ಬಿಗ್ ಬಾಸ್ ಕನ್ನಡ ವಿಜೇತ ಶೈನ್ ಶೆಟ್ಟಿ ಇದೀಗ ಸುಮಂತ್ ಭಟ್ ನಿರ್ದೇಶನದ 'ಶಂಕರಾಭರಣ' ಎಂಬ ಹಾರರ್-ಕಾಮಿಡಿ ಚಿತ್ರದಲ್ಲಿ ಬಸ್ ಚಾಲಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಟೀಸರ್, ಬಸ್ ಕುರಿತಾದ ಕಥೆ ಹಾಗೂ ಅದರ ಪ್ರಯಾಣದ ವೇಳೆ ನಡೆಯುವ ವಿಚಿತ್ರ ಘಟನೆಗಳ ಪ್ರಮುಖ ಭಾಗವಾಗಿರುವಂತಹ ಒಂದು ಝಲಕ್ ಅನ್ನು ನೀಡುತ್ತದೆ.
ರಂಗಸ್ಥಳ ಸ್ಟುಡಿಯೋಸ್ ಬಿಡುಗಡೆ ಮಾಡಿರುವ ಈ ಟೀಸರ್, ಆರಂಭಿಕ ಕ್ಷಣಗಳಿಂದಲೇ ಒಂದು ರೀತಿಯ ಭಯಾನಕ ಹಾಗೂ ಕುತೂಹಲಕಾರಿ ವಾತಾವರಣವನ್ನು ಸೃಷ್ಟಿಸುತ್ತದೆ. ಕಗ್ಗತ್ತಲು ಹಾಗೂ ನಿಗೂಢ ವಾತಾವರಣದ ನಡುವೆ ಬಸ್ ಸಾಗುತ್ತಿದ್ದಂತೆ, ಪ್ರಯಾಣದ ಹಾದಿಯಲ್ಲಿ ಎದುರಾಗಬಹುದಾದ ಭಯಾನಕ ಸನ್ನಿವೇಶಗಳು ಮತ್ತು ಆತಂಕಕಾರಿ ಘಟನೆಗಳ ಸುಳಿವನ್ನು ಈ ಟೀಸರ್ ನೀಡುತ್ತದೆ.
'ಶಂಕರಾಭರಣ' ಬಸ್ಸಿನ ಚಾಲಕನಾಗಿರುವ ಶೈನ್ ಶೆಟ್ಟಿ ಅವರ ಪಾತ್ರ ನಿರೀಕ್ಷೆ ಕೆರಳಿಸಿದೆ. ರಸ್ತೆಯಲ್ಲೇ ಜೀವನ ಸಾಗಿಸುವ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅವರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ವಿಚಿತ್ರ ಹಾಗೂ ಹಾಸ್ಯಮಯ ಸನ್ನಿವೇಶಗಳನ್ನು ಎದುರಿಸುವಾಗ ಅವರ ದಿನಚರಿಯು ಅನಿರೀಕ್ಷಿತ ತಿರುವನ್ನು ಪಡೆದುಕೊಳ್ಳುತ್ತದೆ. ಪ್ರಯಾಣದ ವೇಳೆ ನಡೆಯುವ ಘಟನೆಗಳು ಮತ್ತು ಪಾತ್ರಗಳನ್ನು ಪರಸ್ಪರ ಬೆಸೆಯುವ ಮೂಲಕ, ಸ್ವತಃ ಆ ಬಸ್ಸೇ ಕಥನದ ಪ್ರಮುಖ ಭಾಗವಾಗಿ ರೂಪುಗೊಳ್ಳುತ್ತದೆ.
'ಏಕಮ್' ವೆಬ್ ಸರಣಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಮಿಥ್ಯ' ನಂತರ 'ಶಂಕರಾಭರಣ' ಮೂಲಕ ಸುಮಂತ್ ಭಟ್ ಅವರು ಕಮರ್ಷಿಯಲ್ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಸುಮಂತ್ ಭಟ್ ಅವರು ಹಾರರ್-ಕಾಮಿಡಿ ಪ್ರಕಾರವನ್ನು ಅನ್ವೇಷಿಸುತ್ತಲೇ, ಕಥೆಯ ಹಿನ್ನೆಲೆ ಮತ್ತು ಪಾತ್ರಗಳನ್ನು ದೈನಂದಿನ ಜೀವನಕ್ಕೆ ಹತ್ತಿರವಾಗಿರುವಂತೆ ರೂಪಿಸಿದ್ದಾರೆ.
ಶೈನ್ ಶೆಟ್ಟಿ ಅವರೇ ಕಥೆಯನ್ನು ಬರೆದಿರುವುದರ ಜೊತೆಗೆ, ಈ ಯೋಜನೆಯ ಮೂಲಕ ಅವರು ನಿರ್ಮಾಪಕರಾಗಿಯೂ ಚೊಚ್ಚಲ ಹೆಜ್ಜೆ ಇಡುತ್ತಿದ್ದಾರೆ.
ಶೈನ್ ಅವರು ದಿವಾಕರ್ ಶೆಟ್ಟಿ ಅವರೊಂದಿಗೆ ಸೇರಿ, ತಮ್ಮ 'ರಂಗಸ್ಥಳ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ 'ಶಂಕರಾಭರಣ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೊಸದಾಗಿ ಸ್ಥಾಪನೆಯಾಗಿರುವ ಈ ನಿರ್ಮಾಣ ಸಂಸ್ಥೆಯು ಕರಾವಳಿ ಭಾಗ ಹಾಗೂ ಕರ್ನಾಟಕದ ಇತರ ಪ್ರದೇಶಗಳ ಚಿತ್ರಗಳಿಗೆ ಬೆಂಬಲ ನೀಡಲು ಯೋಜಿಸಿದೆ.
ತನ್ವಿ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ಶೈನ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಇವರು ಈಗಾಗಲೇ 17ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.