ಕಿಮ್ ಕರ್ದಾಶಿಯನ್‌ Online Desk
ಸಿನಿಮಾ ಸುದ್ದಿ

ಖ್ಯಾತನಟಿಯ 53 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳ್ಳತನ; ಆದರೆ, 10 ವರ್ಷಗಳ ಬಳಿಕ ಕಿಮ್ ಕರ್ದಾಶಿಯನ್‌ಗೆ ಸಿಕ್ಕಿದ್ದು ಬರೀ ₹105 ಪರಿಹಾರ!

ಅಮೆರಿಕಾದ ಪ್ರಸಿದ್ಧ ರಿಯಾಲಿಟಿ ಟಿವಿ ತಾರೆ ಕಿಮ್ ಕರ್ದಾಶಿಯನ್ ಭೀಕರ ದರೋಡೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಒಡವೆಗಳನ್ನು ಕಳೆದುಕೊಂಡರೂ, ಅವರಿಗೆ ಫ್ರಾನ್ಸ್ ನ್ಯಾಯಾಲಯದಿಂದ ಕೇವಲ 1 ಯೂರೋ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹105) ಸಾಂಕೇತಿಕ ಪರಿಹಾರ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

ಪ್ಯಾರಿಸ್ (ಫ್ರಾನ್ಸ್): ಬರೋಬ್ಬರಿ 53 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾದರೆ ಯಾರಾದರೂ ಸುಮ್ಮನಿರುತ್ತಾರಾ? ಆದರೆ ಹಾಲಿವುಡ್ ಖ್ಯಾತ ತಾರೆ ಕಿಮ್ ಕರ್ದಾಶಿಯನ್ ಪ್ರಕರಣದಲ್ಲಿ ಪ್ಯಾರಿಸ್ ನ್ಯಾಯಾಲಯ ನೀಡಿದ ತೀರ್ಪು ಕೇಳಿದರೆ ಯಾರೂ ಕೂಡ ಒಂದು ಕ್ಷಣ ನಿಬ್ಬೆರಗಾಗುವುದು ಖಂಡಿತ. ಯಾಕಂದ್ರೆ, 2016ರಲ್ಲಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಪ್ಯಾರಿಸ್ ಹೋಟೆಲ್ ದರೋಡೆ ಪ್ರಕರಣದಲ್ಲಿ, ಸುಮಾರು ಒಂದು ದಶಕದ ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯ ಕಿಮ್‌ಗೆ ನೀಡಿದ ಪರಿಹಾರ ಮೊತ್ತ ಕೇವಲ 1 ಯೂರೋ, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೀ 105 ರೂಪಾಯಿ! ಇಷ್ಟು ದೊಡ್ಡ ಮೊತ್ತದ ನಷ್ಟ ಅನುಭವಿಸಿದ ನಟಿಗೆ ಸಿಕ್ಕಿದ್ದು ಇಷ್ಟೇನಾ ಅಥವಾ ಇದರ ಹಿಂದೆ ಬೇರೆಯದ್ದೇ ಕಾರಣವಿದೆಯಾ? ಆ ಕುತೂಹಲಕಾರಿ ಸತ್ಯ ಇಲ್ಲಿದೆ.

ಏನಿದು ಘಟನೆ?

2016 ರಲ್ಲಿ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಲು ಕಿಮ್ ಕರ್ದಾಶಿಯನ್ ಫ್ರಾನ್ಸ್‌ಗೆ ಹೋಗಿದ್ದಾಗ, ಅವರು ತಂಗಿದ್ದ ಐಷಾರಾಮಿ ಹೋಟೆಲ್ ರೂಮಿಗೆ ಬಂದೂಕುಧಾರಿ ಕಳ್ಳರು ನುಗ್ಗಿದ್ದರು. ಕಿಮ್ ಅವರ ಕೈಕಾಲು ಕಟ್ಟಿ ಹಾಕಿ, ಬಾತ್ ರೂಮಿನಲ್ಲಿ ಕೂಡಿಟ್ಟು ಭೀಕರವಾಗಿ ದರೋಡೆ ಮಾಡಲಾಗಿತ್ತು. ಈ ದರೋಡೆಯಲ್ಲಿ ಕಳ್ಳರು ಕಿಮ್ ಅವರ ₹38 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ಸೇರಿದಂತೆ ಒಟ್ಟು ₹57 ಕೋಟಿಯಿಂದ ₹95 ಕೋಟಿಗೂ ಅಧಿಕ (ಸುಮಾರು 6 ಮಿಲಿಯನ್ ಡಾಲರ್) ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದರು.

ಹಾಗಾದ್ರೆ, ಕೇವಲ ₹105 ಪರಿಹಾರ ಸಿಕ್ಕಿದ್ದು ಏಕೆ?

ಸುದೀರ್ಘ ವಿಚಾರಣೆಯ ನಂತರ ಪ್ಯಾರಿಸ್ ನ್ಯಾಯಾಲಯವು ಈ ದರೋಡೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿತು. ಈ ಸಂದರ್ಭದಲ್ಲಿ ಕಿಮ್ ಕರ್ದಾಶಿಯನ್ ಅವರು ನ್ಯಾಯಾಲಯದ ಬಳಿ ಹಣದ ರೂಪದಲ್ಲಿ ಯಾವುದೇ ದೊಡ್ಡ ಮೊತ್ತದ ಪರಿಹಾರವನ್ನು ಕೇಳಲಿಲ್ಲ. ಬದಲಿಗೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಮತ್ತು ತಮಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ ಕೇವಲ 1 ಸಾಂಕೇತಿಕ ಯೂರೋ (€1) ಪರಿಹಾರವನ್ನು ತಾವಾಗಿಯೇ ಕೇಳಿದ್ದರು. ಅದರಂತೆ, ಕಿಮ್ ಅವರ ಮನವಿಯ ಮೇರೆಗೆ ಫ್ರೆಂಚ್ ನ್ಯಾಯಾಲಯವು ಅಪರಾಧಿಗಳಿಂದ ಕೇವಲ 1 ಯೂರೋ ಪರಿಹಾರವನ್ನು ಕೊಡಿಸಲು ಆದೇಶಿಸಿತು. ಈ ಒಂದು ಯೂರೋ ಭಾರತೀಯ ಕರೆನ್ಸಿಯಲ್ಲಿ ಸದ್ಯಕ್ಕೆ ಸುಮಾರು ₹105 ಆಗುತ್ತದೆ. ಏತನ್ಮಧ್ಯೆ, ಅವರ ಜೊತೆಗಿದ್ದ ಸ್ಟೈಲಿಸ್ಟ್ ಕೂಡ ಕೇವಲ 1 ಯೂರೋ ಪಡೆದಿದ್ದಾರೆ.

ಮುಂದುವರೆದು, ತೀರ್ಪಿನ ನಂತರ ಹೇಳಿಕೆ ಬಿಡುಗಡೆ ಮಾಡಿದ ಕಿಮ್ ಕರ್ದಾಶಿಯನ್, "ಆ ಘಟನೆ ನಮಗೆ ತೀವ್ರ ಆಘಾತ ತಂದಿತ್ತು. ಇಂದಿನ ನ್ಯಾಯಾಲಯದ ತೀರ್ಪು ನಮಗೆ ಸಿಗಬೇಕಾದ ಹಣದ ಬಗ್ಗೆ ಅಲ್ಲ, ಬದಲಿಗೆ ತಪ್ಪಿತಸ್ಥರ ಹೊಣೆಗಾರಿಕೆ ಮತ್ತು ನಮಗೆ ಸಂದ ಜಯದ ಗುರುತಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಈ ದರೋಡೆ ನಡೆದಾಗ ಹೋಟೆಲ್‌ನಲ್ಲಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ರಿಸೆಪ್ಷನಿಸ್ಟ್‌ಗೆ ನ್ಯಾಯಾಲಯವು ಸುಮಾರು ₹1 ಕೋಟಿಗೂ ಅಧಿಕ (109,516 ಯೂರೋ) ದೊಡ್ಡ ಮೊತ್ತದ ಪರಿಹಾರ ನೀಡಿದೆ. ಹಾಗೆಯೇ ಹೋಟೆಲ್‌ಗೆ ₹46 ಲಕ್ಷಕ್ಕೂ ಹೆಚ್ಚು (50,000 ಯೂರೋ) ನಷ್ಟ ಪರಿಹಾರ ನೀಡಲಾಗಿದೆ. ಆದರೆ, ಕಳೆದುಹೋದ ಕಿಮ್ ಕರ್ದಾಶಿಯನ್ ಅವರ ಬಹುತೇಕ ಒಡವೆಗಳು ಇಂದಿಗೂ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಆಯ್ಕೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!