ಇತ್ತೀಚೆಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಹೆರಿಗೆ ನಂತರ ಐದು ಜನ ಮಹಿಳೆಯರ ಮರಣವಾಗಿರುವುದು ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದೆ. ಸೀಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಕಳಪೆ ಗುಣಮಟ್ಟದ ಔಷಧಿ ನೀಡಿದಾಗ ಅವರಿಗೆ ಮೂತ್ರಪಿಂಡ ವೈಫಲ್ಯ, ಬಹು ಅಂಗಾಂಗ ವೈಫಲ್ಯ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡು ದೈಹಿಕ ಪರಿಸ್ಥಿತಿ ಗಂಭೀರವಾಗಿ ಕೊನೆಗೆ ಮರಣಿಸಿದ್ದಾರೆ.
ಆದರೆ ಈ ಪ್ರಕರಣಗಳಲ್ಲಿ ಎಲ್ಲಾ ನವಜಾತ ಶಿಶುಗಳು ಆರೋಗ್ಯವಾಗಿವೆ. ತಾಯಂದಿರ ಮರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈ ದಿಸೆಯಲ್ಲಿ ಸುಧಾರಣೆಗಳನ್ನು ತರಲು ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಸರ್ಕಾರ ಇನ್ನು ಮುಂದೆ ಇಂತಹ ಪ್ರಕರಣಗಳು ಆಗದಂತೆ ಕಡ್ಡಾಯವಾಗಿ ನೋಡಿಕೊಳ್ಳಬೇಕಾಗಿದೆ.
ಕಳೆದ 35 ವರ್ಷಗಳಿಂದ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲಗಳು ಮತ್ತು ಸಾಕಷ್ಟು ವೈದ್ಯಕೀಯ ಉಪಕರಣಗಳು, ವಿಶೇಷವಾಗಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇಲ್ಲ. ಸೂಕ್ತ ವೈದ್ಯರ ಅಲಭ್ಯತೆ, ಆಂಬ್ಯುಲೆನ್ಸುಗಳ ಮೂಲಕ ರೆಫರಲ್ ಆಸ್ಪತ್ರೆಗಳಿಗೆ ಸರಿಯಾಗಿ ಸಂಪರ್ಕ ಇಲ್ಲದಿರುವಿಕೆ, ರಕ್ತದ ಅಸಮರ್ಪಕ ಲಭ್ಯತೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಹಣದ ಅಸಮರ್ಪಕ ಹಂಚಿಕೆ ಕೂಡ ಪರಿಸ್ಥಿತಿಯನ್ನು ಹದಗೆಡಿಸಿದೆ.
ಸಾಮಾನ್ಯವಾಗಿ ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಬರುವ ಮಹಿಳೆಯರು ಆರ್ಥಿಕವಾಗಿ ಹಿಂದುಳಿದ ಹಳ್ಳಿಗಾಡಿನ ಜನರು ಎಂಬುದು ಸಾಮಾನ್ಯ ಸಂಗತಿ. ಅವರ ಆರೋಗ್ಯ ರಕ್ಷಣೆಗೆಂದೇ ಸರ್ಕಾರ ಆಸ್ಪತ್ರೆಗಳನ್ನು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾಕೇಂದ್ರಗಳಲ್ಲಿ ನಿರ್ಮಿಸಿದೆ. ಹಲವಾರು ಆರೋಗ್ಯ ಸೇವೆಗಳನ್ನು ಬಡಜನರಿಗೆಂದೇ ರೂಪಿಸಿದೆ. ಆದರೂ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ವೈದ್ಯರ ಚಿಕಿತ್ಸೆಯ ಜೊತೆಗೆ ಅವರ ಮನೆಯವರೂ ಹೆಚ್ಚಿನ ಕಾಳಜಿ ವಹಿಸಬೇಕಾದ ತುರ್ತು ಇಂದು ಇದೆ. ಗರ್ಭಾವಸ್ಥೆಯ ಆರಂಭದ ದಿನಗಳಿಂದಲೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ ಮುಂದೆ ಹೆರಿಗೆ ವೇಳೆ ಗಂಭೀರ ಪರಿಸ್ಥಿತಿ ಉಂಟಾಗುವುದನ್ನು ತಪ್ಪಿಸಬಹುದು.
ಗರ್ಭಿಣಿಯರು ಮೊದಲಿಗೆ ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವನೆ ಮಾಡುವುದು ಮುಖ್ಯ. ಗರ್ಭಾವಸ್ಥೆಯ ಅವಧಿಯಲ್ಲಿ ಪ್ರತಿನಿತ್ಯ ನಾರಿನಂಶ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ವಿವಿಧ ಬೇಳೆಕಾಳುಗಳು, ಹಸಿರು ತರಕಾರಿಗಳು, ತಾಜಾ ಸೊಪ್ಪುಗಳು ಮತ್ತು ಗೋಧಿ ಯಥೇಚ್ಛವಾಗಿ ನಾರಿನಂಶವನ್ನು ಒಳಗೊಂಡಿವೆ.
ಗರ್ಭಿಣಿಯರು ಒಂದೇ ಬಾರಿಗೆ ಹೊಟ್ಟೆ ತುಂಬುವಷ್ಟು ಆಹಾರಗಳನ್ನು ಸೇವಿಸಬಾರದು. ಅದರ ಬದಲಿಗೆ ದಿನಕ್ಕೆ 4 ರಿಂದ 5 ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ. ಹೀಗೆ ಮಾಡುವುದರಿಂದ ತಿಂದ ಆಹಾರವು ನಿಧಾನವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಗೆ ಹೊರೆಯಾಗುವುದಿಲ್ಲ.
ಸೀಬೆಹಣ್ಣು ಕಿತ್ತಳೆ, ನೇರಳೆ ಹಣ್ಣು ಮತ್ತಿತರ ಸಿಟ್ರಸ್ ಹಣ್ಣುಗಳನ್ನು ಪ್ರತಿದಿನ 2 ಬಾರಿ ಸೇವಿಸಿ. ಮೊಟ್ಟೆ, ಒಣದ್ರಾಕ್ಷಿ, ಖರ್ಜೂರದಂತಹ ಕಬ್ಬಿಣದ ಸಮೃದ್ಧ ಆಹಾರ ಉತ್ತಮ. ಕಾಳುಗಳು, ಮೊಳಕೆಯೊಡೆದ ಧಾನ್ಯಗಳು ಮತ್ತು ಚಿಕನ್ನಂತಹ ಪ್ರೋಟೀನ್ಭರಿತ ಆಹಾರ ಸೇವಿಸಬೇಕು. ಧಾನ್ಯಗಳು ಮತ್ತು ಬೇಳೆಕಾಳುಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವುದು ಒಳ್ಳೆಯದು.
ಪ್ರತಿ ದಿನ ಚಹಾ ಮತ್ತು ಕಾಫಿ ಸೇವನೆಯ ಅಭ್ಯಾಸ ಸಂಪೂರ್ಣವಾಗಿ ತಪ್ಪಿಸಬೇಕು. ಏಕೆಂದರೆ ಇದು ಅಜೀರ್ಣ, ಗ್ಯಾಸ್ ಮತ್ತು ಎದೆಯುರಿ ಉಂಟುಮಾಡಬಹುದು. ಇದೆಲ್ಲವೂ ಕರುಳಿನ ಮೇಲೆ ಪರಿಣಾಮ ಬೀರುತ್ತದೆ.
ದೇಹಕ್ಕೆ ವ್ಯಾಯಾಮ ಬಹಳ ಮುಖ್ಯ. ಗರ್ಭಿಣಿಯರು ತಮ್ಮ ಎರಡನೇ ತ್ರೈಮಾಸಿಕದಲ್ಲಿ ವ್ಯಾಯಾಮ ಮಾಡಲು ಪ್ರಾರಂಭಿಸಬೇಕು. ಪ್ರಾಣಾಯಾಮ ಮತ್ತು ಯೋಗದಂತಹ ಸರಳ ವ್ಯಾಯಾಮಗಳನ್ನು ಮಾಡಬೇಕು. ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಬೇಕು. ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ಕರುಳು, ದೇಹ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಇದು ಸುಗಮವಾದ ಹೆರಿಗೆಗೆ ವ್ಯಾಯಾಮ ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕ ಮತ್ತು ಮೂರನೇ ತ್ರೈಮಾಸಿಕದ ಹೊತ್ತಿಗೆ ಮಗುವಿನ ಬೆಳವಣಿಗೆ ಕ್ರಮೇಣವಾಗಿ ಹೆಚ್ಚುವುದು. ಆಗ ಹೊಟ್ಟೆಯ ಭಾಗ ಭಾರವಾಗುವುದು. ಬೆನ್ನುನೋವು, ಅಂಗಾಲು ಸೆಳೆತ ಹಾಗೂ ಆಯಾಸದ ಭಾವನೆ ಕಾಡುವುದು ಹೆಚ್ಚು. ಅಂತಹ ಸಮಯದಲ್ಲಿ ಗರ್ಭಿಣಿಯರು ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆಗ ದೀರ್ಘ ಸಮಯ ಕಾಲ ಕುಳಿತುಕೊಳ್ಳುವುದು ಅಥವಾ ಮಲಗುವುದು ಮಾಡಬಾರದು. ಕೆಲವರು ದೀರ್ಘ ಕಾಲ ನಿಂತು ಕೆಲಸ ಮಾಡುತ್ತಾರೆ. ಈ ಎರಡು ಪದ್ಧತಿಗಳು ತಪ್ಪು.ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿಯರು ಆದಷ್ಟು ಕ್ರಿಯಾಶೀಲರಾಗಿ ಇರಬೇಕು. ಲಘುವಾದ ವ್ಯಾಯಾಮ ಮತ್ತು ನಡಿಗೆ ಮಾಡಬೇಕು. ದೀರ್ಘ ಕಾಲ ವ್ಯಾಯಾಮ ಮತ್ತು ನಡಿಗೆಯಲ್ಲಿ ನಿರತರಾದರೆ ನರಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ ಮತ್ತು ಮೈ-ಕೈ ಊತ ಉಂಟಾಗುತ್ತದೆ. ಸೂಕ್ತ ಕ್ರಿಯಾಶೀಲತೆಯು ಸುಲಭ ಪ್ರಸವಕ್ಕೆ ಪ್ರೇರೇಪಣೆ ನೀಡುವುದು.
ಭಾರವಾದ ವಸ್ತುಗಳನ್ನು ಎತ್ತಬಾರದು. ಧೂಮಪಾನ, ಮದ್ಯಪಾನ ಅಥವಾ ಮಾದಕ ವಸ್ತುಗಳ ಬಳಕೆ ಒಳ್ಳೆಯದಲ್ಲ. ಇವುಗಳಿಂದ ದೂರ ಇರುವುದು ಒಳಿತು.
ಇದೆಲ್ಲದರ ಜೊತೆಗೆ ಗರ್ಭಿಣಿಯರು ಮನಸ್ಸನ್ನು ತಿಳಿಯಾಗಿಟ್ಟುಕೊಳ್ಳಬೇಕು. ಯಾವುದಕ್ಕೂ ಚಿಂತೆ ಮಾಡಬಾರದು. ಗರ್ಭಿಣಿಯನ್ನು ಮನೆಯವರು ಚೆನ್ನಾಗಿ ನೋಡಿಕೊಳ್ಳಬೇಕು.
ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿಯರು ಆದಷ್ಟು ಕ್ರಿಯಾಶೀಲರಾಗಿ ಇರಬೇಕು. ಲಘುವಾದ ವ್ಯಾಯಾಮ ಮತ್ತು ನಡಿಗೆ ಮಾಡಬೇಕು. ದೀರ್ಘ ಕಾಲ ವ್ಯಾಯಾಮ ಮತ್ತು ನಡಿಗೆಯಲ್ಲಿ ನಿರತರಾದರೆ ನರಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ ಮತ್ತು ಮೈ-ಕೈ ಊತ ಉಂಟಾಗುತ್ತದೆ. ಸೂಕ್ತ ಕ್ರಿಯಾಶೀಲತೆಯು ಸುಲಭ ಪ್ರಸವಕ್ಕೆ ಪ್ರೇರೇಪಣೆ ನೀಡುವುದು.
ಭಾರವಾದ ವಸ್ತುಗಳನ್ನು ಎತ್ತಬಾರದು. ಧೂಮಪಾನ, ಮದ್ಯಪಾನ ಅಥವಾ ಮಾದಕ ವಸ್ತುಗಳ ಬಳಕೆ ಒಳ್ಳೆಯದಲ್ಲ. ಇವುಗಳಿಂದ ದೂರ ಇರುವುದು ಒಳಿತು.
ಇದೆಲ್ಲದರ ಜೊತೆಗೆ ಗರ್ಭಿಣಿಯರು ಮನಸ್ಸನ್ನು ತಿಳಿಯಾಗಿಟ್ಟುಕೊಳ್ಳಬೇಕು. ಯಾವುದಕ್ಕೂ ಚಿಂತೆ ಮಾಡಬಾರದು. ಗರ್ಭಿಣಿಯನ್ನು ಮನೆಯವರು ಚೆನ್ನಾಗಿ ನೋಡಿಕೊಳ್ಳಬೇಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com