ಡಿಜಿಟಲ್ ಇಂಡಿಯಾ ಎನ್ನುವುದು ಕೇಂದ್ರ ಸರಕಾರದ ಬಹು ದೊಡ್ಡ ಕನಸುಗಳಲ್ಲಿ ಒಂದು. ಸರಕಾರದ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳು ಮಧ್ಯವರ್ತಿಗಳ ಕೈ ಚಳಕವಿಲ್ಲದೆ ನೇರವಾಗಿ ನಾಗರಿಕರಿಗೆ ತಲುಪಬೇಕು ಎನ್ನುವುದು ಡಿಜಿಟಲ್ ಇಂಡಿಯಾ ಯೋಜನೆಯ ಉದ್ದೇಶ. ಇಂಟರ್ನೆಟ್ ಬಳಕೆಯ ಮೂಲಕ ಸರಕಾರದ ಅನೇಕ ಯೋಜನೆಗಳನ್ನ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗಳು ಪಡೆಯಬಹುದು. ಗಮನಿಸಿ ಇಲ್ಲಿ ಸರಕಾರಿ ಕರ್ಮಚಾರಿ ಇರಬಹುದು ಅಥವಾ ಇನ್ನ್ಯಾವುದೇ ಮಧ್ಯವರ್ತಿಯ ಅಡಚಣೆಯಿಲ್ಲ. ನೇರವಾಗಿ ಆಯಾ ಯೋಜನೆಗೆ ಸಂಬಂಧಪಟ್ಟ ಅರ್ಜಿಗಳನ್ನ ಭರ್ತಿ ಮಾಡಿ ಅದನ್ನ ಆನ್ಲೈನ್ ಮೂಲಕ ಸಂಬಂಧಪಟ್ಟ ಕಚೇರಿಗೆ ತಲಿಪಿಸಿದರೆ ಮುಗಿಯಿತು. ಯೋಜನೆಯ ಫಲಾನುಭವಿಯಾಗಲು ವಿಧಿಸಿರುವ ಷರತ್ತುಗಳನ್ನ ಪೂರ್ಣಗೊಳಿಸಿದರೆ ಅದು ಆಯಾ ವ್ಯಕ್ತಿಯ ಖಾತೆಗೆ ಜಮಾ ಆಗಿರುತ್ತದೆ. ಇದಷ್ಟೇ ಅಲ್ಲದೆ ಮಾಹಿತಿಯನ್ನ ವೇಗವಾಗಿ ನಾಗರಿಕರಿಗೆ ತಲುಪಿಸುವುದು ಮತ್ತು ಸರಕಾರಿ ಕೆಲಸಕ್ಕೆ ಅವರು ಕಚೇರಿಗೆ ಅಲೆಯುವ ಬದಲು ಅವರಿಗೆ ಬೇಕಾದ ಕೆಲಸವನ್ನ ಅವರ ಮನೆಯ ಬಾಗಿಲಲ್ಲೇ ಕೂತು ಪೊರೈಸಿಕೊಳ್ಳುವಂತೆ ಮಾಡುವುದು ಕೂಡ ಡಿಜಿಟಲ್ ಇಂಡಿಯಾ ಯೋಜನೆಯ ಉದ್ದೇಶಗಳಲ್ಲೊಂದು.
ಕೊರೋನ ವೈರಸ್ ದಾಳಿಯಾದ ಹಿನ್ನೆಲೆಯಲ್ಲಿ ಭಾರತ ಲಾಕ್ ಡೌನ್ ಅಪ್ಪಿಕೊಂಡಾಗ ಜನಧನ್ ಖಾತೆಯ ಮೂಲಕ ಮಾಸಿಕ ಐನೂರು ರೂಪಾಯಿ ಮಧ್ಯವರ್ತಿಗಳ ಸಹಾಯವಿಲ್ಲದೆ ತಲುಪಿದ್ದು ಇಂತಹ ಕನಸಿನ ಕಾರ್ಯ ಯೋಜನೆಯಿಂದ.
ಜುಲೈ1, 2015 ರಂದು ಇದನ್ನ ಚಾಲನೆಗೆ ತರಲಾಯಿತು. ಭಾರತ ಹಳ್ಳಿಗಳ ದೇಶ. ಈ ಹಳ್ಳಿಗಳನ್ನ ಮುಖ್ಯವಾಹಿನಿಯೊಂದಿಗೆ ಬೆರೆಯುವಂತೆ ಮಾಡುವುದು ಮತ್ತು ಸಮಾಜದಲ್ಲಿ ಹೆಚ್ಚಾಗಿ ಚಲಾವಣೆಯಲ್ಲಿರುವ ಹಣದ ವಹಿವಾಟನ್ನ ಆದಷ್ಟೂ ಕಡಿಮೆ ಮಾಡುವುದು ಆ ಮೂಲಕ ಕಪ್ಪು ಹಣವನ್ನ ನಿಯಂತ್ರಣಕ್ಕೆ ತರುವುದು ಕೂಡ ಡಿಜಿಟಲ್ ಇಂಡಿಯದ ಯೋಜನೆ. ಇದರಿಂದ ಸರಕಾರಿ ವಹಿವಾಟುಗಳು ಅತ್ಯಂತ ಪಾರದರ್ಶಕವಾಗುತ್ತದೆ. ನಾಗರಿಕರಿಗೆ ಸರಕಾರದ ಕಾರ್ಯಗಳ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಆದರೆ ಇಲ್ಲಿ ಅತ್ಯಂತ ಮುಖ್ಯವಾದ ಒಂದು ತೊಂದರೆಯಿದೆ. ಬ್ಯಾಂಕುಗಳು ಡಿಜಿಟಲ್ ವಹಿವಾಟುಗಳ ಮೇಲೆ ತಮ್ಮ ಶುಲ್ಕಗಳನ್ನ ಹಾಕುತ್ತದೆ. ವ್ಯಾಪಾರಿಗಳು ಕಾರ್ಡ್ ಮೂಲಕ ಹಣ ಪಾವತಿಸುತ್ತೇವೆ ಎಂದರೆ ಸಾಕು 2 ಅಥವಾ 3 ಪ್ರತಿಶತ ಹಣವನ್ನ ಪೀಕುತ್ತಿದ್ದಾರೆ. ಡಿಜಿಟಲ್ ಇಂಡಿಯಾ ಎನ್ನುವ ಕನಸು ಪೂರ್ಣವಾಗಿ ನನಸಾಗಲು ಇಂತಹ ತೊಂದರೆಗಳನ್ನ ನಿವಾರಿಸಿಕೊಳ್ಳಬೇಕಿದೆ.
ಡಿಜಿಟಲ್ ಇಂಡಿಯಾ ಯೋಜನೆಯನ್ನ ಸಾಕಾರಗೊಳಿಸಲು ಕೇಂದ್ರ ಸರಕಾರ ಈ ಯೋಜನೆಯನ್ನ ಹನ್ನೆರಡು ಸಣ್ಣ ಯೋಜನೆಗಳನ್ನಾಗಿ ವಿಭಜಿಸಿದೆ. ಅಂದರೆ ಡಿಜಿಟಲ್ ಇಂಡಿಯಾ ಎನ್ನುವ ಮಹತ್ವದ ಯೋಜನೆಯನ್ನ ಪೂರ್ಣಗೊಳಿಸಲು ಇದನ್ನ ವಿಭಜಿಸಿ ಅವುಗಳನ್ನ ಕಾರ್ಯಸಾಧುವನ್ನಾಗಿಸಿದೆ. ಏನಿವು? ಎನ್ನುವುದು ಪ್ರತಿಯೊಬ್ಬ ನಾಗರಿಕನೂ ತಿಳಿದುಕೊಂಡಿರಬೇಕಾದ ವಿಷಯವಾಗಿದೆ. ಡಿಜಿಟಲ್ ಇಂಡಿಯಾ ಗೆಲುವಿಗೆ, ನಾಗರೀಕರಿಗೆ ಸರಕಾರ ನೀಡಿರುವ ಆ ಹನ್ನೆರಡು ಯೋಜನೆಗಳೇನು ತಿಳಿದುಕೊಳ್ಳೋಣ.
ಕೊನೆ ಮಾತು: ಡಿಜಿಟಲ್ ಇಂಡಿಯಾ ಎನ್ನುವ ಈ ಪರಿಕಲ್ಪನೆಯಿಂದ ಸಮಾಜದಲ್ಲಿ ಕಪ್ಪು ಹಣದ ಓಟ ನಿಧಾನವಾಗುತ್ತದೆ. ಹಲವು ಹತ್ತು ಕ್ಷೇತ್ರದಲ್ಲಿ ನಡೆಯುವ ಕೆಲಸಗಳು ವೇಗವನ್ನ ಪಡೆದುಕೊಳ್ಳುತ್ತದೆ. ಒಟ್ಟಾರೆಯಾಗಿ ಸಮಾಜದ ಜನರ ಜೀವನ ಮಟ್ಟವನ್ನಸುಧಾರಿಸುತ್ತದೆ. ಗ್ಯಾಸ್ ಸಬ್ಸಿಡಿ ಇರಬಹುದು, ಪಿಂಚಣಿಯಿರಬಹುದು, ಆರೋಗ್ಯ ವಿಮೆಯ ಸೌಲಭ್ಯವಿರಬಹುದು ಇವುಗಳಲ್ಲಿ ಆಗುತ್ತಿದ್ದ ವಿಳಂಬ ಮತ್ತು ಹಣಕಾಸು ಏರುಪೇರುಗಳು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ.
ಡಿಜಿಟಲ್ ಇಂಡಿಯಾ ಎನ್ನುವ ಈ ಯೋಜನೆಯ ಮೂಲೋದ್ದೇಶಕ್ಕೆ ಚ್ಯುತಿ ಬರದಂತೆ ನಡೆಸಿಕೊಂಡು ಹೋದರೆ ಮುಂಬರುವ ದಿನಗಳಲ್ಲಿ ಜಗತ್ತಿನ ಇತರ ದೇಶಗಳಿಗೆ ಭಾರತ ಮಾದರಿ ದೇಶವಾಗಿ ನಿಲ್ಲಬಹುದು. ಕೋವಿಡ್ ಸಮಯದಲ್ಲಿ ಇದರ ಸದ್ಬಳಕೆಯಾಗಿದೆ. ಆದರೆ ವಿಶೇಷ ಎಕನಾಮಿಕ್ ಪ್ಯಾಕೇಜ್ ನಲ್ಲಿ ಹೇಳಿರುವ ಎಲ್ಲಾ ಕಾರ್ಯವನ್ನೂ ಕೂಡ ಹೀಗೆ ಡಿಜಿಟಲ್ ಇಂಡಿಯಾ ವೇದಿಕೆಯನ್ನ ಬಳಸಿಕೊಂಡು ಅತ್ಯಂತ ಶೀಘ್ರಗತಿಯಲ್ಲಿ ಹಾಳೆಯಲ್ಲಿರುವ ವಿಷಯವನ್ನ ಕಾರ್ಯಗತಗೊಳಿಸಬೇಕಿದ. ಅಷ್ಟಾದರೆ ಆರ್ಥಿಕವಾಗಿ ಮಂದಗತಿಯಲ್ಲಿರುವ ಸಮಾಜವೂ ಕೂಡ ವೇಗವಾಗಿ ಚೇತರಿಕೆ ಕಾಣುತ್ತದೆ. ಈ ವೇದಿಕೆಯನ್ನ ನಾಗರೀಕರು ಚನ್ನಾಗಿ ಬಳಸಿಕೊಳ್ಳಬೇಕಿದೆ. ಸರಕಾರವೂ ಲೋಪದೋಷಗಳ ತಿದ್ದುವ ಕೆಲಸ ಮಾಡಬೇಕಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com