ಬೆಂಗಳೂರು: ತಮ್ಮ ಮಗ ಸಾಮ್ರಾಟ್ ವಿರುದ್ಧ ದಾಖಲಾಗಿರುವ ಹಲ್ಲೆ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ನಟ ದುನಿಯಾ ವಿಜಯ್ 'ತಪ್ಪನ್ನ ಕ್ಷಮಿಸಲ್ಲ' ಎಂದು ಹೇಳಿದ್ದಾರೆ.
ಹೌದು.. ನಟ ದುನಿಯಾ ವಿಜಯ್ (Actor Duniya Vijay) ಪುತ್ರ ಸಾಮ್ರಾಟ್ ವಿರುದ್ಧ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮ್ರಾಟ್ಗೆ ಜಾಮೀನು ದೊರೆತಿದೆ. ಈ ಬೆಳವಣಿಗೆಯ ನಡುವೆ ಇದೇ ಮೊದಲ ಬಾರಿಗೆ ನಟ ದುನಿಯಾ ವಿಜಯ್ ತಮ್ಮ ಮಗನ ವಿರುದ್ಧದ ಆರೋಪದ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮ್ರಾಟ್ ವಿರುದ್ಧ ದಾಖಲಾಗಿರುವ ಹಲ್ಲೆ ಮತ್ತು ಅಪಹರಣ ಪ್ರಕರಣ ಹಾಗೂ ನಂತರ ದೊರೆತ ನಿರೀಕ್ಷಣಾ ಜಾಮೀನಿನ ಕುರಿತು ನಟ ದುನಿಯಾ ವಿಜಯ್ ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿದ್ದು, ʻತಪ್ಪು ಯಾರೇ ಮಾಡಿದ್ರೂ ತಪ್ಪೇʼ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್, ʻಮಕ್ಕಳು ತಪ್ಪು ಮಾಡಿದಾಗ ತಂದೆಯಾಗಿ ನಾನು ಕ್ಷಮಿಸಲ್ಲ. ತಪ್ಪು ಯಾರೇ ಮಾಡಿದ್ರೂ ತಪ್ಪೇ.. ಪೊಲೀಸರು ಬುದ್ಧಿ ಕಲಿಸಿದ್ದಾರೆ. ಸಮಾಜದಲ್ಲಿ ನಾಲ್ಕು ಜನರಿಗೆ ನಾನೇ ಪಾಠ ಹೇಳುವಾಗ, ನನ್ನ ಮಗ ತಪ್ಪು ಮಾಡಿದರೆ ನಾನು ಹೇಗೆ ಕ್ಷಮಿಸಲಿ? ಕೋರ್ಟ್ ಏನೇ ತೀರ್ಪು ಕೊಟ್ಟರೂ ತಲೆಬಾಗುತ್ತೇನೆʼ ಎಂದಿದ್ದಾರೆ.
ಸ್ನೇಹಿತರ ನಡುವಿನ ಗಲಾಟೆ
“ಮಗನ ವಿಚಾರ ಏನೆಂದರೆ, ಎಲ್ಲಾ ಫ್ರೆಂಡ್ಸ್ ಸೇರಿಕೊಂಡು ಕಿತ್ತಾಟ ಮಾಡಿಕೊಂಡಿದ್ದಾರೆ. ಹಾಗಾಗಿ, ಅದು ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ಆಗಿದೆ. ಪೊಲೀಸರು ಬುದ್ದಿ ಕಲಿಸಿದ್ದಾರೆ. ಕೋರ್ಟ್ಗೆ ಹೋಗಿದೆ, ಬೇಲ್ ಆಗಿದೆ. ತಪ್ಪಾದಾಗ, ಯಾರೇ ಆಗಲಿ ಕಾನೂನಿನ ಅಡಿಯಲ್ಲಿ ಅವರು ತಪ್ಪತಸ್ಥರೇ. ಅದು ಕೋರ್ಟ್ನಲ್ಲಿ ಇರೋದ್ರಿಂದ, ಏನು ಹೊರಗಡೆ ಬರುತ್ತೋ ಬರ್ಲಿ. ತಪ್ಪು ತಪ್ಪೇ.. ನನ್ನ ಮಗ ಆದರೂ ಅಷ್ಟೇ. ಕೋರ್ಟ್ ಏನು ನಿರ್ಧಾರ ಕೊಡುತ್ತೋ ಅದಕ್ಕೆ ತಲೆ ಬಾಗಬೇಕು” ಎಂದು ನಟ ವಿಜಯ್ ಹೇಳಿದ್ದಾರೆ.
