜಾತಾ, ದಂಪತಿಯ ಸಂಬಂಧ ಹಾಗೂ ಬೇರ್ಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಜಯಂ ರವಿ ಮಾಡಿರುವ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಸುಜಾತ ಅವರು, ನಿರಾಕರಿಸಿದ್ದು ಯಾರು? ಮದುವೆಯಾಗಿದ್ದು ಯಾರು? ಎಂಬುದನ್ನು ನಾನು ಸಾಬೀತು ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಮದುವೆ ಹಾಗೂ ದಂಪತಿಯ ಸಂಬಂಧಕ್ಕೆ ಸಂಬಂಧಿಸಿದ ಹಲವು ಬಾಕಿ ಉಳಿದಿರುವ ಪ್ರಶ್ನೆಗಳ ಬಗ್ಗೆ ಅವರು ಸುಳಿವು ನೀಡಿದ್ದಾರೆ ಎಂದು ಹೇಳಲಾಗಿದೆ.
ಸುಜಾತ ಅವರ ಹೇಳಿಕೆ ಈ ಹೈ-ಪ್ರೊಫೈಲ್ ವಿಚ್ಛೇದನ ಪ್ರಕರಣದ ಕುರಿತು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ನಟ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಪ್ರತಿಯೊಂದು ಬೆಳವಣಿಗೆಯನ್ನೂ ಅಭಿಮಾನಿಗಳು ಮತ್ತು ಚಿತ್ರರಂಗದ ವೀಕ್ಷಕರು ಹತ್ತಿರದಿಂದ ಗಮನಿಸುತ್ತಿದ್ದಾರೆ. ಜಯಂ ರವಿ ಮತ್ತು ಅವರ ಪತ್ನಿ ಆರ್ತಿ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ವರದಿಗಳು ಆನ್ಲೈನ್ನಲ್ಲಿ ಹೊರಬಂದ ನಂತರ ಈ ವಿವಾದ ಆರಂಭವಾಯಿತು.
ರವಿ ಅವರ ಬ್ಯಾಂಕ್ ಖಾತೆ ನಿರ್ವಹಣೆ ಆರೋಪದ ಕುರಿತು ಮಾತನಾಡಿದ ಸುಜಾತ ಅವರು, ಹೌದು.. ಅವರು ಗಂಡ-ಹೆಂಡತಿ. ಪರಸ್ಪರ ನಂಬಿಕೆ ಮೇಲೆ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಅದರಲ್ಲಿ ತಪ್ಪೇನಿದೆ. ಮೂರನೇ ವ್ಯಕ್ತಿ ಖಾತೆ ನಿರ್ವಹಿಸಿದರೆ ಅದು ತಪ್ಪು. ಆದರೆ ಪತ್ನಿ ನಿರ್ವಹಿಸಿದರೆ ತಪ್ಪೇನು. 20 ವರ್ಷಗಳ ಕಾಲ ಇಲ್ಲದ ಸಮಸ್ಯೆ ದಿಢೀರ್ ಉದ್ಭವವಾಗಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಜಯಂ ರವಿ ಅವರು, ಸುಜಾತಾ ತೆಗೆದುಕೊಂಡಿದ್ದ ಭಾರೀ ವ್ಯಾಪಾರ ಸಾಲಗಳಿಗೆ ತಮಗೆ ಒತ್ತಡ ಹಾಕಿ ಜಾಮೀನುಗಾರರನ್ನಾಗಿ ಮಾಡಲಾಗಿತ್ತು ಹಾಗೂ ತಮ್ಮನ್ನು ಆರ್ಥಿಕವಾಗಿ ದುರುಪಯೋಗಪಡಿಸಿಕೊಂಡರು ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಸುಜಾತಾ ಅವರು 'ವೈಯಕ್ತಿಕವಾಗಿ 100 ಕೋಟಿಗೂ ಹೆಚ್ಚು ಮೌಲ್ಯದ ಚಿತ್ರರಂಗದ ಸಾಲಗಳನ್ನು ನಿರ್ವಹಿಸಿದ್ದೇನೆ ಮತ್ತು ಯಾವುದೇ ಆರ್ಥಿಕ ಲಾಭಕ್ಕಾಗಿ ಜಯಂ ರವಿ ಅವರ ಹೆಸರನ್ನು ಬಳಸಿಲ್ಲ' ಎಂದು ಸ್ಪಷ್ಟಪಡಿಸಿದರು.
ಜಯಂ ರವಿ ಸಂಸಾರದಲ್ಲಿ ಸುಜಾತ ಕುಟುಂಬದ ಅತಿಯಾದ ಹಸ್ತಕ್ಷೇಪ ಮತ್ತು ಪ್ರಭಾವದ ಕುರಿತು ಮಾಡಿರುವ ಆರೋಪಗಳ ಪ್ರತಿಕ್ರಿಯಿಸಿದ ಸುಜಾತ ಅವರು, “ನಾನು ಯಾವಾಗಲೂ ರವಿಯನ್ನು ನನ್ನ ಸ್ವಂತ ಮಗನಂತೆ ನೋಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಮಗಳು ಮತ್ತು ಮೊಮ್ಮಕ್ಕಳ ಸುಖ-ಶಾಂತಿ ಹಾಗೂ ಕುಟುಂಬದ ನೆಮ್ಮದಿಯೇ ತಮ್ಮ ಏಕೈಕ ಆಶಯ ಎಂದು ತಿಳಿಸಿದ್ದಾರೆ.
ಅಲ್ಲದೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಾವು ಹೆಚ್ಚೇನು ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಸತ್ಯಗಳು ಹೊರಬೀಳಲಿದೆ ಎಂದು ಸುಜಾತ ಹೇಳಿದರು.