ನವದೆಹಲಿ: ದೆಹಲಿಯಲ್ಲಿನ ಮಾಲಿನ್ಯ ಹಿನ್ನಲೆಯಲ್ಲಿ ನಿನ್ನೆ ಶ್ರೀಲಂಕಾ ಆಟಗಾರರು ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು.
ಅಲ್ಲದೇ ಲಂಕಾ ಬೌಲರ್ ಗಳು ಮಾಲಿನ್ಯದಿಂದ ತೀವ್ರ ಉಸಿರಾಟದ ಸಮಸ್ಯೆಗೆ ಗುರಿಯಾಗಿ ಡ್ರೆಸ್ಸಿಂಗ್ ರೂಂನಲ್ಲಿ ವಾಂತಿ ಸಹ ಮಾಡಿಕೊಂಡಿದ್ದಾರೆ ಎಂದು ಶ್ರೀಲಂಕಾದ ಕೋಚ್ ನಿಕ್ ಪೊಥಾಸ್ ಹೇಳಿದ್ದಾರೆ.
ದೆಹಲಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮಾಲಿನ್ಯವಿದೆ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಪಂದ್ಯದ ನಡುವೆ ಲಂಕಾದ ಕೆಲ ಬೌಲರ್ ಗಳು ಡ್ರೆಸ್ಸಿಂಗ್ ರೂಂಗೆ ಬಂದು ವಾಂತಿ ಮಾಡಿಕೊಂಡರು. ಮಾಲಿನ್ಯದಿಂದ ಉಸಿರಾಟ ಸಮಸ್ಯೆ ಮತ್ತು ಕಿರಿಕಿರಿ ಸಾಮಾನ್ಯವಾಗಿರುತ್ತದೆ. ಆದರೆ ಹೊಗೆಯಿಂದಾಗಿ ವಾಂತಿ ಆಗುವುದು ವಿರಳ ಎಂದು ಪಂದ್ಯ ಮುಕ್ತಾಯದ ಬಳಿಕ ನಿಕ್ ಪೊಥಾಸ್ ಹೇಳಿದ್ದಾರೆ.
ಬೌಲಿಂಗ್ ಮಾಡಲು ಲಂಕಾ ಆಟಗಾರರು ಪದೇ ಪದೇ ಅಡಚಣೆ ಮಾಡಿದ್ದರಿಂದ ಪಂದ್ಯ 26 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ಇನ್ನು ಪಂದ್ಯವನ್ನು ನಿಲ್ಲಿಸುವಂತೆ ಲಂಕಾ ನಾಯಕ ಅಂಪೈರ್ ಗಳಲ್ಲಿ ಮನವಿ ಮಾಡಿದ್ದರಿಂದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು ಮೂರು ವಿಕೆಟ್ ಬಾಕಿ ಇರುವಂತೆ 536 ರನ್ ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಲಂಕಾ ತಂಡ ಎರಡನೇ ದಿನದಾಟ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ವಾಯು ಮಾಲಿನ್ಯ ಹಿನ್ನೆಲೆ ಆಟಗಾರರು ಮಾಸ್ಕ್ ಹಾಕಿಕೊಂಡು ಮೈದಾನಕ್ಕೆ ಇಳಿದಿದ್ದು ಇದೇ ಮೊದಲ ಪ್ರಕರಣವಾಗಿದೆ.