ಬಿಗ್ ಬಾಸ್ ಕನ್ನಡ 13ರ ಸೀಸನ್ ಒಂದು ವಾರದ ಜರ್ನಿ ಮುಗಿಯುತ್ತಿದ್ದಂತೆಯೇ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗುತ್ತಿವೆ. ತನ್ನ ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್ನಲ್ಲಿ ಸೌಂದರ್ಯಾ ಹಾಗೂ ಮಂಜು ನಡುವೆ ದೊಡ್ಡ ಮಟ್ಟದ ಕಿತ್ತಾಟವೇ ನಡೆದಿದೆ. ತನಗೆ ಕೊಟ್ಟಿರುವ ವಸ್ತುಗಳನ್ನು ಪ್ರತಿಸ್ಪರ್ಧಿಗಳಿಂದ ಕಾಪಾಡಿಕೊಳ್ಳುವ ಆಟದಲ್ಲಿ ಮಂಜ, ಧನುಷ್ ಹಾಗೂ ಸೌಂದರ್ಯ ನಡುವೆ ಜಗಳ ಆಗಿದೆ. ಬಳಿಕ ಸೀಸನ್ 10ರಲ್ಲಿ ದೊಡ್ಡ ವಿವಾದ ಸೃಷ್ಟಿಸಿದ ಬಳೆ ವಿಚಾರ ಈಗ ಮತ್ತೇ ಭುಗಿಲೆದ್ದಿದೆ.
ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ವೊಂದರ ವೇಳೆ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಸಹ-ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಿರಣ್ ಶಾಸ್ತ್ರಿ, ‘ಬಳೆ ಹಾಕಿಕೊಂಡು ಕೂತ್ಕೊಂಡು ಬಿಡಿ ಎಲ್ಲರೂ’ ಎಂದು ಗಟ್ಟಿಯಾಗಿ ಕಿರುಚಿದ್ದಾರೆ.
ಟಾಸ್ಕ್ ವೇಳೆ ಕಿರಣ್ ಅವರ ಮಾತಿಗೆ ಮನೆಯ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಸೀಸನ್ 10ರಲ್ಲಿ ವಿನಯ್ ಗೌಡ ಅವರು ‘ಬಳೆ ತೊಟ್ಟುಕೊಳ್ಳಿ’ ಎಂದು ಹೇಳಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ವಿನಯ್ ಗೌಡ ಅವರಿಗೆ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಅದೇ ರೀತಿಯ ಹೇಳಿಕೆಯನ್ನು ಕಿರಣ್ ಶಾಸ್ತ್ರಿ ನೀಡಿದ್ದಾರೆ.
ಕಿರಣ್ ಅವರ ಈ ಮಾತು ಕೇಳುತ್ತಿದ್ದಂತೆ ಮನೆಯ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಳೆ ಹಾಕಿಕೊಂಡರೆ ಏನು? ಬಳೆ ಹಾಕಿಕೊಂಡರೆ ಏನು ತಪ್ಪು?’ ಎಂದು ಗಗನ್ ಪ್ರಶ್ನಿಸಿದ್ದಾರೆ. ಲಿಂಗ ತಾರತಮ್ಯ ಅಥವಾ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ರೀತಿಯಲ್ಲಿ ‘ಬಳೆ ಹಾಕಿಕೊಳ್ಳಿ’ ಎಂಬ ಮಾತನ್ನು ಬಳಸಬಾರದು ಎಂಬ ಆಕ್ಷೇಪ ವ್ಯಕ್ತವಾಗಿದೆ.
ಕಿರಣ್ ಶಾಸ್ತ್ರಿ ಅವರ ಹೇಳಿಕೆಗೆ ಮನೆಯ ಸ್ಪರ್ಧಿಗಳೇ ವಿರೋಧ ವ್ಯಕ್ತಪಡಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಕಿಚ್ಚ ಸುದೀಪ್ ಅವರು ಕಿರಣ್ ಶಾಸ್ತ್ರಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಯಾವ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ.