ಮುಂಬೈ: ಭಾರತ ಎ ಮತ್ತು ಅಂಡರ್ 19 ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿದ್ದ ರಾಜೇಶ್ ಸಾವಂತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ಭಾನುವಾರ ನಡೆದಿದೆ.
ದಕ್ಷಿಣ ಮುಂಬೈನ ಹೊಟೆಲ್ ಕೋಣೆಯಲ್ಲಿ ರಾಜೇಶ್ ಸಾವಂತ್ ಮೃತದೇಹ ಪತ್ತೆಯಾಗಿದ್ದು, ಸಾವಿನ ಕುರಿತಂತೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಮೂಲಗಳ ಪ್ರಕಾರ ಇಂದು ಬೆಳಗಿನ ಹೊತ್ತಿಗೆ ರಾಜೇಶ್ ಕ್ರಿಕೆಟ್ ತರಬೇತಿಗೆ ಆಗಮಿಸಬೇಕಿತ್ತು. ಆದರೆ ಅವರು ತರಬೇತಿ ಆಗಮಿಸದ ಹಿನ್ನಲೆಯಲ್ಲಿ ಸಿಬ್ಬಂದಿಗಳು ಅವರ ಕೊಠಡಿಗೆ ಆಟಗಾರನನ್ನು ಕಳುಹಿಸಿದ್ದಾರೆ. ಈ ವೇಳೆ ರಾಜೇಶ್ ಸಾವನ್ನಪ್ಪಿರುವ ವಿಚಾರ ಬಯಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಸಿಸಿಐ ಮ್ಯಾನೇಜರ್ ರತ್ನಾಕರ್ ಶೆಟ್ಟಿ ಅವರು, ಹೃದಯಾಘಾತದಿಂದ ರಾಜೇಶ್ ಮೃತಪಟ್ಟಿರುವ ಸಾಧ್ಯತೆಗಳಿವೆ. ಆದರೂ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದು. ತನಿಖೆ ನಡೆಸುತ್ತಿದ್ದಾರೆ. ರಾಜೇಶ್ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಆಫ್ಘಾನಿಸ್ತಾನದ ವಿರುದ್ಧ ನಡೆದ ಸರಣಿಯಲ್ಲಿ ಭಾರತ ಎ ತಂಡಕ್ಕೆ ರಾಜೇಶ್ ತರಬೇತಿ ನೀಡಿದ್ದರು. ಈ ತಂಡಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ದ್ರಾವಿಡ್ ಅವರು ಪ್ರಧಾನ ಕೋಚ್ ಆಗಿದ್ದರು. ಅಂತೆಯೇ ರಾಜೇಶ್ ಶೇಷ ಭಾರತ ತಂಡಕ್ಕೂ ತರಬೇತಿ ನೀಡಿದ್ದು, ಈ ಹಿಂದೆ ನಡೆದ ಇರಾನ್ ಕಪ್ ನಲ್ಲಿ ಗುಜರಾತ್ ತಂಡವನ್ನು ಈ ತಂಡ ಎದುರಿಸಿತ್ತು.