ಪ್ರಜ್ಞೆ ಇರ್ಬೇಕು, ಕ್ಷಮಿಸಲ್ಲ
“ತಂದೆಯಾಗಿ, ಯಾರ ಮಕ್ಕಳೇ ಆಗಲಿ. ಎಲ್ರ ಮಕ್ಕಳು ಒಂದೇ ನನಗೆ. ಮೈಮೇಲೆ ಪ್ರಜ್ಞೆ ಇರ್ಬೇಕು ಯಾವಾಗಲೂ. ಜೀವನದಲ್ಲಿ ಹುಷಾರಾಗಿ ಇರ್ಬೇಕು. ರೆಸ್ಪಾನ್ಸಿಬ್ಲಿಟಿ ಇರ್ಬೇಕು, ಬೇಸಿಕ್ ಲಾಗಳನ್ನ ತಿಳಿದುಕೊಳ್ಳಬೇಕು. ಕೆಲವೊಮ್ಮೆ ಮಾತಾಡಿದ್ರೆನೇ ತಪ್ಪಾಗುತ್ತೆ. ಅದಕ್ಕೂ ಕೂಡ ಕಾನೂನು ಇದೆ. ಇಷ್ಟು ದೊಡ್ಡ ವಿಚಾರ ಆದಾಗ, ಯಾರೂ ಕ್ಷಮಿಸೋದಿಲ್ಲ. ನಾನೊಬ್ಬ ತಂದೆಯಾಗಿ ಕ್ಷಮಿಸೋದಿಲ್ಲ.
ನಾನೇ ನಾಲ್ಕು ಜನಕ್ಕೆ ಪಾಠ ಹೇಳೋಕೆ ಹೋಗ್ತೇನೆ. ಅಂತಹುದರಲ್ಲಿ ನಮ್ಮ ಮಕ್ಕಳು ಮಾಡಿದಾಗ, ನಾನು ಕ್ಷಮಿಸಲ್ಲ. ಕಾನೂನಿನ ಅಡಿಯಲ್ಲಿ ತಪ್ಪು ತಪ್ಪೇ. ತಪ್ಪು ಮಾಡಿದ ಬಳಿಕ ಕಾನೂನಿನ ಮುಂದೆ ಎಲ್ಲರೂ ಸಮಾನರು. ನನ್ನ ಮಗ ಅಥವಾ ಇನ್ನೊಬ್ಬರ ಮಗ ಎಂಬ ಭೇದಭಾವ ಇರಬಾರದು. ನ್ಯಾಯಾಲಯ ನೀಡುವ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಅದನ್ನ ಕೋರ್ಟ್ ನಿರ್ಧಾರ ಮಾಡಲಿ. ದೋಷಿ ನಾ? ಅಥವಾ ನಿರ್ಧೊಷಿ ನಾ? ಅಂತ. ಅವತ್ತು ಮಾತಾಡ್ತೇನೆ” ಎಂದು ದುನಿಯಾ ವಿಜಯ್ ಹೇಳಿದರು.
ಪೊಲೀಸರು ನೋಡ್ಕೋತಾರೆ
“ನಾನು ನನ್ನ ಮಗನ ಹತ್ರಾ ಮಾತಾಡಿ ನೀನು ಮಾಡಿರೋದು ತಪ್ಪು. ಪೊಲೀಸರು ಇರೋದು ಯಾವತ್ತೂ ತಪ್ಪನ್ನ ತಿದ್ದೋದಕ್ಕೆ. ಅದನ್ನ ಕೇಳಬೇಕು ಅಂತ ಹೇಳಿದ್ದೇನೆ. ಈಗ ಸ್ಟೂಡೆಂಟ್ಸ್ ಅಂದ್ಮೇಲೆ ಒಂದು ಗ್ರೂಪ್ ಇರುತ್ತೆ, ಕಿತ್ತಾಡ್ತಾರೆ. ಎಲ್ರೂ ಆ ವಯಸ್ಸಿನಲ್ಲಿ ಮಾಡಿರ್ತಾರೆ. ಅದಕ್ಕೆ, ತಂದೆಯಾಗಿ ಹುಷಾರಾಗಿರು, ಇದು ಮಾಡ್ಬಾರ್ದು ತಪ್ಪು ಅಂತಲೂ ಹೇಳ್ತೇನೆ” ಎಂದರು.
ಇಂತಹ ವೈಯಕ್ತಿಕ ಘಟನೆಗಳು ಮತ್ತು ವಿವಾದಗಳು ತಮ್ಮ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯ್, “ಸಿನಿಮಾ ಕೊಟ್ಟಿರೋ ನೆಮ್ಮದಿ ಇನ್ನೆಲ್ಲೂ ಕೊಟ್ಟಿಲ್ಲ. ಹಾಗಾಗಿ, ಅದನ್ನ ದೇವರು ತರಹ ನೋಡ್ತೇನೆ, ಪೂಜಿಸುತ್ತೇನೆ. ಏನಿಲ್ಲಾ.. ಸಿನಿಮಾ ಸಿನಿಮಾ ಆಗುತ್ತೆ ಅಷ್ಟೇ” ಎಂದರು.
ಇದೇ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಗೂ ದುನಿಯಾ ವಿಜಯ್ ಪ್ರತಿಕ್ರಿಯಿಸಿದ್ದಾರೆ. ಪತ್ನಿಯೊಂದಿಗಿನ ವಿಚ್ಛೇದನದ ವಿಚಾರವಾಗಿ ತಾವು ಯಾವುದೇ ಹೆಚ್ಚಿನ ಮಾತುಗಳನ್ನು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.