ಈಡೆನ್ ಗಾರ್ಡನ್: ಕೋಲ್ಕತಾದ ಈಡೆನ್ ಗಾರ್ಡನ್ ನಲ್ಲಿ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತಂಡ 5 ರನ್ ಗಳ ಜಯ ಗಳಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡವನ್ನು ವೈಟ್ ವಾಷ್ ಮಾಡುವ ಭಾರತದ ಕನಸು ಭಗ್ನವಾಗಿದೆ.
ಕೊನೆಯ ಓವರ್ ನ 5 ನೇ ಎಸೆತದಲ್ಲಿ ಕೇದಾರ್ ಜಾಧವ್ ವಿಕೆಟ್ ಉರುಳಿದ ಬೆನ್ನಲ್ಲೇ ಅಂತಿಮ ಓವರ್ ವರೆಗೂ ಜೀವಂತವಾಗಿದ್ದ ಭಾರತದ ಗೆಲುವಿನ ಭರವಸೆ ಕಮರಿತು. ಆಕ್ರಮಣಕಾರಿ ಬೌಲಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಆರಂಭದಿಂದಲೂ ವೇಗವಾಗಿ ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಗೆ ವಿರಾಟ್ ಕೋಹ್ಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಆದಿಯಾಗಿ ಪ್ರಮುಖ ಬ್ಯಾಟ್ಸ್ ಮನ್ ಗಳು ತತ್ತರಿಸಿ ಪೆವಿಲಿಯನ್ ಪರೇಡ್ ನಡೆಸಿದರು.
ಇಂಗ್ಲೆಂಡ್ ತಂಡ ನೀಡಿದ್ದ 322 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ಆರಂಭಿಕ ಆಟಗಾರ ಅಜಿಂಕ್ಯಾ ರಹಾನೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ವಿರಾಟ್ ಕೋಹ್ಲಿ-ಯುವರಾಜ್ ಸಿಂಗ್ ಆಟದ ಮೇಲೆ ಭರವಸೆ ಮೂಡಿತ್ತಾದರೂ, ಕೇವಲ 102 ರನ್ ಗಳನ್ನು ಕಲೆ ಹಾಕಿದ್ದ ಭಾರತ 19 ನೇ ಓವರ್ ನಲ್ಲಿ ವಿರಾಟ್ ಕೋಹ್ಲಿ ವಿಕೆಟ್(52), 25 ನೇ ಓವರ್ ನಲ್ಲಿ ಯುವರಾಜ್ ಸಿಂಗ್ (45) ವಿಕೆಟ್ ಕಳೆದುಕೊಂಡು ಮತ್ತೆ ಅಘಾತ ಎದುರಿಸಿತು. ನಂತರ ಬಂದ ಕೇದಾರ್ ಜಾಧವ್- ಹಾರ್ದಿ ಪಾಂಡ್ಯ ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ 100 ಕ್ಕೂ ರನ್ ಗಳ ಮೊತ್ತವನ್ನು ಕಲೆಹಾಕಿದರು. ಆದರೆ ಹಾರ್ದಿಕ್ ಪಾಂಡ್ಯ 56 ರನ್ ಗಳಿಸುತ್ತಿದ್ದಂತೆಯೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. ನಂತರ ಏಕಾಂಗಿ ಹೋರಾಟ ನಡೆಸಿದ ಕೇದಾರ್ ಜಾಧವ್ ಅಂತಿಮ ಓವರ್ ನಲ್ಲಿ 1 ಎಸೆತ ಬಾಕಿ ಇರುವಂತೆ ವಿಕೆಟ್ ಒಪ್ಪಿಸಿದರು. ಕೊನೆಯ ಎರಡು ಎಸೆತಗಳಲ್ಲಿ 6 ರನ್ ಕಲೆ ಹಾಕಬೇಕಿದ್ದ ಭಾರತದ ಬ್ಯಾಟ್ಸ್ ಮನ್ ಗಳಾದ ಭುವನೇಶ್ವರ್ ಕುಮಾರ್, ಬೂಮ್ರಾ ಅವರನ್ನು ರನ್ ಕದಿಯದಂತೆ ಕಟ್ಟಿದ ಇಂಗ್ಲೆಂಡ್ ಜಯ ಗಳಿಸಿತು.
ಬೆನ್ ಸ್ಟೋಕ್ಸ್ ಪಂದ್ಯ ಪುರುಷೋತ್ತಮ, ಕೇದಾರ್ ಜಾಧವ್ ಸರಣಿ ಶ್ರೇಷ್ಠ
ಇಂಗ್ಲೆಂಡ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೇದಾರ್ ಜಾಧವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos