ಕ್ರಿಕೆಟ್

ಕೊನೆಯ ಓವರ್ ನಲ್ಲಿ ಪಾಂಡ್ಯಾಗೆ ಧೋನಿ ಹೇಳಿದ್ದೇನು?

Srinivas Rao BV

ಬೆಂಗಳೂರು: ಕೊನೆಯ ಎಸೆತದ ವರೆಗೂ ಅಭಿಮಾನಿಗಳಲ್ಲಿ ಎದೆ ಬಡಿತ ಹೆಚ್ಚಿಸಿದ್ದ ಬಾಂಗ್ಲಾ- ಭಾರತ ನಡುವೆ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಧೋನಿ ಹಾರ್ದಿಕ್ ಪಾಂಡ್ಯಾಗೆ ಹೇಳಿದ್ದೇನು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಉಭಯ ತಂಡಗಳಿಗೂ ನಿರ್ಣಾಯಕವಾಗಿದ್ದ ಕೊನೆಯ ಓವರ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯಾಗೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಯಾವುದೇ ಕಾರಣಕ್ಕೂ ಯಾರ್ಕರ್ ಎಸೆತ ಮಾಡಬಾರದೆಂದು ಸಲಹೆ ನೀಡಿದ್ದರಂತೆ. ಧೋನಿಯ ಈ ಸಲಹೆಯೇ ಭಾರತ ತಂಡದ ರೋಚಕ ಜಯಕ್ಕೆ ಕಾರಣವಾಗಿದೆ.

ಪಂದ್ಯ ಮುಕ್ತಾಯಗೊಂಡ ಬಳಿಕ ಮಾತನಾಡಿದ ಧೋನಿ, ತಮ್ಮ ಸಲಹೆಯನ್ನು ಯಶಸ್ವಿಯಾಗಿ ಕಾರ್ಯಗಗೊಳಿಸಿದ ಹಾರ್ದಿಕ್ ಪಾಂಡ್ಯರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. " ಕೊನೆಯ ಓವರ್ ನಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದೆವು. ಅದರಲ್ಲಿ ಹಾರ್ದಿಕ್ ಪಾಂಡ್ಯ ರ್ಯಾರ್ಕರ್ ಎಸೆತ ಮಾಡಬಾರದೆಂಬುದು ಸ್ಪಷ್ಟವಾಗಿತ್ತು. ಲೈನ್ ಹಾಗೂ ಲೆಂತ್ ನ್ನು ಗಮನದಲ್ಲಿಟ್ಟುಕೊಂಡು ಬೌಲ್ ಮಾಡಬೇಕೆಂದು ಹಾರ್ದಿಕ್ ಪಾಂಡ್ಯಾಗೆ ಸಲಹೆ ನೀಡಲಾಗಿತ್ತು ಎಂದು ಧೋನಿ ತಿಳಿಸಿದ್ದಾರೆ.

ಪಂದ್ಯ ಗೆಲ್ಲಲು ಕಾರ್ಯತಂತ್ರ ರೂಪಿಸುವುದು ಸುಲಭ ಆದರೆ ಅದನ್ನು ಕಾರ್ಯಗತಗೊಳಿಸುವುದು ಸವಾಲಿನ ಕೆಲಸ, ಅದನ್ನು ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಧೋನಿ ಪಾಂಡ್ಯ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಕೊನೆಯ ಓವರ್ ನಲ್ಲಿ ಧೋನಿ ಆಶಿಶ್ ನೆಹ್ರಾ ಅವರೊಂದಿಗೂ ಚರ್ಚೆ ನಡೆಸಿದ್ದರಾದರೂ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿಲ್ಲ. " ಕೊನೆಯ ಓವರ್ ನಲ್ಲಿ ನಡೆದ ಎಲ್ಲಾ ಚರ್ಚೆಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಧೋನಿ ತಿಳಿಸಿದ್ದಾರೆ. 20 ನೇ ಓವರ್ ನಲ್ಲಿ ಧೋನಿ ಕಾರ್ಯತಂತ್ರ ರೂಪಿಸಲು 12 ನಿಮಿಷ ಹೆಚ್ಚು  ಸಮಯ ತೆಗೆದುಕೊಂಡರು, ಈ ಬಗ್ಗೆ ಮಾತನಾಡಿರುವ ಧೋನಿ 20 ನೇ ಓವರ್ ಪ್ರಾರಂಭವಾದ ನಂತರ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಬಹುದು ಹಾಗಾಗಿ ನನಗೆ ದಂಡ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SCROLL FOR NEXT