ಕೆಮ್ಮಿನ ಸಿರಪ್ online desk
ಅಂಕಣಗಳು

ಕೆಮ್ಮಿನ ಸಿರಪ್ ದುರಂತದಿಂದ ಕಲಿಯಬೇಕಾದ ಪಾಠ (ಕುಶಲವೇ ಕ್ಷೇಮವೇ)

ವಾಸ್ತವವಾಗಿ ಕೆಮ್ಮಿನ ಸಿರಪ್‌ಗಳಲ್ಲಿ ದ್ರಾವಕವಾಗಿ ಬಳಸುವ ಪ್ರೊಪಿಲೀನ್ ಗ್ಲೈಕಾಲ್ ಎಂಬ ಸುರಕ್ಷಿತ ವಸ್ತುವಿನ ಬದಲು ಕೆಲವು ತಯಾರಕರು ಹಣ ಉಳಿಸುವ ಉದ್ದೇಶದಿಂದ ಅಗ್ಗದ ಮತ್ತು ಅಪಾಯಕಾರಿಯಾದ ಡಿಇಜಿಯನ್ನು ಬಳಸಿದ್ದಾರೆ.

ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಸಂಭವಿಸಿದ ಕೆಮ್ಮಿನ ಸಿರಪ್ ಸಂಬಂಧಿತ ದುರಂತವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕೆಲವು ಮಕ್ಕಳು ತೀವ್ರ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದು ಈ ಘಟನೆಗಳಿಗೆ ಕಳಪೆ ಗುಣಮಟ್ಟದ ಕೆಮ್ಮಿನ ಸಿರಪ್‌ಗಳು ಕಾರಣವೆಂದು ಪ್ರಾಥಮಿಕ ತನಿಖೆಗಳಿಂದ ದೃಢಪಟ್ಟಿದೆ. ಈ ಸರಣಿ ಸಾವುಗಳು ಮಕ್ಕಳ ಆರೋಗ್ಯ ಮತ್ತು ಔಷಧಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಆರೋಗ್ಯ ಇಲಾಖೆಯಲ್ಲಿ ಗಂಭೀರ ಕಳವಳ ಮೂಡಿಸಿವೆ.

ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‌ಗಳಲ್ಲಿ ಡೈ ಇಥಿಲೀನ್ ಗ್ಲೈಕಾಲ್ (ಡಿಇಜಿ) ಎಂಬ ವಿಷಕಾರಿ ರಾಸಾಯನಿಕವು ಮಾರಕ ಪ್ರಮಾಣದಲ್ಲಿ ಪತ್ತೆಯಾಗಿದೆ. ವಾಸ್ತವವಾಗಿ ಕೆಮ್ಮಿನ ಸಿರಪ್‌ಗಳಲ್ಲಿ ದ್ರಾವಕವಾಗಿ ಬಳಸುವ ಪ್ರೊಪಿಲೀನ್ ಗ್ಲೈಕಾಲ್ ಎಂಬ ಸುರಕ್ಷಿತ ವಸ್ತುವಿನ ಬದಲು ಕೆಲವು ತಯಾರಕರು ಹಣ ಉಳಿಸುವ ಉದ್ದೇಶದಿಂದ ಅಗ್ಗದ ಮತ್ತು ಅಪಾಯಕಾರಿಯಾದ ಡಿಇಜಿಯನ್ನು ಬಳಸಿದ್ದಾರೆ. ಡಿಇಜಿ ಒಂದು ಕೈಗಾರಿಕಾ ದ್ರಾವಕವಾಗಿದ್ದು ಇದನ್ನು ಬಣ್ಣ ತಯಾರಿಕೆ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಉಪಯೋಗಿಸಲಾಗುತ್ತದೆ. ಇದು ಮಾನವ ದೇಹಕ್ಕೆ ಅತ್ಯಂತ ವಿಷಕಾರಿ. ಇದನ್ನು ಸೇವಿಸಿದಾಗ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ತೀವ್ರ ಪರಿಣಾಮ ಬೀರಿ, ಕೆಲವೇ ದಿನಗಳಲ್ಲಿ ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗುತ್ತದೆ.

ಈ ದುರಂತದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಔಷಧ ನಿಯಂತ್ರಣ ಸಂಸ್ಥೆಗಳು ತಕ್ಷಣವೇ ಕ್ರಮ ಕೈಗೊಂಡಿವೆ. ಮಕ್ಕಳಿಗೆ ಔಷಧಿಗಳನ್ನು ನೀಡುವಾಗ ಪೋಷಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಆರೋಗ್ಯ ಇಲಾಖೆಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿವೆ.

  • ವೈದ್ಯರ ಸಲಹೆ ಮುಖ್ಯ: ವೈದ್ಯರ ಸಲಹೆ ಇಲ್ಲದೆ ಯಾವುದೇ ಕೆಮ್ಮಿನ ಸಿರಪ್ ಅನ್ನು ಖರೀದಿಸಬೇಡಿ ಅಥವಾ ಬಳಸಬೇಡಿ. ಹಿಂದೆ ಬಳಸಿ ಉಳಿದಿರುವ ಅಥವಾ ಇತರರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.

  • ಎರಡು ವರ್ಷದೊಳಗಿನ ಮಕ್ಕಳಿಗೆ ಸಿರಪ್ ಕೊಡುವುದು ಬೇಡವೇ ಬೇಡ: ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ನೆಗಡಿಯ ಯಾವುದೇ ಸಿರಪ್‌ಗಳನ್ನು ವೈದ್ಯರ ನೇರ ಸಲಹೆ ಇಲ್ಲದೆ ನೀಡಬಾರದು. ಸಣ್ಣ ಮಕ್ಕಳಿಗೆ ಮನೆಮದ್ದುಗಳು ಮತ್ತು ಔಷಧಿಯೇತರ ಚಿಕಿತ್ಸೆಗಳಿಗೆ ಹೆಚ್ಚು ಒತ್ತು ನೀಡುವುದು ಸೂಕ್ತ. ಸಾಮಾನ್ಯ ಕೆಮ್ಮು ಮತ್ತು ಶೀತಕ್ಕೆ ವೈದ್ಯರನ್ನು ಕೇಳಿ, ಉಪ್ಪು ನೀರು, ಜೇನುತುಪ್ಪ ಮತ್ತು ಶುಂಠಿಯಂತಹ ಸುರಕ್ಷಿತ ಮನೆಮದ್ದುಗಳನ್ನು ಬಳಸಲು ಆದ್ಯತೆ ನೀಡಿ.

  • ಅಸಹಜ ಲಕ್ಷಣಗಳ ಬಗ್ಗೆ ಎಚ್ಚರ: ಕೆಮ್ಮಿನ ಸಿರಪ್ ಸೇವಿಸಿದ ನಂತರ ಮಗುವಿನಲ್ಲಿ ವಾಂತಿ, ಅತಿಸಾರ, ಕಡಿಮೆ ಮೂತ್ರ ವಿಸರ್ಜನೆ, ಉಸಿರಾಟದ ತೊಂದರೆ, ಅತಿಯಾದ ನಿದ್ರಾವಸ್ಥೆ ಅಥವಾ ಗೊಂದಲ ಮುಂತಾದ ಯಾವುದೇ ಅಸಹಜ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಹತ್ತಿರದ ತಜ್ಞ ವೈದ್ಯರನ್ನು ಸಂಪರ್ಕಿಸಿ.

  • ಗುಣಮಟ್ಟ ಪರಿಶೀಲನೆ: ಔಷಧದ ಅವಧಿಯ ದಿನಾಂಕ ಮತ್ತು ಲೇಬಲ್ಲನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಸರ್ಕಾರವು ನಿಷೇಧಿಸಿರುವ ಅಥವಾ ಕಳಪೆ ಗುಣಮಟ್ಟದ್ದೆಂದು ವರದಿಯಾದ ಸಿರಪ್‌ಗಳನ್ನು ಖರೀದಿಸಬಾರದು.

ಈ ಘಟನೆಗಳ ನಂತರ ಕಳಪೆ ಔಷಧ ತಯಾರಿಕೆಯಲ್ಲಿ ಭಾಗಿಯಾದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಹಲವು ಘಟಕಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಭಾರತದ ಕೆಲವು ಸಿರಪ್‌ಗಳ ಬಗ್ಗೆ ಜಾಗತಿಕ ಎಚ್ಚರಿಕೆ ನೀಡಿದೆ. ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆಗಳು ಉತ್ಪಾದನಾ ಘಟಕಗಳ ಮೇಲೆ ತಪಾಸಣೆಗಳನ್ನು ತೀವ್ರಗೊಳಿಸಿವೆ.

ಔಷಧಿ ತಯಾರಕರ ಮೇಲೆ ನಿಯಂತ್ರಣ ಹೇಗೆ?

ಪ್ರಸ್ತುತ ಅನೇಕ ಔಷಧಿ ತಯಾರಕರು ತಮ್ಮದೇ ಆಂತರಿಕ ಪ್ರಯೋಗಾಲಯ ವರದಿಗಳನ್ನು ಅವಲಂಬಿಸಿರುತ್ತಾರೆ. ಇದನ್ನು ಬದಲಿಗೆ ಸರ್ಕಾರವು ಸ್ವತಂತ್ರ ಮತ್ತು ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ನಿಯಮಿತವಾಗಿ ಸಿರಪ್ ಮಾದರಿಗಳ ಕಡ್ಡಾಯ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ಪರೀಕ್ಷಾ ವೆಚ್ಚವನ್ನು ತಯಾರಕರಿಂದಲೇ ಪಡೆಯಬಹುದು.

ಕೇಂದ್ರ ಅಥವಾ ರಾಜ್ಯ ಸರ್ಕಾರವು ಒಂದು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಬೇಕು. ಇದು ಸಾರ್ವಜನಿಕರಿಗೆ ಯಾವುದೇ ಔಷಧದ ಬ್ಯಾಚ್ ಸಂಖ್ಯೆಯನ್ನು ನಮೂದಿಸಲು ಮತ್ತು ಅದರ ಇತ್ತೀಚಿನ ಗುಣಮಟ್ಟದ ಪರಿಶೀಲನೆ ಸ್ಥಿತಿಯನ್ನು ತಕ್ಷಣ ತಿಳಿದುಕೊಳ್ಳಲು ಅನುವು ಮಾಡಿಕೊಡಬೇಕು.

ಕೆಲವು ದುರಂತ ಪ್ರಕರಣಗಳಲ್ಲಿ ಕಳಪೆ ಸಿರಪ್‌ಗಳನ್ನು ವೈದ್ಯರೇ ಶಿಫಾರಸು ಮಾಡಿದ್ದು ಕಂಡುಬಂದಿದೆ. ವೈದ್ಯರು ಕೂಡ ಕೇವಲ ಬ್ರಾಂಡ್ ಹೆಸರಿನ ಬದಲಿಗೆ, ಔಷಧದಲ್ಲಿರುವ ಸಕ್ರಿಯ ಪದಾರ್ಥಗಳ ಸುರಕ್ಷತೆ ಬಗ್ಗೆ ಅರಿತುಕೊಳ್ಳುವುದು ಕಡ್ಡಾಯವಾಗಬೇಕು. ಪ್ರಾಣಕ್ಕೆ ಹಾನಿ ಮಾಡುವ ಡಿಇಜಿಯಂತಹ ವಿಷಕಾರಿ ವಸ್ತುವನ್ನು ಸೇರಿಸುವುದು "ಕಳಪೆ ಗುಣಮಟ್ಟ" ಎಂದು ಪರಿಗಣಿಸದೇ ನೇರವಾಗಿ "ವೈದ್ಯಕೀಯ ಅಪರಾಧಿಕ ನಿರ್ಲಕ್ಷ್ಯ" ಎಂದು ಪರಿಗಣಿಸಿ ತಯಾರಕರು ಮತ್ತು ಜವಾಬ್ದಾರಿಯುತ ರಾಸಾಯನಿಕ ವಿಶ್ಲೇಷಕರಿಗೆ ಜೀವಾವಧಿ ಶಿಕ್ಷೆಯಂತಹ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು. ಇದು ಇತರರಿಗೆ ತಡೆಯಾಗಿ ಕಾರ್ಯನಿರ್ವಹಿಸುತ್ತದೆ.

ಔಷಧ ಉದ್ಯಮದ ಪಾತ್ರ

ಔಷಧ ಉದ್ಯಮವು ಮನುಷ್ಯರ ಆರೋಗ್ಯ ಮತ್ತು ಜೀವದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಲಾಭಕ್ಕಾಗಿ ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ರಾಜಿ ಮಾಡಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಕೆಮ್ಮಿನ ಸಿರಪ್ ದುರಂತವು ನಮ್ಮ ದೇಶದ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಮತ್ತು ತಯಾರಿಕಾ ಪ್ರಕ್ರಿಯೆಯಲ್ಲಿನ ಅನೈತಿಕತೆಯನ್ನು ಎತ್ತಿ ತೋರಿಸಿದೆ.

ಕೊನೆಮಾತು: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಬಳಸದಿರುವುದು, ಮತ್ತು ಔಷಧದ ಬಗ್ಗೆ ಎಚ್ಚರ ವಹಿಸುವುದು ಈ ಸವಾಲನ್ನು ಎದುರಿಸಲು ಪ್ರಮುಖ ಮಾರ್ಗವಾಗಿದೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಜವಾಬ್ದಾರಿಯುತ ಔಷಧ ಬಳಕೆ ಮತ್ತು ನಿರಂತರ ಜಾಗರೂಕತೆಯು ನಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಸುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ನನಗೆ ಬೇಕಿರುವುದು ಅದೊಂದೆ...": ರಷ್ಯಾ-ಯುಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ಗೆ ಪುತಿನ್ ಷರತ್ತು; ಈಡೇರುತ್ತಾ 11 ವರ್ಷಗಳ ಗುರಿ?

ದೊಡ್ಡವರ ಮನೆಗೆ ಹೋಗಬಾರದಿತ್ತು: ಶಾರುಖ್ ಖಾನ್ ಮನೆ ಪಾರ್ಟಿಯಲ್ಲಿ ಆದ ಕಹಿ ಅನುಭವ ಬಿಚ್ಚಿಟ್ಟ ನಟ ಗುಲ್ಶನ್ ದೇವಯ್ಯ!

ಬೆಳಗಾವಿ 'ಡಿಸಿಸಿ ಬ್ಯಾಂಕ್' ಚುನಾವಣೆ: ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಮಾರಾಮಾರಿ!

Belagavi: ದನ ಕಾಯುತ್ತಿದ್ದವ ಈಗ 260 ದೇಶಿಯ ಭತ್ತದ ತಳಿಗಳ ಸಂರಕ್ಷಕ! ಮೌನ ಕ್ರಾಂತಿಯ ರೈತ ಶಂಕರ್ ಲಂಗಟಿ ಯಶೋಗಾಥೆ!

ದೊಡ್ಡಬಳ್ಳಾಪುರ: "ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ"; ಕೃತಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ!

SCROLL FOR NEXT