ಮುಂಬೈ: ಮಹತ್ವದೆ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ನಿಂದ ಬಿಸಿಸಿಐಗೆ ನೇಮಕವಾಗಿದ್ದ ಆಡಳಿತ ಮಂಡಳಿ ಸದಸ್ಯರು ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಅವರ ಅವಧಿಯಲ್ಲಿ ನೇಮಕವಾಗಿದ್ದ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ.
ಮೂಲಗಳ ಪ್ರಕಾರ ಈ ಹಿಂದೆ ಲೋಧಾ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಹಲವು ಸಿಬ್ಬಂದಿಗಳನ್ನು ವಜಾಮಾಡಲಾಗಿದ್ದು, ಈ ಬಗ್ಗೆ ಫೆಬ್ರವರಿ 1 ರಂದು ನಡೆದ ಸಿಒಎ ಸಭೆಯಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿದುಬಂದಿದೆ. ಈ ಪೈಕಿ ಬಿಸಿಸಿಐ ಅಧ್ಯಕ್ಷರ ಸಲಹೆಗಾರರಾಗಿದ್ದ ಅಮೃತ್ ಮಾಥುರ್ ಅವರ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಲಾಗಿದೆ. ಅದರಂತೆ ಅವರ ಸ್ಥಾನಕ್ಕೆ ಮತ್ತೋರ್ವ ಅಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ. ಅಮೃತ್ ಮಾಥುರ್ ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ನಿರ್ವಹಣಾ ಮುಖ್ಯಸ್ಥರೂ ಕೂಡ ಆಗಿದ್ದಾರೆ.
ನಿನ್ನೆಯಷ್ಟೇ ದೆಹಲಿ ಕ್ರಿಕೆಟ್ ಕಚೇರಿಯ ಅಧಿಕಾರಿ ಮತ್ತು ಮಾಧ್ಯಮ ನಿರ್ವಾಹಕ ಅರೋರಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರ ಬೆನ್ನಲ್ಲೇ ದೆಹಲಿ ಕ್ರಿಕೆಟ್ ಕಚೇರಿಯಲ್ಲಿನ ಬಹುತೇಕ ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಇದಲ್ಲದೆ ಬಿಸಿಸಿಐ ಅಧ್ಯಕ್ಷರ ಕಚೇರಿ ಹಾಗೂ ಕಾರ್ಯದರ್ಶಿಗಳ ಕಚೇರಿಯ ಬಹುತೇಕ ಅಧಿಕಾರಿಗಳನ್ನು ಬಿಸಿಸಿಐನ ನೂತನ ಆಡಳಿತ ಮಂಡಳಿ ವಜಾ ಮಾಡಿ ಆದೇಶ ಹೊರಡಿಸಿದೆ.
ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡದ ಹಿನ್ನಲೆಯಲ್ಲಿ ಈ ಹಿಂದೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಅಲ್ಲದೆ ಅವರ ಸ್ಥಾನಕ್ಕೆ ರಾಮಚಂದ್ರ ಗುಹಾ ನೇತೃತ್ವದ ಉನ್ನತ ಮಟ್ಟದ ಆಡಳಿತ ಸಮಿತಿಯನ್ನು ನೇಮಕ ಮಾಡಿತ್ತು.