ನವದೆಹಲಿ: ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಕಳೆದ ನಾಲ್ಕು ತಿಂಗಳಿನಿಂದ ತಂಡವನ್ನು ಮುನ್ನಡೆಸುತ್ತಿದ್ದು ಇಂದಿನ ಫೈನಲ್ ಪಂದ್ಯದ ಬಳಿಕ ಭಾರತ ಬಿಟ್ಟು ತೆರಳುವ ಮುನ್ನ ಭಾವನಾತ್ಮಕ ಸಂದೇಶವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಭಾರತ ಪ್ರವಾಸದಲ್ಲಿದ್ದು ಇಂದಿನ ಐಪಿಎಲ್ ಫೈನಲ್ ಪಂದ್ಯದ ಬಳಿಕ ನಾನು ಭಾರತ ಬಿಟ್ಟು ಹೋಗುತ್ತಿದ್ದೇನೆ. ಎಲ್ಲಾ ಭಾರತೀಯರಿಗೂ ಧನ್ಯವಾದ. ಈ ನಾಲ್ಕು ತಿಂಗಳಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ. ಹಲವಾರು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಐಪಿಎಲ್ 10ನೇ ಆವೃತ್ತಿ ನನಗೆ ಅವಿಶ್ವಸನೀಯವಾಗಿತ್ತು ಎಂದು ಬರೆದಿದ್ದಾರೆ.
ಇನ್ನು ಐಪಿಎಲ್ ಗೂ ಮುನ್ನ ನಡೆದ ಭಾರತದ ವಿರುದ್ಧದ ಟೆಸ್ಟ್ ಸರಣಿಯು ಸಾಕಷ್ಟು ವಿವಾದಗಳಿಂದ ಕೂಡಿತ್ತು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆಗಿನ ಜಟಾಪಟಿ ಬಳಿಕ ಸ್ಮಿತ್ ಐಪಿಎಲ್ ನಲ್ಲಿ ಭಾಗವಹಿಸಿದ್ದರು. ಆದರೆ ವಿವಾದಗಳ ಬಗ್ಗೆ ಉಲ್ಲೇಖಿಸದ ಸ್ಮಿತ್ ಟೆಸ್ಟ್ ಸರಣಿಯು ಕಠಿಣವಾಗಿದ್ದರೂ ಆಸೀಸ್ ತಂಡದ ಭಾಗವಾಗಿ ಆನಂದಿಸಿದ್ದೇನೆ. ಕೆಲವು ಅತ್ಯುತ್ತಮ ಆಟಗಾರರನ್ನು ಭೇಟಿಯಾಗಿದ್ದೇನೆ. ಹಾಗೆಯೇ ಕೆಲವು ಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದೇನೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ 10ನೇ ಆವೃತ್ತಿಯ ಫೈನಲ್ ಪಂದ್ಯ ಸ್ಮಿತ್ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos