ಸೀತಾ ದೇವಿಯೊಂದಿಗೆ ಲವ-ಕುಶರು 
ಅಂಕಣಗಳು

ಮುರಿದ ದರ್ಭೆಯ ಮೇಲ್ಭಾಗದಿಂದ ದೃಷ್ಟಿ ತೆಗೆದವನಿಗೆ 'ಕುಶ', ಕೆಳಭಾಗದಿಂದ ದೃಷ್ಟಿ ತೆಗೆದವನಿಗೆ 'ಲವ' ಎಂದು ನಾಮಕರಣ

ದರ್ಭೆಯ ಕಟ್ಟನ್ನು ಮಧ್ಯಕ್ಕೆ ಮುರಿದು ಮೇಲಿನ ಭಾಗವನ್ನ ಕೊಟ್ಟು ಹೇಳಿದರು, " ಮೊದಲು ಹೊರಬಂದ ಮಗುವಿಗೆ ಈ ಕುಶವನ್ನು ನಿವಾಳಿಸು". ದರ್ಭೆಯ ಕಟ್ಟಿನ ಕೆಳಭಾಗವನ್ನಿತ್ತು , " ಈ ಲವದಿಂದ ಎರಡನೆಯ....

ಸೀತೆಯನ್ನು ಕರೆತಂದದ್ದೂ , ಆಕೆಯನ್ನು ಋಷಿಪತ್ನಿಯರ ಆರೈಕೆಗೆ ಬಿಟ್ಟದ್ದೂ , ಕೆಲ ತಿಂಗಳುಗಳನ್ನು ಆಕೆ ಕಳೆದದ್ದೂ... ಎಲ್ಲ ಸಂಗತಿಗಳೂ ನೆನಪಾಗುತ್ತಿವೆ . ಅಂದು ವೃದ್ಧ ತಾಪಸಿ ಹೇಳಿದ್ದಳು ; ಸೀತೆಗೆ ಹೆರಿಗೆ ನೋವೆಂದು . ತಾವು ರಾಕ್ಷೋಘ್ನ ಮಂತ್ರ ಪಠಿಸಿ ಯಂತ್ರ ಕಳಿಸಿದ್ದರು . ಸಮಯ ಸರಿಯಿತು . ಗುಡಿಸಿಲೊಳಗಿಂದ ಪುಟ್ಟ ಮಗುವಿನ ಮೆಲುದನಿ . "ಅಳು" ಎಂದು ಹೆಸುರಿಟ್ಟಿದ್ದೇವೆ ಆ ಸದ್ದಿಗೆ . ಏನಿದು ! ಒಂದು ಧ್ವನಿ ಕೇಳುತ್ತಿಲ್ಲ , ಎರಡೆರಡು ?! ಓಡಿ ಬಂದು ತಾಪಸಿ ಹೇಳಿದಳು , " ಅವಳಿ-ಜವಳಿ ".
ಕೈಲಿದ್ದ ದರ್ಭೆಯ ಕಟ್ಟನ್ನು ಮಧ್ಯಕ್ಕೆ ಮುರಿದು ಮೇಲಿನ ಭಾಗವನ್ನವಳಿಗೆ ಕೊಟ್ಟು ಹೇಳಿದರು , "ಮೊದಲು ಹೊರಬಂದ ಮಗುವಿಗೆ ಈ ಕುಶವನ್ನು ನಿವಾಳಿಸು". ಎಡಗೈಲಿದ್ದ ದರ್ಭೆಯ ಕಟ್ಟಿನ ಕೆಳಭಾಗವನ್ನಿತ್ತು, "ಈ ಲವದಿಂದ ಎರಡನೆಯ ಮಗುವಿಗೆ ದೃಷ್ಟಿ ತೆಗೆ".
ಮಕ್ಕಳಿಗೆ ನಾಮಕರಣವೂ ಆಗಿ ಹೋಯಿತು. ಅದೇ ದೊಡ್ಡವ ಕುಶ, ಅವನ ತಮ್ಮ ಲವ. ಈಗಾಗಲೇ ಆ ಮೊಮ್ಮಕ್ಕಳ ಸುಖವನ್ನೂ ಅನುಭವಿಸುತ್ತಿದ್ದಾರೆ ಋಷಿಗಳು. ’ಎಲ್ಲಿಯ ತಾನು ? ಎಲ್ಲಿಯ ಈ ರಾಮಪತ್ನಿ ? ಎಲ್ಲಿಯ ಈ ಮಕ್ಕಳು ? ಎಲ್ಲಿಗೆಲ್ಲಿಗೆ ಸಂಬಂಧ ?
