ಮುಂಬೈ: ಕ್ರಿಕೆಟ್ ನಿಂದ ನಿಷೇಧಕ್ಕೆ ಒಳಗಾಗಿರುವ ಶ್ರೀಶಾಂತ್ ಅವರು ಯಾವುದೇ ದೇಶದ ತಂಡವನ್ನೂ ಪ್ರತಿನಿಧಿಸುವಂತಿಲ್ಲ ಎಂದು ಬಿಸಿಸಿಐ ಖಡಕ್ ಪ್ರತಿಕ್ರಿಯೆ ನೀಡಿದೆ.
ಶ್ರೀಶಾಂತ್ ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಆಜೀವ ನಿಷೇಧಕ್ಕೆ ಒಳಗಾಗಿರು ಶ್ರೀಶಾಂತ್ ವಿದೇಶಿ ತಂಡದ ಪರವಾಗಿಯೂ ಕ್ರಿಕೆಟ್ ಆಡುವಂತಿಲ್ಲ ಎಂದು ಹೇಳಿದೆ. ಆ ಮೂಲಕ ವಿದೇಶೀ ತಂಡದ ಪರ ಆಡುವ ಶ್ರೀಶಾಂತ್ ಕನಸೂ ಭಗ್ನವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ಅವರು, ಐಸಿಸಿ ನಿಮಯದ ಪ್ರಕಾರ, ಯಾವುದೇ ಆಟಗಾರನೂ ತನ್ನ ಮಾತೃ ಸಂಸ್ಥೆಯಿಂದ ನಿಷೇಧಕ್ಕೊಳಗಾದರೆ ವಿದೇಶೀ ತಂಡವನ್ನು ಪ್ರತಿನಿಧಿಸುವ ಅವಕಾಶವಿಲ್ಲ. ಇದು ಶ್ರೀಶಾಂತ್ ಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
2013ರಲ್ಲಿ ನಡೆದಿದ್ದ ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿದ್ದ ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ 2015ರಲ್ಲಿ ಪಾಟಿಯಾಲ ಕೋರ್ಟ್ ಶ್ರೀಶಾಂತ್, ಅಂಕಿತ್ ಚೌಹ್ವಾಣ್, ಅಜಿತ್ ಚಾಂಡೀಲಾ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಆದರೆ ಇತ್ತೀಚೆಗೆ ಕೇರಳ ಹೈಕೋರ್ಟ್ ಬಿಸಿಸಿಐ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದರೊಂದಿಗೆ ಮತ್ತೆ ದೇಶದ ಪರ ಕ್ರಿಕೆಟ್ ಆಡುವ ಶ್ರೀಶಾಂತ್ ಕನಸು ಭಗ್ನಗೊಂಡಿತ್ತು.