ನವದೆಹಲಿ: ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇಂದಿನಿಂದ ಆರಂಭವಾಗಿರುವ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದ್ದು, 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇದು ಕೊನೆಯ ಪಂದ್ಯವಾಗಿದೆ. ಹೀಗಾಗಿ ಈಗಾಗಲೇ ಸರಣಿಯಲ್ಲಿ 1-0 ಅಂತರದಲ್ಲಿ ಭಾರತ ಮುಂದಿದ್ದು, ಈ ಸರಣಿಯಲ್ಲಿ ಸಮಬಲ ಸಾಧಿಸಲು ಶ್ರೀಲಂಕಾ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿ ಇದ್ದರೆ, ಭಾರತ ತಂಡ ಈ ಪಂದ್ಯದ ಗೆಲುವಿನ ಮೂಲಕ ಅಥವಾ ಡ್ರಾಮಾಡಿಕೊಳ್ಳುವ ಮೂಲಕ ಸರಣಿಯನ್ನು ಕೈ ವಶ ಮಾಡಿಕೊಳ್ಳಲು ಬಯಸಿದೆ.
ಇನ್ನು ಭಾರತದ ವಿರುದ್ಧದ ಏಕದಿನ ಮತ್ತು ಟ್ವೆಂಟಿ 20 ಸರಣಿಗೆ ನಾಯಕತ್ವ ಬದಲಿಸಿರುವುದರಿಂದ ಈ ಪಂದ್ಯದಲ್ಲಿ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೋರಿಸಬೇಕಾದ ಅನಿವಾರ್ಯ ಸ್ಥಿತಿ ಶ್ರೀಲಂಕಾ ತಂಡದ ನಾಯಕ ಚಾಂಡಿಮಲ್ ಅವರಿಗೆ ಒದಗಿದೆ. ಹೀಗಾಗಿ ಈ ಪಂದ್ಯದಲ್ಲಿ ಶತಾಗತಯಾ ಜಯ ಸಾಧಿಸಲೇ ಬೇಕು ಎಂದು ಲಂಕಾ ತಂಡ ಹೋರಾಡುವ ಸಾಧ್ಯತೆ ಇದೆ.
ಇನ್ನು 2ನೇ ಪಂದ್ಯದ ಗೆಲುವಿನ ಮೂಲಕ ಭಾರತ ಆತ್ಮವಿಶ್ವಾಸದ ಅಲೆಯಲ್ಲಿದೆ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಸರಣಿ ಭಾರತದ ಪಾಲಾಗಲಿದೆ. ಇದು ಸಾಧ್ಯವಾದರೆ ತಂಡ ನಿರಂತರ ಒಂಬತ್ತು ಟೆಸ್ಟ್ ಸರಣಿಗಳಲ್ಲಿ ಜಯದ ದಾಖಲೆಯನ್ನು ಸರಿಗಟ್ಟಲಿದೆ. ಆಸ್ಟ್ರೇಲಿಯಾದ ಹೆಸರಿನಲ್ಲಿ ಈಗ ಈ ದಾಖಲೆ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos