ವಡೋದರಾ: ಗುಜರಾತ್ನ ವಡೋದರಾದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಕ್ರಿಕೆಟ್ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ಮತ್ತು ಟ್ರೋಫಿ ನೀಡುವ ಬದಲು ಹಸುಗಳನ್ನು ಬಹುಮಾನವಾಗಿ ನೀಡಿದ ಅಪರೂಪದ ಘಟನೆ ಭಾನುವಾರ ನಡೆದಿದೆ.
ಗೋ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದ್ದ ರಾಬ್ರಿ ಸಮುದಾಯದ ಮುಖಂಡರು ಗೆದ್ದವರಿಗೆ ಹಸುಗಳನ್ನು ಬಹುಮಾನವಾಗಿ ನೀಡಿದ್ದಾರೆ.
ಗೋವುಗಳು ನಮ್ಮ ಸಮಾಜದ ಬಹುಮುಖ್ಯಭಾಗ, ಅವುಗಳನ್ನು ರಕ್ಷಿಸಬೇಕಾದುದು ನಮ್ಮ ಕರ್ತವ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ಈ ಟೂರ್ನಿಯ ಉದ್ದೇಶವಾಗಿತ್ತು. ಗೋವುಗಳಿಗೆ ರಾಷ್ಟ್ರೀಯ ಪ್ರಾಣಿ ಎಂಬ ಮಾನ್ಯತೆ ಸಿಗಬೇಕು. ರಾಷ್ಟ್ರೀಯ ಪ್ರಾಣಿ ಎಂದು ಗೋವುಗಳನ್ನು ಘೋಷಿಸಿದಾಗ ಮಾತ್ರ ಅವುಗಳ ರಕ್ಷಣೆ ಸಾಧ್ಯ ಎಂದು ಟೂರ್ನಿಯ ಆಯೋಜಕರು ಹೇಳಿದ್ದಾರೆ.
ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಬಹುಮಾನ ಪಡೆದವರಿಗೆ ಹಸು ಮತ್ತು ತಂಡದ ಉಳಿದ ಸದಸ್ಯರಿಗೆ ಗಿರ್ ತಳಿಯ ಕರುಗಳನ್ನು ಬಹುಮಾನವಾಗಿ ನೀಡಲಾಗಿದೆ.