ಈ ವಿಶ್ರವಸ್ಸೆನ್ನುವಾತನೇ ನಮ್ಮ ಲಂಕಾಧಿಪತಿಯ ತಂದೆ". ಒಂದೇ ಉಸಿರಿಗೆ ವರದಿ ಒಪ್ಪಿಸಿದಂತೆ ವಿಶ್ರವಸ್ ಜನನ ಹೇಳಿ ಮುಗಿಸಿದ ಮುದಿ ಬ್ರಾಹ್ಮಣ, " ಇನ್ನು ನಮ್ಮ ಮಹಾರಾಜರ ಕಥೆ ಹೇಳತೀನಿ ಕೇಳಿ. " ವಿಶ್ರವಸ್ ಯುವಕನಾಗಿದ್ದಾಗ ಹೆಂಡತಿಯಾಗಿ ಬಂದಾಕೆ ಭರದ್ವಾಜ ಪುತ್ರಿ ದೇವವರ್ಣಿನಿ . ಆಕೆಯಲ್ಲಿ ಅವನಿಗೆ ಹುಟ್ಟಿದಾತನೇ ವೈಶ್ರವಣ . ಅತ್ಯಂತ ಸರಳವಾಗಿ ವೈಶ್ರವಣನ ಜನನ ಮುಕ್ತಾಯವಾಯಿತು . ತಾತ ಪುಲಸ್ತ್ಯನ ದಿವ್ಯ ದೃಷ್ಟಿಗೆ ಗೋಚರವೂ ಆಯಿತು ; ತನ್ನ ಮೊಮ್ಮಗ ಧನಾಧಿಪತಿಯಾಗುವನೆಂದು.
("ದೃಷ್ಟ್ವಾ ಶ್ರೇಯಸ್ಕರೀಂ ಬುದ್ಧಿಂ ಧನಾಧ್ಯಕ್ಷೋ ಭವಿಷ್ಯತಿ " )
ವೈಶ್ರವಣನಿಗೆ ಅವನ ಅಪ್ಪನ ಉಪದೇಶ : ನಾವು ಏನು ಮಾಡಬೇಕಿದ್ದರೂ ತಪಸ್ಸು ಮಾಡಬೇಕು . ಜೀವನದಲ್ಲಿ ಏಳಿಗೆ ಹೊಂದಬೇಕಿದ್ದರೆ ತಪಸ್ಸು ; ವಿದ್ಯಾವಂತರಾಗಬೇಕಿದ್ದರೆ ತಪಸ್ಸು ; ಸಿರಿ ಬೇಕಿದ್ದರೆ ತಪಸ್ಸು ; ಅಧಿಕಾರ ಬೇಕಿದ್ದರೆ ತಪಸ್ಸು ; ಕೊನೆಗೆ ದೈವ ದರ್ಶನಕ್ಕೆ ತಪಸ್ಸು , ಮುಕ್ತಿ ಬೇಕಿದ್ದರೂ ತಪಸ್ಸು ! ತಪಸ್ಸು , ತಪಸ್ಸು , ತಪಸ್ಸು !! ಇದೇ ಮಂತ್ರ , ಇದೇ ಸೂತ್ರ , ಇದೇ ರಹಸ್ಯ . ಭಾರತದ ಶ್ವಾಸೋಚ್ವಾಸವೇ ಒಂದು ತಪಸ್ಸು , ಮತ್ತೊಂದು ಸ್ವಾಧ್ಯಾಯ . ಅದೇ ಚಿಂತನೆ - ಅಭ್ಯಾಸ ; ಅದೇ ಶಿಕ್ಷಣ - ಅಧ್ಯಯನ ; ಅದೇ ಏಕಾಗ್ರತೆ - ಕಾರ್ಯಸಾಧನೆ ; ಅದೇ ಉಪದೇಶ-ಅನುಷ್ಠಾನ. ಅಪ್ಪನ ಆದೇಶ ತಲೆಯಲ್ಲಿ ಹೊತ್ತ ವೈಶ್ರವಣ ಬ್ರಹ್ಮನನ್ನು ಕುರಿತು ದೀರ್ಘ ತಪ ಮಾಡಿದ . ಅಂತ್ಯಕ್ಕೆ ಪ್ರತ್ಯಕ್ಷ ಬ್ರಮ್ಹ ಹೇಳಿದ , " ನಿನಗೆ ನಾಲ್ಕನೆಯ ಲೋಕ ಪಾಲಕ ಪದವಿ ಕೊಟ್ಟಿರುವೆ . ಇಲ್ಲಿಯ ವರೆವಿಗೂ ಇಂದ್ರ , ವಾಯು , ವರುಣರು ಮಾತ್ರ ಇದ್ದರು . ಈಗ ನೀನು ಅವರೊಡನೆ ಕುಬೇರನ ಹೆಸರಿನಿಂದ ಪ್ರಸಿದ್ಧವಾಗು . ಉತ್ತರ ದಿಕ್ಕಿಗೆ ನೀನೇ ಒಡೆಯ . ಧನಕ್ಕೆ ನೀನೇ ಅಧಿಪತಿ .
(ಅಹಂ ವೈ ಲೋಕಪಾಲಾನಾಂ ಚತುರ್ಥಂ ಸ್ರಷ್ಟುಂ ಉದ್ಯತಃ
ಯಮೇಂದ್ರ ವರುಣಾನಾಂಚ ಚತುರ್ಥಃ ತ್ವಂ ಭವಿಷ್ಯಸಿ
ತದ್ಗಚ್ಛಃ ತ್ವಂ ಹಿ ಧರ್ಮಙ್ಞ ನಿಧೀಶತ್ವಂ ಅವಾಪ್ನುಹಿ )
ಅಪ್ಪನಿಗೆ ಸಾಷ್ಟಾಂಗವೆರಗಿ ಬ್ರಹ್ಮನ ವರದ ನಿವೇದನೆ ಮಾಡಿ ಕುಬೇರ ಕೇಳಿದ; " ಅಪ್ಪ, ನನ್ನ ವಾಸಸ್ಥಾನ ಯಾವುದು? ನನ್ನ ಕಛೇರಿ ಎಲ್ಲಿ? ಎಲ್ಲಿದ್ದು ನನ್ನ ಅಧಿಕಾರವನ್ನು ಪ್ರಯೋಗಿಸಬೇಕು?" ಕೊಂಚ ಯೋಚಿಸಿ ನುಡಿದ ವಿಶ್ರವಸ್;" ತ್ರಿಕೂಟಾಚಾಲ ಎಂಬ ಪರ್ವತ ಇದೆ. ಅದರ ತುದಿಯಲ್ಲಿ ಒಂದು ದೊಡ್ಡ ನಗರವನ್ನು ನಮ್ಮ ದೇವ ಶಿಲ್ಪಿ ತುಂಬ ಸುಂದರವಾಗಿ ಕಟ್ಟಿದ್ದ.
(ದಕ್ಷಿಣಸ್ಯೋ ದಧೇ ತೀರೇ ತ್ರಿಕೂಟೋ ನಾಮ ಪರ್ವತಃ
ತಸ್ಯಾಗ್ರೇತು ವಿಶಾಲಾ ಸಾ ಮಹೇಂದ್ರಸ್ಯ ಪುರೀ ಯಥಾ
ಲಂಕಾ ನಾಮ ಪುರೀ ರಮ್ಯಾ ನಿರ್ಮಿತಾ ವಿಶ್ವಕರ್ಮಣ )
ಅಲ್ಲಿ ರಾಕ್ಷಸರು ರಾಜ್ಯವಾಳುತ್ತಿದ್ದರು . ದೇವ ದಾನವರು ಯುದ್ಧದಲ್ಲಿ ಮಹಾವಿಷ್ಣು ಮಾಲಿಯನ್ನು ಸಂಹರಿಸಿದ . ಮಾಲಿ ಮತ್ತು ಸುಮಾಲಿ ಅಳಿದುಳಿದ ರಾಕ್ಷಸರೊಡನೆ ಪಾತಾಳಕ್ಕೆ ಓಡಿಹೋದರು . ಈಗದು ಖಾಲಿಯಿದೆ . ಅಲ್ಲಿ ಹೋಗಿ ನೆಲೆಸು . ನಿನ್ನೊಡನೆ ಇರುವವರಿಗೆ ಸಂಗೀತ, ನೃತ್ಯ, ವಾದ್ಯ, ಸಾಹಿತ್ಯಗಳಲ್ಲಿ ಅಭಿರುಚಿಯಿರಲಿ. ಯಕ್ಷರೆಂದು ಹೆಸರಾದವರೇ ನಿನ್ನ ನಗರ ಸದಸ್ಯರಾಗುತ್ತಾರೆ. ನೀನು ಯಕ್ಷಾಧಿಪತಿಯಾಗುವೆ.
ಈಗ ಕುಬೇರ ಲಂಕಾಧಿಪತಿ . ಸುವರ್ಣ ಲಂಕೆಯ ಒಡೆಯ . ಯಕ್ಷರಿಗೆಲ್ಲ ನಾಯಕ . ಜೊತೆಗೆ ಅವನ ಓಡಾಟಕ್ಕೆ ಬ್ರಹ್ಮನೇ ಬಹೂಕರಿಸಿದ ವಿಮಾನ . ಅದು ಪುಷ್ಪಕ ವಿಮಾನ . ಹೊರಗೆ ವಜ್ರ ಗಡುಸಿದ್ದರೂ ಒಳಗೆಲ್ಲಾ ಮೃದು ಮಲ್ಲಿಕಾ ಸ್ಪರ್ಶ. ಶ್ರೀಗಂಧ ಸುಗಂಧ. ಸೇವಿಸುವವರೆಲ್ಲ ಪುಷ್ಪಧಾರಿಗಳು, ಸುಗಂಧಿನಿಯರು. ಅವನೊಬ್ಬನೇ ಹತ್ತಿದರೆ ಪುಟ್ಟದಿರುವ ಆ ಗಗನಪಕ್ಷಿ ಹೆಚ್ಚು ಜನ ಹತ್ತಿದಷ್ಟೂ ವಿಕಾಸ. ಎಷ್ಟೇ ಜನ ಹತ್ತಿದರೂ ಒಂದು ಪೀಠ ಯಾವಾಗಲೂ ಹೆಚ್ಚುವರಿ . ಕುಬೇರನ ಆಸನವೋ ಅದೇ ಒಂದು ಹೂ ತುಂಬಿದ ಸುಖಾಸನ . ನೆಲ , ಗೋಡೆ , ಮೇಲಾಟ, ಬಾಗಿಲು, ಹಿಡಿವ ಕಂಬಿ , ಎಲ್ಲವೂ ಹೂಮಯ . ಎಲ್ಲೆಂದರಲ್ಲಿ ಹೂಮಾಲೆಗಳ ಹಾರಾಟ. ನಿಜಕ್ಕೂ ಅದು ಪುಷ್ಪಕ ವಿಮಾನವೇ.
ಸುಮಾಲಿಯ ಕಣ್ಣ ಮುಂದೆಯೇ ಸೌಂದರ್ಯ , ವೀರ್ಯ , ಸೌಮ್ಯತೆಗಳ ಮೂರ್ತಿವೆತ್ತ ಧೀರನೊಬ್ಬ ಅರಮನೆಯಿಂದ ಹೊರಬಂದ. ಆತನ ಮುಂದೆ ಬಂದು ನಿಂತಿತು ವಿಮಾನ . ಅದನ್ನೇರುತ್ತಿದ್ದಂತೆಯೇ ಅದು ಗಗನಕ್ಕೇರಿ ಹಾರಿತು. ಎಲ್ಲಿ ಹೋಗುವನೋ ನೋಡೋಣವೆಂದು ಅಪ್ಪ ಮಗಳಿಬ್ದರೂ ಅವನನ್ನೇ ಹಿಂಬಾಲಿಸಿದರು. ಬೆಟ್ಟ ಬಿಟ್ಟು, ಸಮುದ್ರ ಹಾರಿ, ಕಾನನಗಳನ್ನು, ಊರುಗಳನ್ನು, ನದಿಗಳನ್ನು, ಬಯಲುಗಳನ್ನೂ ದಾಟಿ ಕೊನೆಗೊಂದು ಋಷ್ಯಾಶ್ರಮದಲ್ಲಿಳಿಯಿತು. ಹೊರಬಂದ ಕುಬೇರ ಪರ್ಣಶಾಲೆ ಹೊಕ್ಕ. ಅಪ್ಪನೊಡನೆ ಕೊಂಚ ಕಾಲ ಕಳೆದು ಹೊರಬಂದ. ತೀವ್ರ ಆಲೋಚನೆಯಲ್ಲಿ ಬಹಳಹೊತ್ತು ಮುಳುಗಿದ್ದ ಸುಮಾಲಿ ಕೊನೆಗೆ ಮಗಳೆಡೆಗೆ ತಿರುಗಿ ಹೇಳಿದ; "ನಾವು ಕಳೆದುಕೊಂಡಿರುವ ಈ ಲಂಕೆ ಈಗ ಯಕ್ಷರ ಪಾಲಾಗಿದೆ. ಹಾಳು ಬಿದ್ದಿದ್ದನ್ನು ಸರಿಪಡಿಸಿ ಕುಬೇರ ಅದನ್ನು ಅನುಭವಿಸುತ್ತಿದ್ದಾನೆ. ಅವನಿಗೆ ದೇವತೆಗಳ ರಕ್ಷೆ, ಅಪ್ಪ ವಿಶ್ರವಸ್ನ ತಪಃಶಕ್ತಿ, ಎಲ್ಲದಕ್ಕಿನ್ನ ಹೆಚ್ಚಾಗಿ ಬ್ರಹ್ಮ ಬೆಂಬಲ ಇದೆ. ನಮ್ಮ ಪಟ್ಟಣವನ್ನು ಮತ್ತೆ ಇವನ ಹಿಡಿತದಿಂದ ಬಿಡಿಸಿಕೊಳ್ಳಬೇಕಿದ್ದರೆ, ಶಕ್ತಿಯಿಲ್ಲದ, ಸ್ಥಾನ ಭ್ರಷ್ಟರಾದ, ಅಲ್ಪಸಂಖ್ಯಾತರಾದ ನಮಗೆ ಯುದ್ಧದಿಂದ ಸಾಧ್ಯವಿಲ್ಲ. ಉಪಾಯದಿಂದ ಅದನ್ನು ಗೆಲ್ಲಬೇಕು. ಅದಕ್ಕೆ ಒಂದೇ ಯುಕ್ತಿ. ಯಾವುದೇ ಆಸ್ತಿಯ ಮೇಲೆ ಅಧಿಕಾರ ಬರಬೇಕಿದ್ದರೆ ಮನೆಯ ಯಜಮಾನನ ತಮ್ಮನಿಗೆ ಮಾತ್ರ . ಹೀಗಾಗಿ ನೀನೀಗ ಕುಬೇರನ ತಮ್ಮನ ತಾಯಿಯಾಗಬೇಕು". ಪ್ರವಾಸಕ್ಕೆ ಬಂದಿದ್ದರೆ ಪರಿಣಯದ ಪ್ರಸ್ತಾವ. ಕೈಕಸಿಗೆ ದಿಗ್ಭ್ರಮೆ; ನಾಚಿಕೆ; ಸಂಕೋಚ; ತಬ್ಬಿಬ್ಬು. ತಲೆತಗ್ಗಿಸಿ ಕೇಳಿದಳು, " ಅಪ್ಪ ನನಗೇನೂ ಅರ್ಥವಾಗುತ್ತಿಲ್ಲ. (......ಮುಗಿದಿಲ್ಲ )
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos