ಫೈರ್ ಫ್ಲೈ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

Firefly Movie Review: ಸಂಬಂಧಗಳಲ್ಲಿ ಬೆಳಕಿನ ಹುಡುಕಾಟ; ಮಾನಸಿಕ ಖಿನ್ನತೆಯಿಂದ ಬಿಡಿಸಿಕೊಳ್ಳುವ ತೊಳಲಾಟ!

Shilpa D

ಚೊಚ್ಚಲ ಬಾರಿಗೆ ನಿರ್ದೇಶಕನಾಗಿರುವ ವಂಶಿಕೃಷ್ಣ ನಾಯಕನಾಗಿಯೂ ನಟಿಸಿದ್ದಾರೆ. ವಂಶಿಕೃಷ್ಣ ನಿರ್ದೇಶನದ ಫೈರ್ ಫ್ಲೈ ಸಿನಿಮಾ ತೆರೆಕಂಡಿದೆ, ಚಿತ್ರವನ್ನು ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣ ಮಾಡಿದ್ದಾರೆ, Firefly ಮೂಲಕ ಬೆಳ್ಳಿತೆರೆಗೆ ನಿರ್ಮಾಪಕಿಯಾಗಿ ಕಾಲಿರಿಸಿದ್ದಾರೆ.

ಈ 'ಫೈರ್ ಫ್ಲೈ' ಅಂದರೆ ಮಿಂಚುಹುಳ, ಆದರೆ ಚಿತ್ರತಂಡ ಬೆಳಕಿನಾಚೆಗೆ ಮೂಡುವ ಬೆಳಕೊಂದಕ್ಕೆ 'ಫೈರ್ ಫ್ಲೈ' ಅಂತ ಇಲ್ಲಿ ಕರೆಯಲಾಗಿದೆ. ಜೀವನದಲ್ಲಿ ಎಲ್ಲವೂ ಸುಗಮವಾಗಿ ಸಾಗಿದ್ದರೆ ಬದುಕೇ ಸೊಗಸು. ಒಮ್ಮೆ ಬಾಳಲ್ಲಿ ಏರುಪೇರಾದರೆ ಮುಂದೆ ಎದುರಾಗುವ ಸುಖ ದುಃಖದ ಸಂಕಷ್ಟಗಳೇ ದೊಡ್ಡ ಸರಮಾಲೆಯಂತೆ ಕಾಣುತ್ತದೆ. ಅಂತದ್ದೇ ಒಬ್ಬ ಹುಡುಗನ ಸುಂದರವಾಗಿದ್ದ ಬದುಕಲ್ಲಿ ಎದುರಾಗುವ ದುರಂತ ಘಟನೆ ಏನೆಲ್ಲಾ ಎಡವಟ್ಟು ಮಾಡುತ್ತದೆ ಎಂಬುದೇ ಸಿನಿಮಾ ತಿರುಳು, ಆತ ತನ್ನ ಜೀವನದ ಸುಖ -ದುಃಖಗಳ ಜಂಜಾಟದಲ್ಲಿ ಹೇಗೆ ಬೆಳಕು ಕಂಡುಕೊಳ್ಳುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.

ವಿವೇಕಾನಂದ ಅಪ್ಪ-ಅಮ್ಮನ ಪ್ರೀತಿಯ ವಿಕ್ಕಿ(ವಂಶಿ). ವಿದೇಶದಲ್ಲಿ ಓದುತ್ತಿದ್ದ ಆತ ನಾಲ್ಕು ವರ್ಷಗಳ ಬಳಿಕ ತನ್ನೂರಾದ ಮೈಸೂರಿಗೆ ಮರಳುತ್ತಾನೆ. ತನ್ನ ದೊಡ್ಡಪ್ಪನ ಮಗನ ಮದುವೆಗಾಗಿ ಆತ ಮೈಸೂರಿಗೆ ಬರುತ್ತಾನೆ. ಆತನನ್ನು ಸ್ವಾಗತಿಸಲು ಅಪ್ಪ–ಅಮ್ಮ(ಅಚ್ಯುತ್‌ ಕುಮಾರ್‌-ಸುಧಾರಾಣಿ) ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಅಲ್ಲಿಂದ ಮರಳುವ ವೇಳೆ ಅಪಘಾತವಾಗಿ ವಿಕ್ಕಿ ಅಪ್ಪ-ಅಮ್ಮನನ್ನು ಕಳೆದುಕೊಳ್ಳುತ್ತಾನೆ.

ಕೋಮಾಗೆ ಮರಳಿದ ಮೂರು ತಿಂಗಳ ನಂತರ ಪ್ರಜ್ಞೆ ಮರಳುತ್ತದಾದರೂ ಅವನು ಮೊದಲಿನಂತೆ ಇರುವುದಿಲ್ಲ. ದೊಡ್ಡ ಕುಟುಂಬವಿದ್ದರೂ ಒಬ್ಬಂಟಿಯಾಗಿರುವ ಆತ ಖಿನ್ನತೆ, ನಿದ್ರಾಹೀನತೆ, ಒಂಟಿತನ ಮತ್ತು ತನ್ನನ್ನು ಪ್ರೀತಿಸುವವರಿಲ್ಲದೆ ನರಳುತ್ತಾನೆ. ಜೀವನದಲ್ಲಿ ಉದ್ದೇಶವಿಲ್ಲದೆ, ಏನು ಮಾಡಬೇಕೆಂದು ಗೊತ್ತಿಲ್ಲದೆ ಕಷ್ಟಪಡುತ್ತಾನೆ. ಇದೆಲ್ಲವನ್ನೂ ಆತ ಹೇಗೆ ಎದುರಿಸುತ್ತಾನೆ ಎಂಬುದೇ ಚಿತ್ರದ ಕಥೆ. ಅಲ್ಲಿಂದ ವಿಕ್ಕಿ ಖಿನ್ನತೆಗೆ ಜಾರುತ್ತಾನೆ, ನಿದ್ರಾಹೀನನಾಗುತ್ತಾನೆ. ಇದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಚಿತ್ರದ ಕಥೆ.

ಕಥೆಯ ಎಳೆ ಸರಳವಾಗಿದೆ. ಆದರೆ ಇದನ್ನು ಒಂದು ಭಿನ್ನವಾದ ರೀತಿಯ ಚಿತ್ರಕಥೆಯಲ್ಲಿ ವಂಶಿ ಪ್ರಸ್ತುತಪಡಿಸಿದ್ದಾರೆ. ಚಿತ್ರಕಥೆಯ ಆಲೋಚನೆಯೇ ವಿಭಿನ್ನವಾಗಿದೆ. ಕೌನ್ಸಿಲಿಂಗ್‌ ಸಂದರ್ಭದಲ್ಲಿ ವಂಶಿ ತನ್ನ ಜೀವನದ ಕಥೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ರೀತಿಯಲ್ಲಿ ಸಿನಿಮಾ ಕಥೆಯ ನಿರೂಪಣೆಯಿದೆ. ಸಾಮಾನ್ಯವಾಗಿ ಈಗಿನ ಜನರೇಷನ್‌ ಫೇಸ್ ಮಾಡುವ ಒಂಟಿತನ, ನಿದ್ರಾಹೀನತೆ, ಖಿನ್ನತೆಯಂತಹ ವಿಚಾರಗಳನ್ನ ಹೈಲೈಟ್ ಮಾಡಿಕೊಂಡು, ಸ್ಕ್ರೀನ್ ಪ್ಲೇ ಮಾಡಿಕೊಂಡಿದ್ದಾರೆ ವಂಶಿ. ಮಾನಸಿಕ ತೊಳಲಾಟದಲ್ಲಿ ಇರುವವರು ಎದುರಿಸುವ ಸವಾಲುಗಳನ್ನು ಅತ್ತ ಹಾಸ್ಯಮಯವಾಗಿಯೂ, ಇತ್ತ ಭಾವುಕವಾಗಿಯೂ ಪರದೆ ಮೇಲೆ ತರುವ ಪ್ರಯತ್ನ ಮಾಡಲಾಗಿದೆ.

ಮೊದಲಾರ್ಧ ಚಿತ್ರ ಸ್ವಲ್ಪ ನಿಧಾನವೆನಿಸಿದರೂ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ವಿಪರೀತ ಎಳೆದಂತಾಗಿದೆ. ಕೆಲ ದೃಶ್ಯಗಳು ಸಿನಿಮಾದ ಅವಧಿಯನ್ನು ಹೆಚ್ಚು ಮಾಡಿದೆ ಎಂಬಂತೆ ಭಾಸವಾಗುತ್ತದೆ. ಕಲಾತ್ಮಕವಾಗಿ ಒಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿರುವ ವಂಶಿ, ಚಿತ್ರಕಥೆ ವಿಷಯದಲ್ಲಿ ಇನ್ನಷ್ಟು ಗಮನಹರಿಸಬೇಕಿತ್ತು. ಕೆಲವು ವಿಷಯಗಳು ಮತ್ತು ದೃಶ್ಯಗಳು ಚಿತ್ರವನ್ನು ಸಾಕಷ್ಟು ಸುದೀರ್ಘವಾಗಿಸಿವೆ.

ವಂಶಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ನಟನೆಯಲ್ಲಿ ಅವರು ಪಳಗಿದ್ದಾರೆ. ಸುಧಾರಾಣಿ ಮತ್ತು ಅಚ್ಯುತ್ ಕುಮಾರ್ ಅವರು ಇದ್ದಷ್ಟು ಹೊತ್ತು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾರೆ. ನಟಿ ರಚನಾ ಇಂದರ್ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ ಒಂದು ಹಾಡು ಮತ್ತು ಎರಡು ಸೀನ್ ಗೆ ಮಾತ್ರ ಸೀಮಿತ. ಶಿವರಾಜ್​ಕುಮಾರ್ ಅವರು ಒಂದು ವಿಶೇಷ ಪಾತ್ರದಲ್ಲಿ ಬಂದುಹೋಗುತ್ತಾರೆ. ಚರಣ್ ರಾಜ್ ಅವರ ಸಂಯೋಜನೆಯ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಅಭಿಲಾಷ್ ಕಳತ್ತಿ ಛಾಯಾಗ್ರಹಣ ಚಿತ್ರಕ್ಕೆ ಹೊಸ ರೂಪ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT