ಬೆಂಗಳೂರು: ಎರಡನೇ ಬಾರಿಗೆ ಬಿಗ್ಬಾಸ್ಗೆ ಪ್ರವೇಶ ಪಡೆದಿದ್ದ ಖ್ಯಾತ ನಿರ್ದೇಶಕ ಮತ್ತು ನಟ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಕಾರಣದಿಂದ ರಿಯಾಲಿಟಿ ಶೋನಿಂದ ಅಧಿಕೃತವಾಗಿ ಹೊರನಡೆದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಿರಂತರವಾಗಿ ಟಾಸ್ಕ್ಗಳಲ್ಲಿ ಭಾಗವಹಿಸಿದ್ದರಿಂದ ತೀವ್ರ ದೈಹಿಕ ಆಯಾಸ ಹಾಗೂ ಕಾಲಿನ ನೋವು ಕಾಣಿಸಿಕೊಂಡಿತ್ತು. ಇದರ ಪರಿಣಾಮ ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯದ ದೃಷ್ಟಿಯಿಂದ ಶೋನಲ್ಲಿ ಮುಂದುವರಿಯದಿರಲು ನಿರ್ಧರಿಸಿದ ಓಂ ಪ್ರಕಾಶ್ ರಾವ್ ಅವರು ಈಗ ಮನೆಗೆ ಮರಳಿದ್ದಾರೆ.
ಇದೀಗ ಬಿಗ್ ಬಾಸ್ ತಂಡದ ವಿರುದ್ಧವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಓಂ ಪ್ರಕಾಶ್ ರಾವ್ ಅವರು, ಊಟ ತಿಂಡಿಯಿಂದ ನನ್ನ ಆರೋಗ್ಯ ಹಾಳಾಯ್ತು. ಯಾಕೆ ಹೀಗೆ ಮಾಡಿದ್ರು ಅಂತ ಗೊತ್ತಿಲ್ಲ. ಆದರೆ ಹೆಚ್ಚು ಕಡಿಮೆಯಾಗಿದ್ರೆ ಸ್ಟ್ರೋಕ್ ಆಗುವ ಸಾಧ್ಯತೆ ಇತ್ತು ಎಂದು ಬಿಗ್ ಬಾಸ್ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಬಿಗ್ ಬಾಸ್ ಗೆ ಹೋಗುವ ಮುಂಚೆಯೇ ನಾನು ತಂಡಕ್ಕೆ ಹೇಳಿದ್ದೆ. ಶುಗರ್ ಇದೆ, ಊಟ ತಿಂಡಿ ವಿಚಾರವಾಗಿ ಸರಿ ಇರಬೇಕು ಅಂತ. ಆದರೆ ಯಾಕೆ ಹೀಗೆ ಮಾಡಿದ್ರು ಗೊತ್ತಿಲ್ಲ. ಹೆಚ್ಚು ರೈಸನ್ನೇ ಕೊಟ್ಟರು. ಶುಗರ್ ಜಾಸ್ತಿ ಆಯ್ತು. ಶುಗರ್ 400 ದಾಟಿದೆ, ಬಿಪಿ 180/90 ಗೆ ಹೋಗಿದೆ. ಹೆಚ್ಚು ಕಡಿಮೆಯಾಗಿದ್ರೆ ಸ್ಟ್ರೋಕ್ ಆಗ್ತಿತ್ತು ಅಂತ ವೈದ್ಯರು ಹೇಳಿರುವುದಾಗಿ ಓಂ ಪ್ರಕಾಶ್ ರಾವ್ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ನಮಗೆ ಹೆಚ್ಚು ಕಡಿಮೆಯಾಗಿದ್ರೆ ಯಾರು ಜವಾಬ್ದಾರರು? ಈ ವಿಚಾರವಾಗಿ ನನಗೆ ಬೇಜಾರಿದೆ. ಎರಡೇ ವಾರಕ್ಕೆ ವಾಪಸ್ ಬಂದೇ ಅನ್ನೋ ಬೇಸರ ಕೂಡ ಇದೆ. ಒಳಗೆ ಆರೋಗ್ಯ ಸ್ವಲ್ಪ ಏರು ಪೇರಾಯ್ತು. ಕೂಡಲೇ ಆಸ್ಪತ್ರೆಗೆ ಕರೆ ತಂದರು. ಬಳಿಕ ಫ್ಯಾಮಿಲಿ ಡಾಕ್ಟರ್ ಜೊತೆ ಮಾತನಾಡಿ ಇಲ್ಲಿಗೆ ಶಿಫ್ಟ್ ಆದೆ. 15 ದಿನ ಚಿಕಿತ್ಸೆ ಗೆ ಹೇಳಿದ್ದಾರೆ. 15 ದಿನ ಆದ್ಮೇಲೆ ಆರೋಗ್ಯ ಬಗ್ಗೆ ವೈದ್ಯರ ಸಲಹೆ ಪಡೆದು, ಮತ್ತೆ ಅವಕಾಶ ಬಂದರೆ ಏನ್ ಮಾಡೋದು ಅಂತ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.