ಅರಮನೆಯಲ್ಲಿರಬೇಕಾದವರು ಕಾಡುಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ ಭೋಗಗಳನ್ನು ಅನುಭವಿಸಬೇಕಿದ್ದ ಮಹಾರಾಣಿ ಅಡವಿ ಹೆಣ್ಣಾಗಿದ್ದಾಳೆ. ಅವಿವಾಹಿತನಾದ ತಾನು ಈಗ ಅಜ್ಜನಾಗಿಬಿಟ್ಟಿದ್ದೇನೆ. ಏನಿದೀ ವೈಚಿತ್ರ್ಯ? ಏನಿದೀ ಸೃಷ್ಟಿಯ ಗುಟ್ಟು?’
ಈ ಎಲ್ಲ ಗತ ಸ್ಮೃತಿಗಳ ಮೆರವಣಿಗೆ ಒಂದರ ಹಿಂದೊಂದು ಬರುತ್ತಿರಲು ಕಾರಣ , ಇಂದು ಬೆಳಿಗ್ಗೆಯ ನಾರದಾಗಮನ. ಅವರಲ್ಲಿ ತಾನಿಟ್ಟ ಪ್ರಶ್ನೆಗೆ ಅವರು ಈ ಮಕ್ಕಳ ತಂದೆಯ ಕಥೆಯನ್ನೇ ಹೇಳಬೇಕೆ ? ಓಹ್ ಅದೆಷ್ಟು ಪ್ರಭಾವಿಯಾಗಿದೆ ಆತನ ಚರಿತ್ರೆ ! ತಾವೂ ಅಲ್ಲಲ್ಲಿ ತುಂಡು - ತುಂಡು ಸುದ್ದಿಗಳನ್ನು ಕೇಳಿದ್ದರು. ಆದರೆ ಇಷ್ಟು ವಿವರವಾಗಿ ತಮಗೆ ತಿಳಿದಿರಲಿಲ್ಲ . 
ಕೇಳಿದ ನಂತರ ರಾಮಗೌರವ ಹೆಚ್ಚಾಯಿತು. ಅಂತಹ ಧರ್ಮಪ್ರಭು ತನ್ನಲ್ಲಿ ವಿಶ್ವಾಸವಿಟ್ಟು ಪತ್ನಿಯ ರಕ್ಷಣೆಯ ಭಾರವನ್ನು ಒಪ್ಪಿಸಿದ್ದು ತಮ್ಮ ಗೌರವವನ್ನು ಇಮ್ಮಡಿಸಿದಂತೆನಿಸಿತು . 
ಈ ಕಥೆ ಕೇಳುವ ಮುನ್ನವೇ ಒಂದು ನೀಳ್ಗವಿತೆಯನ್ನು ಬರೆದಿದ್ದರವರು . ಅದರಲ್ಲವರು ಪ್ರತಿ ನಾಯಕನ ಪರಾಕ್ರಮವನ್ನು ಮೆಚ್ಚಿದ್ದರು. ಆತನ ದೈವಭಕ್ತಿ ಆಕರ್ಷಿಸಿತ್ತು . ಸದಾ ಭೋಗದಲ್ಲಿ ಮುಳುಗಿದ್ದ ದೇವತೆಗಳ ನಡು ಮುರಿದದ್ದು ತಮಗೊಂದು ತರಹದ ಮುದವನ್ನೇ ಕೊಟ್ಟಿತ್ತು . ಆ ರಾವಣನ ಕಥೆಯನ್ನು ಕೇಳಿ ಮಾರು ಹೋಗಿದ್ದ ತಮಗೆ , ಆತನ ತಪ್ಪು ಕ್ಷಮಾರ್ಹವೆನಿಸಿತ್ತು . ’ಯಾವ ಮನುಷ್ಯನಲ್ಲಿ ದುರ್ಬಲಾಂಶವಿಲ್ಲ ? ಒಂದಲ್ಲ ಒಂದು ನ್ಯೂನತೆ ಎಲ್ಲರಲ್ಲಿಯೂ ಇದ್ದೇ ಇರುತ್ತದೆ . ಅದರಿಂದ ಹೊರತಾಗಿಯೂ , ಅವನು ಹೇಗೆ ಬದುಕಿದ ಎಂಬುದೇ ಮುಖ್ಯ . ರಾವಣನಲ್ಲಿ ಇದ್ದದ್ದು ಒಂದೇ ಒಂದು ದೌರ್ಬಲ್ಯ . ಸ್ತ್ರೀಚಾಪಲ್ಯ . ಅದರಿಂದಾಗಿ ಹಾಳಾಗಿ ಹೋದ ; ರಾಜ್ಯ ಕಳೆದ ; ಬಂಧುಗಳ ಬಲಿಯಿತ್ತ ; ಸಿರಿಯನ್ನು ಸುಟ್ಟ ; ಮಡದಿಯನ್ನು ವಿಧವೆ ಮಾಡಿದ... ಛೆಛೆ ! ಎಂತಹ ವೀರ...!! ಸತ್ತೇ ಹೋದ . ರಣಭೂಮಿಯಲ್ಲಿ ಉರುಳಿಬಿದ್ದ .’ ತಾವೂ ವ್ಯಥಿಸಿದ್ದರು ರಾವಣನ ಸಾವು ಕೇಳಿ . ಅವನನ್ನೇ ಕಥಾನಾಯಕನನ್ನಾಗಿಟ್ಟು ಬರೆದ ತಮ್ಮ ಕಿರುಕಾವ್ಯಕ್ಕೆ " ಪೌಲಸ್ತ್ಯ ವಧಾ " ಎಂದೇ ಹೆಸರಿಟ್ಟಿದ್ದರು . 
ಆದರೆ ಇಂದು ರಾಮಕಥೆಯನ್ನು ಕೇಳಿದ ಮೇಲೆ , ರಾಮ ದರ್ಶನ ಮಾಡಿದ ಮೇಲೆ ತಮ್ಮ ನಾಯಕ ಆ ಸ್ಥಾನದಿಂದ ಬಿದ್ದೇ ಬಿಟ್ಟ . ಅಲ್ಲಿಯವರೆಗೆ ಮೆಚ್ಚುಗೆಗೆ ಪಾತ್ರನಾಗಿದ್ದ ಪೌಲಸ್ತ್ಯ ಪತಿತನಾಗಿಬಿಟ್ಟ . ತಾವು ಯಾವುದೋ ಒಂದು ದೌರ್ಬಲ್ಯವೆಂದು ಭಾವಿಸಿದ್ದದ್ದು ಒಂದಲ್ಲ , ಹತ್ತಲ್ಲ , ಅವನು ಮಾತು , ಕಥೆ , ವರ್ತನೆ , ನಡತೆ ... ಎಲ್ಲವೂ ಅನಾಗರಿಕವೇ . ಎಲ್ಲವೂ ದೋಷ ಪೂರ್ಣವೇ . ಅರಣ್ಯನ್ಯಾಯವೇ . ಕೇವಲ ದರ್ಪ , ಮನಸೋ ಇಛ್ಛೆ ನಡೆವ ಚಟ , ಎದುರಾದವರ ತಲೆತಗೆವ , ಬುದ್ಧಿ ಹೇಳುವವರ ನಾಲಗೆ ಸೀಳುವ , ಬಂಧುಗಳನ್ನು ಬಡಿವ , ಕೇವಲ ಕಾಮಪಿಶಾಚಿಯಾಗಿದ್ದ . ಯಾರನ್ನೂ ಲೆಕ್ಕಿಸದ , ಎಲ್ಲರನ್ನೂ ಬಗ್ಗುಬಡಿವ ನಿರಂಕುಶನಾಗಿದ್ದ . ದೇವರ ವರ-ದೇಹದ ಬಲ ಈ ಎರಡೂ ಇದ್ದೂ ಅಧರ್ಮಿಯಾದರೆ , ಹೇಗೆ ಒಬ್ಬ ಕೊಬ್ಬಿ , ಮೈಮರೆತು , ನೀತಿ ನಿಯಮಗಳನ್ನು ಗಾಳಿಗೆ ತೂರಿ , ಲಂಗು ಲಗಾಮಿಲ್ಲದೆ ನುಗ್ಗಿ , ಕೊನೆಗೆ ಪಾಪದ ಕೊಡ ತುಂಬಿ  ಸತ್ತಾಗ ಸಂಸ್ಕರಿಸಲು ಮಗನಿಲ್ಲದೆ ಹೋಗಿ , ಪಿಂಡ ಪ್ರದಾನಕ್ಕೆ ಒಬ್ಬನನ್ನೂ ಉಳಿಸದೇ ತನ್ನ ಕಾಮಕ್ಕೆ ಎಲ್ಲ ಮಕ್ಕಳನ್ನೂ ಬಲಿಕೊಟ್ಟು ನಿರ್ನಾಮವಾದನೆಂಬ ದುರಂತಕ್ಕೆ ಸಾಕ್ಷಿಯಾಗಿ ಬಿಟ್ಟ !!!!! ಈ ಯೋಚನೆ ಬರುತ್ತಿದ್ದಂತೆಯೇ ತಮ್ಮ ದೀರ್ಘ ಕವನ ಅರ್ಥಹೀನವೆನಿಸಿತು . ಅದನ್ನು ಬದಲಿಸಬೇಕು . ಮೊದಲು ಆ ಶೀರ್ಷಿಕೆಯನ್ನು ಕಿತ್ತೆಸೆಯಬೇಕು ಎನಿಸಿತು . ಪೌಲಸ್ತ್ಯವಧ ಶಿರೋನಾಮೆ ಮೇಲೆ ಅಡ್ಡಗೀಟು ಬಿತ್ತು. 
ಯೋಚಿಸುತ್ತ , ಚಿಂತಿಸುತ್ತ ನದಿ ದಡಕ್ಕೆ ಬಂದುಬಿಟ್ಟಿದ್ದಾರೆ ಮಹರ್ಷಿ . ದಾರಿ ಸವೆದದ್ದೇ ಗೊತ್ತಾಗಲಿಲ್ಲ . ಇನ್ನೇನು ಸ್ನಾನಕ್ಕೆ ಇಳಿಯಬೇಕು , ಓಹ್ ! ಅದೆಂತಹ ಕರುಳಿರಿಯುವ ತಣ್ಣನೆಯ ನೋವಿನ ಉಲಿ . ಗೋಳಿನ ಕಡೆ ನೋಡಿದರೆ ಹಕ್ಕಿಯೊಂದು ಬಿದ್ದು ವಿಲವಿಲನೆ ಒದ್ದಾಡುತ್ತಿದೆ . ಒಡನಾಡಿ , ಸುತ್ತಿ ಸುತ್ತಿ ತನ್ನ ಸಂಕಟವನ್ನು ಕೂಗಿ ಕೂಗಿ ಹೊರಹಾಕುತ್ತಿದೆ . ಎಲ್ಲಿದ್ದನೋ ಬೇಡನೊಬ್ಬ ಬಂದು ಸತ್ತ ಹಕ್ಕಿಯನ್ನು ಹೆಕ್ಕಿ ಭುಜದ ಚೀಲಕ್ಕೆ ಇಳಿಬಿಟ್ಟು ಹೊರಟೇ ಹೋದ . ತನ್ನ ಎದೆ ನಡುಗಿಹೋಗಿತ್ತು . ಕಣ್ಣಲ್ಲಿ ನೀರು ಕಾರಿತ್ತು . ಅಪ್ರಯತ್ನವಾಗಿ ಕಮಂಡಲದ ನೀರು ಕೈಗೆ ಬಿದ್ದು ಶಾಪವಾಕ್ಯ ಬಾಯಿಂದ ಹೊರಬಿತ್ತು. 
" ಎಲಾ ನಿಷ್ಕರುಣಿ ! ಬೇಟೆ ನಿನ್ನ ಕುಲಧರ್ಮ ಇದ್ದಾತು . ಅದು ತಪ್ಪಲ್ಲ . ಆದರೆ ಎಂತಹ ಬೇಟೆಯಾಡಬೇಕೆಂಬ ವಿವೇಚನೆ ಬೇಡವೆ ? ಪ್ರಾಣಿ ಪ್ರಪಂಚಕ್ಕೆ ಸರ್ವ ಮಾನ್ಯವಾದ ಸುಖದ ಪರಾಕಾಷ್ಠೆಯೆಂದರೆ ಸಂಭೋಗ . ಸಂಯೋಗ ನಿರತವಾಗಿದ್ದ ಜೋಡಿ ಹಕ್ಕಿಗಳಲ್ಲಿ ಒಂದನ್ನು ಕೊಂದೆಯಲ್ಲಾ , ಅದು ಅಧರ್ಮ . ಇದರಿಂದಾಗಿ ನಿನ್ನನ್ನು ಶಪಿಸುತ್ತಿರುವೆ..... ( ಏನೆಂದು ಶಪಿಸಲಿ ? ಬೇಡನದು ಪೂರ್ಣಪ್ರಮಾಣದ ತಪ್ಪಲ್ಲ . ಅವನಿಗೆ ಈ ಸಂಸ್ಕಾರ ಗೊತ್ತಿರುವುದೂ ಶಂಕೆಯೇ . ಆದರೂ ಆದರೂ ನನಗೆ ಅವನ ಕ್ರಿಯೆ ನೋವು ತಂದಿದೆ . ಅದು ಶಮನವಾಗಬೇಕು . ಅದ್ದರಿಂದ ಉಗ್ರ ಶಾಪ ಬೇಡ , ಲಘು ಶಿಕ್ಶೆ ಕೊಡುವ ) ನಿನ್ನ ಕೀರ್ತಿ , ನಿನ್ನ ಪ್ರತಿಷ್ಠೆ , ಬಹಳ ಕಾಲ ಇರದೇ ಇರಲಿ !  (ಮಾ ನಿಶಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ ಯತ್ ಕ್ರೌಂಚ ಮಿಥುನಾದೇಕಂ ಅವಧೀ ಕಾಮಮೋಹಿತಂ
(ಮುಂದುವರೆಯುವುದು...) 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT