ಕೋಲ್ಕತ್ತ: ರಣಜಿ ತ್ರೋಫಿ ಕ್ರಿಕೆಟ್ ಸರಣಿ ಪ್ರಾರಂಬದಿಂದ ಒಂದೂ ಸೋಲು ಕಾಣದೆ ಸೆಮಿ ಫೈನಲ್ಸ್ ತಲುಪಿದ್ದ ಕರ್ನಾಟಕ ತಂಡ ವಿದರ್ಭದ ಎದುರು 5 ರನ್ ವೀರೋಚಿತ ಸೋಲು ದಾಖಲಿಸಿದೆ. ಇದರೊಡನೆ ಕರ್ನಾಟಕದ ಫೈನಲ್ ಕನಸು ನುಚ್ಚು ನೂರಾಗಿದೆ.
ನಾಲ್ಕನೇ ದಿನದ ಅಂತ್ಯಕ್ಕೆ 111 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಕಡೆಯ ದಿನದಾಟದಲ್ಲಿ ಗೆಲ್ಲಲು ಅಗತ್ಯವಾಗಿದ್ದ 87 ರನ್ ಗಳಿಸುವಲ್ಲಿ ವಿಫಲವಾಯಿತು. ಈ ನಡುವೆ ಅಭಿಮನ್ಯು ಮಿಥುನ್ (33) ಮತ್ತು ಶ್ರೇಯಸ್ ಗೋಪಾಲ್ (23*) ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ವಿದರ್ಭ ಪರ ರಜನೀಶ್ ಗುರ್ಬಾನಿ ಮಾರಕ ಬೌಲಿಂಗ್ ದಾಳಿಗೆ ಕರ್ನಾಟಕದ ಆಟಗಾರರು ಬೆದರುಗೊಂಬೆಗಳಾದರು.
ರಜನೀಶ್ ಗರ್ಬಾನಿ 68 ರನ್ಗಳನ್ನು ಖರ್ಚು ಮಾಡಿ 7 ವಿಕೆಟ್ ಸಂಪಾದಿಸುವ ಮೂಲಕ ವಿದರ್ಭ ತಂದದ ಗೆಲುವಿಗೆ ಕಾರಣಕರ್ತರಾದರು. ಇವರು ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳಿಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದರು.ಹೀಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗರ್ಬಾನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಮುಂದಿನ ಫೈನಲ್ ಪಂದ್ಯ ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿದ್ದು ವಿದರ್ಭ ತಂಡ ದೆಹಲಿಯೊಡನೆ ಸೆಣಸಲಿದೆ.
ಈ ಸೋಲಿನೊಡನೆ ಕರ್ನಾಟಕವು 3 ವರ್ಷಗಳ ಬಳಿಕ ರಣಜಿ ಟೂರ್ನಿ ಫೈನಲ್ ತಲುಪುವ ಅವಕಾಶವನ್ನು ಕಳೆದುಕೊಂಡಿದೆ.