ಆಶೀಶ್ ನೆಹ್ರಾ (ಸಂಗ್ರಹ ಚಿತ್ರ)
ನವದೆಹಲಿ: ನಾನಾಡಿದ ತವರಿನಲ್ಲಿ ವೃತ್ತಿಬದುಕಿಗೆ ನಿವೃತ್ತಿ ಘೋಷಣೆ ಮಾಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದು ಭಾರತ ತಂಡದ ಹಿರಿಯ ವೇಗಿ ಆಶೀಶ್ ನೆಹ್ರಾ ಹೇಳಿದ್ದಾರೆ.
ನಿವೃತ್ತಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಆಶೀಶ್ ನೆಹ್ರಾ, ನನ್ನ 18 ವರ್ಷಗಳ ಸುಧೀರ್ಘ ಕ್ರಿಕೆಟ್ ಬದುಕಿನ ಕುರಿತಂತೆ ನನ್ನಲ್ಲಿ ಸಾರ್ಥಕ ಭಾವವಿದೆ. ನಾನು ಕ್ರಿಕೆಟ್ ಕಲಿತ ಮತ್ತು ನನ್ನನ್ನು ಬೆಳೆಸಿದ ತವರಿನ ಅಭಿಮಾನಿಗಳ ಮುಂದೆ ನಿವೃತ್ತಿ ಘೋಷಣೆ ಮಾಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದೆನಿಸುತ್ತಿದೆ ಎಂದು ಹೇಳಿದರು. ಇದೇ ವೇಳೆ ನನ್ನ ನಿರ್ಧಾರದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ ಎಂದು ಸ್ಪಷ್ಟಪಡಿಸಿದ ನೆಹ್ರಾ, ನವೆಂಬರ್ 1ರಂದು ದೆಹಲಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯವೇ ನನ್ನ ವೃತ್ತಿ ಬದುಕಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಹೇಳಿದ್ದಾರೆ.
"ಆಶಿಶ್ ನೆಹ್ರಾ ತಂಡದಲ್ಲಿ ಯಾಕೆ ಇರಬಾರದು ಎನ್ನುವ ಬದಲು ಯಾಕೆ ಇದ್ದಾರೆ ಎಂದು ಜನ ಪ್ರಶ್ನಿಸುವ ಮುನ್ನ ನಿವೃತ್ತಿ ಆದರೆ ಒಳ್ಳೆಯದು. ನಿವೃತ್ತಿ ಕುರಿತು ಟೀಮ್ ಮ್ಯಾನೇಜ್ವೆುಂಟ್ ಹಾಗೂ ಆಯ್ಕೆ ಸಮಿತಿ ಸದಸ್ಯರೊಂದಿಗೂ ಮಾತನಾಡಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಎಲ್ಲ ಪಂದ್ಯಗಳನ್ನು ಆಡಬೇಕು ಎನ್ನುವ ಮನಸ್ಥಿತಿಯಲ್ಲಿ ನಾನು ಬಂದಿದ್ದೆ. ಆದರೆ, ಯುವ ತಂಡ ಜವಾಬ್ದಾರಿ ಹೊರಲು ಸಿದ್ಧವಾಗಿರುವಂತೆ ಕಂಡಿದ್ದು, ನನ್ನ ನಿವೃತ್ತಿಗೆ ಇದೇ ಸಕಾಲ ಎಂದೆನಿಸತ್ತಿದೆ. ದೆಹಲಿಯಲ್ಲಿ ನಡೆಯಲಿರುವ ಪಂದ್ಯ ನನ್ನ ಕೊನೆಯ ವೃತ್ತಿಪರ ಪಂದ್ಯವಾಗಿರಲಿದೆ. ತವರಿನ ಅಭಿಮಾನಿಗಳ ಮುಂದೆ ನಿವೃತ್ತಿಯಾಗುವುದಕ್ಕಿಂತ ವಿಶೇಷ ಖುಷಿಯ ಕ್ಷಣ ಇನ್ನೊಂದಿಲ್ಲ. ಇದೇ ಮೈದಾನದಲ್ಲಿ 20 ವರ್ಷಗಳ ಹಿಂದೆ ಮೊದಲ ರಣಜಿ ಪಂದ್ಯವಾಡಿದ್ದೆ" ಎಂದು ನೆಹ್ರಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos