ಜಾನಕಿಗೆ ವಾಲ್ಮೀಕಿ ಮಹರ್ಷಿಗಳ ಅಭಯ 
ಅಂಕಣಗಳು

ಆಶ್ರಮದಲ್ಲಿ ಸೀತೆ, ದಿಕ್ಕು ತೋಚದ ಜಾನಕಿಗೆ ವಾಲ್ಮೀಕಿ ಮಹರ್ಷಿಗಳ ಅಭಯ

ನಿನ್ನ ಗಂಡನ ಸತ್ಯ ಸಂಕಲ್ಪ. ಚಿಂತಿಸಬೇಡ , ಇದೆಲ್ಲ ವಿಧಿಯ ಲೀಲೆ . ನೀನು ನಿನ್ನ ತೌರಿಗೆ ಬಂದಿದ್ದೀಯೆ ಎಂದು ತಿಳಿ ; ನಿಶ್ಶಂಕೆಯಿಂದ ಇರು . ನಡೆ , ನಮ್ಮ ಆಶ್ರಮಕ್ಕೆ ಹೋಗೋಣ . "

ಸರಿ ಸರಿ . ನಿನ್ನೆ ರಾಜಾರಾಮರು ಹೇಳಿಕಳಿಸಿದ್ದುದು ಇದನ್ನೇ ತಾನೆ ? ತಮಗೊದಗಿದ ದುಸ್ಥಿತಿಯನ್ನು , ಜನಾಪವಾದವನ್ನು , ತಾವೆಷ್ಟೇ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದ್ದರೂ ಜನರು ತನ್ನನ್ನು ದೂಷಿಸುತ್ತಿರುವ ಪರಿಯನ್ನು , ಬಗೆಬಗೆಯಾಗಿ ಬಣ್ಣಿಸಿ ಗುಪ್ತ ಪತ್ರದಲ್ಲಿ ತಮ್ಮ ಕರುಳು ತುಂಬಿದ ಶೋಕವನ್ನೆಲ್ಲ ಅಕ್ಷರವಾಗಿಸಿಬಿಟ್ಟಿದ್ದರು . ’ಇಡೀ ಊರಿಗೆ ಊರೇ , ನಾಡಿಗೆ ನಾಡೇ ಸೀತೆಯನ್ನು ಕರೆತಂದದ್ದು ತಪ್ಪೆಂದೂ , ತಾನು ಕಾಮುಕನೆಂದೂ ದೂಷಿಸುತ್ತಿರುವಾಗ ಯಾರನ್ನು ಕರೆಸಿ ಸಮಾಧಾನ ಮಾಡುವುದು ? ಸಮಜಾಯಿಷಿ ಕೊಡಲು ಹೊರಟಷ್ಟೂ ಇನ್ನೂ ಅನುಮಾನ ಹೆಚ್ಚುತ್ತಲೇ ಹೋಗುವುದಲ್ಲ ?! ತಾನು ವಂಶ ಮರ್ಯಾದೆಗಾಗಿ , ಸತ್ಯ ವಾಕ್ಯಕ್ಕಾಗಿ , ತಂದೆಯ ಪ್ರತಿಙ್ಞೆಗಾಗಿ ಎಲ್ಲವನ್ನೂ ಬಿಟ್ಟವನು . ಇದೀಗ ತನ್ನ ವಂಶಕ್ಕೆ ಅಪಕೀರ್ತಿ ಸುತ್ತಿದರೆ ಹೇಗೆ ಇದರ ಪರಿಹಾರ ? ಅದಕ್ಕಾಗಿ ದಾರುಣ ನಿರ್ಧಾರ ತೆಗೆದುಕೊಳ್ಳಬೇಕಿದೆ . ಸೀತೆ ಪತಿವ್ರತೆ . ಗಂಗೆಯಂತೆ ಪವಿತ್ರೆ , ಅಗ್ನಿಯಂತೆ ಶುದ್ಧೆ , ರಾವಣನ ನೆರಳನ್ನೂ ದ್ವೇಷಿಸುತ್ತಿದ್ದು ತನ್ನ ಧ್ಯಾನದಲ್ಲೇ ೧೦ ತಿಂಗಳುಗಳನ್ನು ನವೆಸಿದಳೆಂದು ಗೊತ್ತಿದ್ದರೂ , ಇದೀಗ ಆಕೆಯನ್ನು ತ್ಯಜಿಸಬೇಕಿದೆ . ಜನರಿಗೆ ನ್ಯಾಯವನ್ನು ತೋರಿಸಬೇಕಿದೆ . ತನ್ನನ್ನು ಅಡ್ಡಿಯಿಟ್ಟು ಜನರು ದಾರಿತಪ್ಪುವುದನ್ನು ತಪ್ಪಿಸಬೇಕಿದೆ . ಏನು ಮಾಡುವುದು ? ಜನನಾಯಕ ಸ್ಥಾನದಲ್ಲಿ ಕುಳಿತಾಗ ತನ್ನ ಸ್ವಂತ ಸುಖವನ್ನು ತ್ಯಾಗ ಮಾಡಲೇ ಬೇಕಾಗುತ್ತದೆ . ಇಲ್ಲದಿದ್ದರೆ ಈ ಸಿಂಹಾಸನದಿಂದ ದೂರ ಹೋಗಬೇಕಾಗುತ್ತದೆ . ಹಾಗೂ ಮಾಡಲಾಗದು , ರಾಜ್ಯ ಪರಿಪಾಲನೆಯೂ ಸ್ವಧರ್ಮ ಪಾಲನೆಯೇ . ತಂದೆಗೆ ಔರಸ ಪುತ್ರನಾಗಿ ಅಯೋಧ್ಯೆಯನ್ನು ಪೋಷಿಸುವುದು ತನಗೆ ಕರ್ತವ್ಯ . ಅಷ್ಟೇ ಅಲ್ಲ , ಭರತ ತನ್ನಿಂದ ಪ್ರಮಾಣ ಮಾಡಿಸಿಬಿಟ್ಟನಲ್ಲ ! ಎರಡೂ ಧರ್ಮಗಳನ್ನೂ ಉಳಿಸಬೇಕಿದೆ . ಪಾಪ , ಸೀತೆ ಗರ್ಭಿಣಿ , ಏಕಾಂಗಿ , ಮುಗ್ಧೆ , ಭೀರು , ಅವಳನ್ನೆಂತು ಬಿಡಲಿ ? ಬಿಟ್ಟು ತಾನೆಂತು ಬದುಕಲಿ ? ತನ್ನ ದೇಹವನ್ನೇ ಕತ್ತರಿಸಿ ಕಳಿಸುತ್ತಿದ್ದೀನಿ . ತಾವು ದಯಮಾಡಿ ಅವಳನ್ನು ರಕ್ಷಿಸಿ . ಅವಳಿಗೆ ಅಪರತಂದೆಯಾಗಿ ಅವಳನ್ನು ಪೋಷಿಸಿ. ’ ಋಷಿಪತ್ನಿಯರೊಡನೆ ಸೀತೆಯಿರುವ ತಾಣಕ್ಕೆ ಹೋಗುತ್ತಿರುವಷ್ಟು ಹೊತ್ತೂ ಹಿಂದಿನ ರಾತ್ರಿ ತಾವು ಓದಿದ ರಾಮನ ಬರಹವೇ ಕಣ್ಣ ಮುಂದೆ. 
ಇತ್ತ ಸೀತೆ ದೀನಳಾಗಿ , ಅಧೀರಳಾಗಿ , ಮುಂದೇನು ಮಾಡಬೇಕೆಂದು ತೋಚದೇ , ಕಣ್ಣಲ್ಲಿ ನೀರು ಇಂಗಿ ಹೋಗಿ , ಸಂಜೆ ಸಮೀಪಿಸುತ್ತಿರುವುದನ್ನು ಕಾಣುತ್ತಾ , ಹೆದರಿಕೆಯ ಶಿಶುವಾಗಿ , ತನ್ನ ದುರ್ವಿಧಿಯನ್ನು ಹಳಿದುಕೊಳ್ಳುವುದನ್ನು ಬಿಟ್ಟು ಬೇರೇನನ್ನೂ ಮಾಡಲಾಗದೇ , ದಿಕ್ಕು ತೋಚದೇ ಕುಳಿತಿದ್ದಾಗ , ಬಿಳಿ ಗಡ್ಡದ , ಕಾವಿ ಬಟ್ಟೆಯ ಋಷಿಯೊಡನೆ ಕೆಲ ಮಹಿಳೆಯರು ಬರುತ್ತಿದ್ದಾರೆ .   ಅಬ್ಬ !! ಕೆಲ ಮನುಷ್ಯರು . ಸಧ್ಯ ! ಏನೋ ಸಮಾಧಾನ . ಅಲ್ಲಲ್ಲ , ಇವರಿಗೇನೆಂದು ಹೇಳುವುದು ? ’ " ಯಾರಮ್ಮ ನೀನು , ಏಕೆ ಅಳುತ್ತಿದ್ದೀಯೆ ? ನಿನ್ನವರೆಲ್ಲಿ ? ಎಲ್ಲಿಂದ ಬಂದೆ ? ಏಕೆ ಒಂಟಿಯಾಗಿದ್ದೀಯೆ ? " ಎಂದರೆ ಏನೆಂದು ಹೇಳಲಿ ?  " ನನ್ನನ್ನು ಶಂಕಿಸಿ ಗಂಡ ಬಿಟ್ಟ ." ಎಂದು ಹೇಳಲೆ ? ಹಾಗೆ ಹೇಳಿ ತನ್ನ ಮರ್ಯಾದೆಯನ್ನು ತಾನೇ ತೆಗೆದುಕೊಳ್ಳುವುದಲ್ಲದೇ , ಪ್ರಿಯ ಪತಿಗೂ ಕಳಂಕ ತರಲೆ ? ಇದಕ್ಕಿನ್ನ ಈ ಕ್ಷಣದಲ್ಲಿ ಪ್ರಾಣ ಹೋದರೇ ಮೇಲು . ಹತ್ತಿರಕ್ಕೆ ಬಂದ ಮುನಿಯ ಮಖವನ್ನು ನೋಡಲಾಗದೇ ತಲೆ ತಗ್ಗಿಸಿಬಿಟ್ಟಿದ್ದಾಳೆ . ಇನ್ನೇನವರು ಕೇಳುತ್ತಾರೆ ; ತನ್ನ ಬಗ್ಗೆ ವಿಚಾರಿಸುತ್ತಾರೆ . ಯಾವ ಮುಖವನ್ನೆತ್ತಿ ಹೇಳಿಕೊಳ್ಳಲಿ ತನ್ನ ಬಗ್ಗೆ ? ಒಂದೆರಡು ಕ್ಷಣ ಉಸಿರೇ ಕಟ್ಟಿತು.... 
ಆದರೆ ಏನಿದು ? ಏನನ್ನೂ ಅವರು ಕೇಳುತ್ತಿಲ್ಲ ! ಸಮಾಧಾನ ಮಾಡುತ್ತಿದ್ದಾರೆ . ಅರೆ ! ನನ್ನ ವಿಷಯ ಇವರಿಗೆ ಎಂತು ಗೊತ್ತು ? ಓಹ್ . ತನ್ನ ಬಗ್ಗೆ , ತನ್ನ ಗಂಡನ ಬಗ್ಗೆ , ಅಪ್ಪನ ಬಗ್ಗೆ , ಮಾವನ ಬಗ್ಗೆ ಅವರೇ ಹೇಳುತ್ತಿದ್ದಾರೆ ! ಇವರಿಗಿದೆಲ್ಲ ಹೇಗೆ ಗೊತ್ತಾಯಿತು ? ಯಾರೋ ಮಹಾನುಭಾವರು .  ಯಾರಪ್ಪಾ ಈ ಪುಣ್ಯಾತ್ಮ ? ಅನಾಥ ಬಂಧು , ಅನಾಥ ರಕ್ಷಕ . ತಲೆ ನೇವರಿಸುತ್ತಿದ್ದಾರೆ . ಶಿಷ್ಯೆಯರಿಗೆ ಆದೇಶಿಸುತ್ತಿದ್ದಾರೆ . ತನ್ನನ್ನು ಅಹ್ವಾನಿಸುತ್ತಿದ್ದಾರೆ . ಕರುಣೆಯೇ ಮೂರ್ತಿವೆತ್ತ ಋಷಿವಾಣಿ ಮೃದುವಾಗಿ ಸವರಿತು ಸೀತೆಯ ಕಿವಿಗಳನ್ನು . " ಮಗಳೇ , ನಾನು ವಾಲ್ಮೀಕಿ . ನಿನ್ನ ಮಾವನ ಮಿತ್ರ . ದಶರಥನೊಡನೆ ಹಲ ಶತಮಾನಗಳ ಸ್ನೇಹ . ನಿನ್ನ ತಂದೆಯನ್ನೂ ನಾನು ಬಲ್ಲೆ . ನಿನ್ನ ಗಂಡನೂ ನನಗೆ ಗೊತ್ತು . ಆತನ ಪಿತೃವಾಕ್ಯ ಪರಿಪಾಲನೆ , ಅದಕ್ಕಾಗಿ ಅಡವಿಪಾಲದದ್ದು , ಅಲ್ಲಿ ನಡೆದ ಎಲ್ಲ ವಿಷಯಗಳನ್ನೂ ನಾನು ತಿಳಿದಿರುವೆ . ಅಡವಿಯಲ್ಲಿದ್ದಾಗ ನಿಮ್ಮನ್ನು ನೋಡಿದ್ದೆ . ಸನಿಹವಿದ್ದರೂ ನಮ್ಮ ಭೇಟಿಯಾಗಿರಲಿಲ್ಲ . ನಿನಗೆ ಮರೆತು ಹೋಗಿದೆಯೆಂದು ಕಾಣುತ್ತದೆ . ನೀನಿಲ್ಲಿಗೇಕೆ ಬಂದೆ , ನೀನೆಂತಹ ಪತಿವ್ರತೆ , ನಿನ್ನ ಗಂಡ ಏಕಾಗಿ ನಿನ್ನನ್ನು ಕಳಿಸಿದ , ಅವನ ಅವಸ್ಥೆ ಏನು , ಅವನೆಂತಹ ಇಕ್ಕಟ್ಟಿನ ಇಕ್ಕಳದಲ್ಲಿ ಸಿಲುಕಿದ್ದಾನೆ , ಅವನೆಷ್ಟು ನೋಯುತ್ತಿದ್ದಾನೆ , ರಾಜ ಧರ್ಮ ಪರಿಪಾಲನೆಗಾಗಿ ಸ್ವಸುಖ ತ್ಯಾಜ್ಯ ಮಾಡಿದ್ದಲ್ಲದೆ , ನಿಷ್ಕಳಂಕಳಾದ ನಿನ್ನನ್ನು ಬಿಟ್ಟು ಮನೋವ್ಯಥೆಯಲ್ಲಿ ನಿದ್ರಾಹಾರವಿಲ್ಲದೆ ಎರಡು ದಿನಗಳಿಂದ ಶೋಕಗೃಹದಲ್ಲಿ ಅವನೆಂತು ಒದ್ದಾಡುತ್ತಿದ್ದಾನೆ , ನಿನ್ನನ್ನು ನನ್ನ ಬಳಿಗೆ ಕಳಿಸಿದ ಕಾರಣ.... ಎಲ್ಲವನ್ನೂ ನಾನು ಬಲ್ಲೆ . ಸಮಾಧಿ ಸ್ಥಿತಿಯಲ್ಲಿ ನಾನೆಲ್ಲವನ್ನೂ ಅರಿಯಬಲ್ಲೆ . ಏಳು . ನೀನು ಪಟ್ಟಮಹಿಷಿ . ನಿನ್ನ ಸ್ಥಾನದಲ್ಲಿ ಇನ್ನಾರೂ ಕೂರಲು ಸಾಧ್ಯವಿಲ್ಲ , ಕೂಡುವುದೂ ಇಲ್ಲ , ಅದು ನಿನ್ನ ಗಂಡನ ಸತ್ಯ ಸಂಕಲ್ಪ . ಚಿಂತಿಸಬೇಡ , ಇದೆಲ್ಲ ವಿಧಿಯ ಲೀಲೆ . ನೀನು ನಿನ್ನ ತೌರಿಗೆ ಬಂದಿದ್ದೀಯೆ ಎಂದು ತಿಳಿ ; ನಿಶ್ಶಂಕೆಯಿಂದ ಇರು . ನಡೆ , ನಮ್ಮ ಆಶ್ರಮಕ್ಕೆ ಹೋಗೋಣ . "
                    (ಸ್ನುಷಾ ದಶರಥಸ್ಯ ತ್ವಂ ರಾಮಸ್ಯ ಮಹಿಷೀಪ್ರಿಯ
                     ಜನಕಸ್ಯ ಸುತಾ ರಾಙ್ಞಾ ಸ್ವಾಗತಂ ತೇ ಪತಿವ್ರತೇ
                    ಆಯಾಂತಿ ಚಾಸಿ ವಿಙ್ಞಾತ ಮಯಾಧರ್ಮ ಸಮಾಧಿನಾ
                    ಕಾರಣಂಚೈವ ಸರ್ವಂ ಮೇ ಹೃದಯೇನ ಉಪಲಕ್ಷಿತಂ
                     ತವಚೈವ ಮಹಾಭಾಗೇ ವಿದಿತಂ ಮಮ ತತ್ವತಃ)
(ಮುಗಿದಿಲ್ಲ !! ) 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT