ಪುರುಷೋತ್ತಮನ ಪ್ರಸಂಗ ಸಿನಿಮಾ ಸ್ಟಿಲ್
ಪುರುಷೋತ್ತಮನ ಪ್ರಸಂಗ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

'ಪುರುಷೋತ್ತಮನ ಪ್ರಸಂಗ' ಚಿತ್ರ ವಿಮರ್ಶೆ: ಮಾಯಾನಗರಿ ದುಬೈ ಮೋಹದಲ್ಲಿ ಬಿದ್ದ ಮಧ್ಯಮ ವರ್ಗದ ಯುವಕನ ಕಥೆ-ವ್ಯಥೆ!

Shilpa D

ಪುರುಷೋತ್ತಮನ‌ ಪ್ರಸಂಗ ಶೀರ್ಷಿಕೆಯಿಂದಲೇ ತಿಳಿಯುತ್ತದೆ ಇದೊಂದು ಹಾಸ್ಯಮಯ ಸಿನಿಮಾ ಎಂದು. ತುಳು ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾದ ದೇವದಾಸ್ ಕಾಪಿಕಾಡ್ ಆ್ಯಕ್ಷನ್​ ಕಟ್​ ಹೇಳಿರುವ ಮೊದಲ ಕನ್ನಡ ಸಿನಿಮಾ.

ಹಣ ಸಂಪಾದಿಸಲು ಮಧ್ಯಮ ವರ್ಗದ ಬಹುತೇಕ ಜನರು ಆಯ್ದುಕೊಳ್ಳುವುದು ದುಬೈ ಎಂಬ ಮಾಯನಗರಿಯನ್ನು. ಅದರಲ್ಲೂ ವಿಶೇಷವಾಗಿ ಕರಾವಳಿ ತೀರದ ಜನರಲ್ಲಿ ಕೊಂಚ ದುಬೈ ಮೋಹ ಹೆಚ್ಚು. ಇದೇ ರೀತಿ ನಮ್ಮ ಕಥಾ ನಾಯಕ ಪುರುಷೋತ್ತಮ ದುಬೈಗೆ ಹಾರುತ್ತಾನೆ. ಆನಂತರ ಅಲ್ಲಿ ಆತನಿಗೆ ತಿಳಿಯುವ ವಾಸ್ತವ ಏನು, ತಾನು ಕಂಡ ಕನಸು ನನಸು ಮಾಡಿಕೊಳ್ಳುತ್ತಾನೆಯೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.

ತಮ್ಮ ಆರ್ಥಿಕ ಸಂಕಷ್ಟಗಳನ್ನು ಬಗೆ ಹರಿಸಿಕೊಳ್ಳಲು ದುಬೈಗೆ ತೆರಳಬೇಕು, ಅಲ್ಲಿ ಚೆನ್ನಾಗಿ ಸಂಪಾದಿಸಿ, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ತನ್ನ ಆಸೆಗಳನ್ನು ನೆರವೇರಿಸಿಕೊಳ್ಳಬೇಕು ಎಂಬ ಕನಸಿನೊಂದಿಗೆ ಸಿನಿಮಾ ಆರಂಭವಾಗುತ್ತದೆ. ಕಥಾ ನಾಯಕ ಪುರುಷ (ಅಜಯ್ ಪೃಥ್ವಿ ರಾಷ್ಟ್ರಕೂಟ) ದುಬೈ ಗೆ ತೆರಳಲು ಪಡುವ ಪಾಡನ್ನ ಕಥೆ ಹೆಣೆದು ಸಿನಿಮಾ ರೂಪ ಕೊಟ್ಟಿದ್ದಾರೆ ದೇವದಾಸ್‌ ಕಾಪಿಕಾಡ್‌.

ದಕ್ಷಿಣ ಕನ್ನಡದ ಭಾಗದ ಹಿನ್ನೆಲೆಯಲ್ಲಿ ಸಿನಿಮಾದ ಕಥೆಯಿದೆ. ಊರುಗಳಲ್ಲಿ ಕನಿಷ್ಠ ನಾಲ್ಕೈದು ಮಂದಿಯಾದರೂ ದುಬೈನಲ್ಲಿ ದುಡಿಯುವವರು ಸಿಗುತ್ತಾರೆ. ಅದೇ ರೀತಿ ಪುರುಷ ಕೂಡ ದುಬೈ ಗೆ ತೆರಳಿ ಹಣ ಸಂಪಾದಿಸಿ ತನ್ನ ಸಹೋದರಿ ಮದುವೆ ಮಾಡಿ ವಯಸ್ಸಾದ ಪೋಷಕರನ್ನು ನೋಡಿಕೊಳ್ಳಲು ನಿರ್ಧರಿಸುತ್ತಾನೆ, ತನ್ನ ದುಬೈ ಕನಸು ನನಸು ಮಾಡಿಕೊಳ್ಳಲು ತಾನು ಪ್ರೀತಿಸಿದ ಆತ್ಮಿಕಾ(ರಿಷಿಕಾ ನಾಯಕ್)ಳನ್ನು ಬಿಡುತ್ತಾನೆಯೇ? ಅವನಿಗೆ ಎದುರಾಗುವ ಅಡೆತೆಡಗಳು ಆತನ ಕನಸು ನಿರೀಕ್ಷಿತ ಸಂದರ್ಭಗಳು ಆತನನ್ನು ದಾರಿ ತಪ್ಪಿಸುತ್ತವೆಯೆ? ಸಿನಿಮಾದಲ್ಲಿ ನಾಯಕನ ಭಾನಾತ್ಮಕ ಹೋಯ್ದಾಟದ ಬಗ್ಗೆ ದೇವದಾಸ್ ಕಾಪಿನಾಡ್ ಉತ್ತಮವಾಗಿ ಚಿತ್ರಿಸಿದ್ದಾರೆ.

ಒಂದು ಸಣ್ಣ ಪ್ರವಾಸದಲ್ಲಿ ದುಬೈಗೆ ಭೇಟಿ ನೀಡುವುದು ಚೆನ್ನಾಗಿ ಅನ್ನಿಸಬಹುದು. ಆದರೆ ಅನೇಕ ಮಧ್ಯಮ ವರ್ಗದ ಯುವಕರು ತಮ್ಮ ಹಿಡಿತ ಮೀರಿದ ಜೀವನಶೈಲಿಗಾಗಿ ಹಾತೊರೆಯುವುದ್ನು ದೇವದಾಸ್ ಕಾಪಿಕಾಡ್ ಚಿತ್ರಿಸಿದ್ದಾರೆ.

ದುಬೈ ಗೆ ತೆರಳಿದ ಪುರುಷನಿಗೆ ಅಲ್ಲಿನ ವಲಸಿಗರ ಕಷ್ಟಗಳು, ಸಮಸ್ಯೆಗಳು, ಕರುಣೆಯಿಲ್ಲದ ಜನರ ನಿಜಮುಖದ ಅನಾವರಣವಾಗುತ್ತದೆ, ಕಾರ್ಮಿಕ ಶಿಬಿರಗಳಲ್ಲಿನ ಜೀವನದ ಕಟುವಾದ ವಾಸ್ತವಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ರೀತಿಯ ನಿರೂಪಣೆಗಳು ಸಾಮಾನ್ಯವೆಂದು ತೋರುತ್ತದೆಯಾದರೂ, ನಾಯಕನಾಗಿ ಅಜಯ ಪೃಥ್ವಿ ಅವರ ಚೊಚ್ಚಲ ಅಭಿನಯವು ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಆತನ ನಡವಳಿಕೆಯು ಮಧ್ಯಮ ವರ್ಗದ ಯುವಕನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಸಾಮಾಜಿಕ ಅಸಮಾನತೆಗಳ ಪ್ರತಿಬಿಂಬವಾಗಿ ಮಹತ್ವಾಕಾಂಕ್ಷೆಗಳನ್ನು ಪರಿಣಾಮಕಾರಿಯಾಗಿ ಎತ್ತಿ ತೋರಿಸುತ್ತದೆ.

ಪ್ರೇಮಿಯ ಪಾತ್ರದಲ್ಲಿ ನಟಿಸಿರುವ ರಿಷಿಕಾ ನಾಯಕ್ ಇರುವ ಕಡಿಮೆ ಸಮಯದಲ್ಲಿ ಅತ್ಯುತ್ತಮವಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ನಿರ್ದೇಶಕ ದೇವದಾಸ್ ಕಾಪಿಡ್ ದುಬೈನಿಂದ ಹಿಂದಿರುಗಿದ ಕರುಣಾಕರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪಾತ್ರ ಭಾರತೀಯ ವಲಸಿಗರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರಂತಹ ಪೋಷಕ ಪಾತ್ರಗಳು ಚಿತ್ರಕ್ಕೆ ಅನಾವಶ್ಯಕ ಎನಿಸುತ್ತದೆ.

ಆದರೂ ಸ್ಥಳೀಯ ಕಥಾವಸ್ತುವನ್ನು ನಿರ್ದೇಶಕರು ಸದ್ಯದ ಜೀವನ ಸ್ಥಿತಿಗೆ ಹೊಂದಿಕೊಳ್ಳುವಂತೆ ತೆರೆದಿಟ್ಟಿದ್ದಾರೆ, ಕೆಲವು ಸಂದರ್ಭಗಳಲ್ಲಿ ಬರುವ ಹಾಸ್ಯ ದೃಶ್ಯಗಳು ನಕ್ಕು ನಗಿಸುತ್ತವೆ. ಹಾಡುಗಳ ಸಂಗೀತ ಚೆನ್ನಾಗಿದೆ, ಆದರೆ ನಕುಲ್ ಅಭಯಂಕರ್ ಅವರ ಹಿನ್ನೆಲೆ ಸಂಗೀತ ಸಾಕಷ್ಟು ಗುಣಮಟ್ಟದಿಂದ ಕೂಡಿಲ್ಲ, ಕರಾವಳಿ ಭಾಗದ ಛಾಯಾಗ್ರಹಣ ಕಥೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.

ಕೌಟುಂಬಿಕ ಬಾಂಧವ್ಯ, ಮತ್ತು ಕುಟುಂಬಕ್ಕಾಗಿ ನಾಯಕ ಮಾಡುವ ತ್ಯಾಗ ಗಮನಾರ್ಹವಾಗಿದೆ. ತಮ್ಮ ತಾಯ್ನಾಡಿನಲ್ಲಿಯೇ ಶಾಂತಿ, ಸಂತೋಷ ಮತ್ತು ಯಶಸ್ಸನ್ನು ಕಂಡುಕೊಳ್ಳಬೇಕು ಎಂಬ ಸಂದೇಶ ರವಾನಿಸಿದೆ.

ಸಿನಿಮಾ: ಪುರುಷೋತ್ತಮ ಪ್ರಸಂಗ

ನಿರ್ದೇಶನ: ದೇವದಾಸ್‌ ಕಾಪಿಕಾಡ್‌

ಕಲಾವಿದರು: ಅಜಯ ಪೃಥ್ವಿ ರಾಷ್ಟ್ರಕೂಟ, ರಿಷಿಕಾ ನಾಯಕ್, ದೇವೇಂದ್ರ ಕಾಪಿಕಾಡ್

SCROLL FOR NEXT